ನ.17ಕ್ಕೆ ತೃಪ್ತಿ ದೇಸಾಯಿ ಜತೆ ಆರು ಮಹಿಳೆಯರು ಶಬರಿಮಲೆ ದೇಗುಲಕ್ಕೆ, ರಕ್ಷಣೆಗಾಗಿ ಮನವಿ
ನವದೆಹಲಿ, ನವೆಂಬರ್ 14 : ವಾರ್ಷಿಕ ದರ್ಶನಕ್ಕಾಗಿ ಎರಡು ತಿಂಗಳ ಕಾಲ ನವೆಂಬರ್ 17ರಂದು ಶಬರಿಮಲೆ ದೇಗುಲದ ಬಾಗಿಲು ತೆಗೆಯಲಿದ್ದು, ಅಂದು ಪ್ರಾರ್ಥನೆ ಸಲ್ಲಿಸಲು ಯೋಜನೆ ಹಾಕಿಕೊಂಡಿದ್ದೇನೆ ಎಂದು ಪುಣೆ ಮೂಲದ ಮಹಿಳಾ ಹಕ್ಕುಗಳ ಕಾರ್ಯಕರ್ತೆ ತೃಪ್ತಿ ದೇಸಾಯಿ ಬುಧವಾರ ಹೇಳಿದ್ದಾರೆ.
ಭೂಮಾತಾ ಬ್ರಿಗೇಡ್ ನ ಸ್ಥಾಪಕಿ ತೃಪ್ತಿ ದೇಸಾಯಿ ಮಹಿಳಾ ಹಕ್ಕುಗಳಿಗಾಗಿ ತಮ್ಮ ಸಂಸ್ಥೆ ಮೂಲಕ ಹೋರಾಟ ನಡೆಸುತ್ತಿದ್ದಾರೆ. ತಮ್ಮ ಯೋಜನೆ ಬಗ್ಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿದ್ದು, ಆಕೆ ಭೇಟಿ ನೀಡುವ ವೇಳೆ ಪೊಲೀಸ್ ರಕ್ಷಣೆಯನ್ನು ಕೇಳಿದ್ದಾರೆ.
"ಕೇರಳ ಮುಖ್ಯಮಂತ್ರಿಗಳು ಹಾಗೂ ಡಿಜಿಪಿಗೆ ಪತ್ರ ಬರೆದಿದ್ದೇನೆ. ನವೆಂಬರ್ 17ರಂದು ಶಬರಿಮಲೆ ದೇಗುಲಕ್ಕೆ ದರ್ಶನಕ್ಕೆ ಬರುವ ಯೋಜನೆ ಇದೆ ಎಂದು ತಿಳಿಸಿದ್ದೇನೆ" ಎಂಬುದಾಗಿ ತೃಪ್ತಿ ದೇಸಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ತೃಪ್ತಿ ಅವರ ಜತೆಗೆ ಆರು ಮಹಿಳೆಯರು ದೇಗುಲ ಪ್ರವೇಶ ಮಾಡಲಿದ್ದು, ಶುಕ್ರವಾರ ಕೇರಳಕ್ಕೆ ಬರಲಿದ್ದಾರೆ.

ಕೇರಳಕ್ಕೆ ಬಂದಿಳಿದ ಕ್ಷಣದಿಂದ ರಾಜ್ಯದಿಂದ ತೆರಳುವ ತನಕ ಪೊಲೀಸ್ ರಕ್ಷಣೆ ನೀಡಬೇಕು ಎಂದು ಕೇಳಿಕೊಂಡಿದ್ದಾರೆ. ಯಾವುದೇ ಅಡೆ ತಡೆ ಎದುರಾದರೂ ನಾವು ದೇವಾಲಯದಲ್ಲಿ ದರ್ಶನ ಪಡೆದೇ ಪಡೆಯುತ್ತೇವೆ ಎಂದು ತೃಪ್ತಿ ದೇಸಾಯಿ ಹೇಳಿದ್ದಾರೆ.
ದೇವಸ್ಥಾನದ ಸಂಪ್ರದಾಯ ಮುರಿಯಲು ಮಹಿಳೆಯರು ಮುಂದಾದರೆ, ಅವರ ಮುಂದೆ ಮಲಗಿಯಾದರೂ ಆ ಪ್ರಯತ್ನವನ್ನು ತಡೆಯುತ್ತೇವೆ ಎಂದು ಸಾಮಾಜಿಕ ಕಾರ್ಯಕರ್ತ ರಾಹುಲ್ ಈಶ್ವರ್ ಹೇಳಿದ್ದಾರೆ.
ಎಲ್ಲ ವಯಸ್ಸಿನ ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಬಹುದು ಎಂಬ ಸುಪ್ರೀಂ ಕೋರ್ಟ್ ನ ಈ ಹಿಂದಿನ ತೀರ್ಪಿಗೆ ತಡೆ ನೀಡಲು ಸಾಧ್ಯವಿಲ್ಲ. ಮೇಲ್ಮನವಿ ಪರಿಶೀಲನೆ ಅರ್ಜಿಯನ್ನು ಮುಂದಿನ ಜನವರಿ ಇಪ್ಪತ್ತೆರಡರಂದು ಕೈಗೆತ್ತಿಕೊಳ್ಳಲಾಗುವುದು ಎಂದು ಕೋರ್ಟ್ ತಿಳಿಸಿದೆ.












Click it and Unblock the Notifications