ಪಾಕಿಸ್ತಾನಕ್ಕೆ ಸಂಚರಿಸುವ ಮತ್ತೊಂದು ರೈಲು ರದ್ದುಗೊಳಿಸಿದ ಭಾರತ
ನವದೆಹಲಿ, ಆಗಸ್ಟ್ 16: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಭಾರತದ ನಿರ್ಧಾರವು ಪಾಕಿಸ್ತಾನವನ್ನು ವಿಚಲಿತಗೊಳಿಸಿದ್ದು, ಉಭಯ ರಾಷ್ಟ್ರಗಳ ಸಂಬಂಧ ಮತ್ತಷ್ಟು ಹದಗೆಡುತ್ತಿದೆ. ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟಿನ ಜತೆಗೆ, ಸಾರಿಗೆ ಸಂಪರ್ಕವನ್ನೂ ಅಂತ್ಯಗೊಳಿಸಲಾಗುತ್ತಿದೆ.
ಜೋಧಪುರ ಮತ್ತು ಪಾಕಿಸ್ತಾನದ ಮನಬಾವೋ ನಡುವೆ ಸಂಚರಿಸುತ್ತಿದ್ದ ಥಾರ್ ಲಿಂಕ್ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ಭಾರತ ರದ್ದುಗೊಳಿಸಿ ಶುಕ್ರವಾರ ಆದೇಶ ಹೊರಡಿಸಿದೆ. ಪ್ರತಿ ಶನಿವಾರ ಮಾತ್ರ ಸಂಚರಿಸುವ ಈ ರೈಲು ಜೋಧಪುರದ ಹೊರವಲಯದ ಭಗತ್ ಕಿ ಕೋಥಿ ರೈಲ್ವೆ ನಿಲ್ದಾಣದಿಂದ ಅಂತಾರಾಷ್ಟ್ರೀಯ ಗಡಿಯ ಮೂಲಕ ಮುನಬಾವೋ ತಲುಪುತ್ತಿತ್ತು.
ಸಂಜೋತಾ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ಅಂತಾರಾಷ್ಟ್ರೀಯ ಗಡಿಯವರೆಗೆ ಸೀಮಿತಗೊಳಿಸಿ ಭಾರತೀಯ ರೈಲ್ವೆ ಭಾನುವಾರ ಪ್ರಕಟಿಸಿತ್ತು. ಈ ರೈಲು ದೆಹಲಿಯಿಂದ ಪಾಕಿಸ್ತಾನದ ಅಟ್ಟಾರಿಗೆ ಪ್ರತಿ ಭಾನುವಾರ ತೆರಳಿ ವಾಪಸಾಗುತ್ತಿತ್ತು. ಪ್ರಯಾಣಿಕರು ರೈಲು ಬದಲಾವಣೆ ಮಾಡಲು ಅನುಕೂಲವಾಗುವಂತೆ ಪಾಕಿಸ್ತಾನವು ಸಂಜೋತಾ ಎಕ್ಸ್ಪ್ರೆಸ್ಅನ್ನು ಲಾಹೋರ್ ಮತ್ತು ಅಟ್ಟಾರಿ ನಡುವೆ ಓಡಿಸುತ್ತಿತ್ತು.

ಆದರೆ, ಲಾಹೋರ್-ಅಟ್ಟಾರಿ ನಡುವಿನ ರೈಲು ಸಂಚಾರವನ್ನು ಪಾಕಿಸ್ತಾನ ರದ್ದುಗೊಳಿಸಿತ್ತು. ಹೀಗಾಗಿ ಭಾರತ ಕೂಡ ದೆಹಲಿ-ಅಟ್ಟಾರಿ ನಡುವಣ ರೈಲು ಸಂಚಾರವನ್ನು ಸ್ಥಗಿತಗೊಳಿಸಿತ್ತು.












Click it and Unblock the Notifications