ಕೈಮುಗಿದು ಕೇಳುತ್ತೇನೆ, ದಯವಿಟ್ಟು ಕೃಷಿ ಕಾಯ್ದೆ ರದ್ದುಪಡಿಸಿ: ಅರವಿಂದ್ ಕೇಜ್ರಿವಾಲ್
ನವದೆಹಲಿ, ಡಿಸೆಂಬರ್ 28: ಕೈಮುಗಿದು ಕೇಳುತ್ತೇನೆ ದಯವಿಟ್ಟು ಕೃಷಿ ಕಾಯ್ದೆಯನ್ನು ರದ್ದುಪಡಿಸಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿ ಪ್ರದೇಶಕ್ಕೆ ಭಾನುವಾರ ಕೇಜ್ರಿವಾಲ್ ಎರಡನೇ ಬಾರಿಗೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, 'ಕೇಂದ್ರದ ಯಾವುದೇ ಸಚಿವರು ರೈತರೊಂದಿಗೆ ಮುಕ್ತವಾದ ಚರ್ಚೆ ನಡೆಸುವ ಸವಾಲು ಸ್ವೀಕರಿಸಲಿ ಹಾಗೂ ಈ ಕಾಯ್ದೆಗಳು ಎಷ್ಟು ಉಪಯುಕ್ತ ಅಥವಾ ಹಾನಿಕಾರಕ ಎಂಬುದು ಅದರಿಂದ ತಿಳಿಯುತ್ತದೆ. ರೈತರು ಅವರ ಉಳಿವಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರೈತರು ತಮ್ಮ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದು, ದಯಮಾಡಿ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಕಾಯ್ದೆಗಳು ಅವರ ಭೂಮಿಯನ್ನು ಅವರಿಂದ ಕಸಿದುಬಿಡುತ್ತವೆ. ಕೇಂದ್ರ ಸರ್ಕಾರವನ್ನು ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ, ದಯಮಾಡಿ 3 ಕೃಷಿ ಕಾಯ್ದೆಗಳನ್ನು ರದ್ದುಪಡಿಸಿ ಎಂದು ಹೇಳಿದರು.
ಸಿಂಘು ಗಡಿ ಪ್ರದೇಶ ಅಷ್ಟೇ ಅಲ್ಲದೆ, ಪಂಜಾಬ್, ಹರ್ಯಾಣ ಹಾಗೂ ಉತ್ತರ ಪ್ರದೇಶದ ರೈತರು ದೆಹಲಿಯ ಇತರೆ ಗಡಿ ಪ್ರದೇಶಗಳಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ.
ರೈತರು ಕಳೆದ 32 ದಿನಗಳಿಂದ ತೀವ್ರ ಚಳಿಯ ನಡುವೆಯೂ ತೆರೆದ ಬೀದಿಗಳಲ್ಲಿ ಮಲಗುತ್ತಿದ್ದಾರೆ. ಏಕೆ? 40 ಕ್ಕೂ ಹೆಚ್ಚು ಜನರು ಇಲ್ಲಿ ಪ್ರಾಣ ಕಳೆದುಕೊಂಡಿರುವುದು ನನಗೆ ನೋವು ತಂದಿದೆ. ಅವರ ಮಾತುಗಳನ್ನು ಕೇಳಿ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ನಾನು ಕೇಂದ್ರಕ್ಕೆ ಮನವಿ ಮಾಡುತ್ತೇನೆ ಎಂದು ಕೇಜ್ರಿವಾಲ್ ಹೇಳಿದರು.
ದೆಹಲಿ-ಹರ್ಯಾಣ ಗಡಿ ಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಡಿಸೆಂಬರ್ 7ರಂದು ಕೇಜ್ರಿವಾಲ್ ಮೊದಲ ಬಾರಿಗೆ ಭಾಗಿಯಾಗಿದ್ದರು. ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಹ ಜೊತೆಗಿದ್ದರು. ಈ ವೇಳೆ ದೆಹಲಿ ಸರ್ಕಾರದಿಂದ ಪ್ರತಿಭಟನಾ ನಿರತ ರೈತರಿಗಾಗಿ ಕೈಗೊಳ್ಳಲಾಗಿರುವ ವ್ಯವಸ್ಥೆಯ ಬಗ್ಗೆ ಕೇಜ್ರಿವಾಲ್ ತಮ್ಮ ಮೊದಲ ಭೇಟಿಯಲ್ಲಿ ಪರಿಶೀಲಿಸಿದ್ದರು.
ಕೃಷಿ ಕಾಯ್ದೆಗಳ ಕುರಿತು ಮಾತುಕತೆಗೆ ಪ್ರಧಾನಿ ಮೋದಿ ಕರೆಗೆ ಉತ್ತರಿಸಿರುವ ರೈತ ಸಂಘಟನೆಗಳು, ಮಾತುಕತೆಗೆ ದಿನಾಂಕ ನಿಗದಿ ಮಾಡಿವೆ. ಡಿ.29ರಂದು ಮಾತುಕತೆ ನಡೆಸಬಹುದು ಎಂದು ಸರ್ಕಾರಕ್ಕೆ ಪತ್ರ ಬರೆದಿವೆ.
ಶುಕ್ರವಾರ ರೈತರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಬಿಕ್ಕಟ್ಟು ಕೊನೆಗೊಳಿಸಲು ಮಾತುಕತೆಗೆ ಆಹ್ವಾನ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಶನಿವಾರ ಮಧ್ಯಾಹ್ನ ರೈತ ಸಂಘ ಸಭೆ ನಡೆಸಿದ್ದು, ಆರನೇ ಸುತ್ತಿನ ಮಾತುಕತೆಗೆ ಡಿ. 29ಕ್ಕೆ ದಿನಾಂಕ ಮಾಡಿವೆ.
"ಆರನೇ ಸುತ್ತಿನ ಮಾತುಕತೆ ನಡೆಸಲು ಸರ್ಕಾರದ ಮುಂದೆ ಪ್ರಸ್ತಾವ ಇಟ್ಟಿದ್ದೇವೆ. ಡಿ.29ರ ಮಂಗಳವಾರ, ಬೆಳಿಗ್ಗೆ 11 ಗಂಟೆಗೆ ಮಾತುಕತೆ ನಡೆಸಬಹುದು ಎಂದು ತಿಳಿಸಿದ್ದೇವೆ" ಎಂದು ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ತಿಳಿಸಿದ್ದಾರೆ. ಸರ್ಕಾರದೊಂದಿಗೆ ಕಾಯ್ದೆ ಕುರಿತು ನಾಲ್ಕು ಅಂಶಗಳನ್ನು ಮುಂದಿನ ವಾರ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications