ಅಪ್ಪನ ನೆರವಿಗೆ ಬಂದ ಮಗಳು: ಬಿಜೆಪಿ ವಿರುದ್ಧ ಕೇಜ್ರಿವಾಲ್ ಮಗಳ ವಾಗ್ದಾಳಿ
ನವದೆಹಲಿ, ಫೆಬ್ರವರಿ 05: ಬಿಜೆಪಿ ನಾಯಕರಿಂದ ಕಾರಣವಿಲ್ಲದೆ ದೂಷಣೆಗೆ ಒಳಗಾಗುತ್ತಿರುವ ಅರವಿಂದ ಕೇಜ್ರಿವಾಲ್ ನೆರವಿಗೆ ಧಾವಿಸಿದ್ದಾಳೆ ಮಗಳು ಹರ್ಷಿತಾ ಕೇಜ್ರಿವಾಲ್.
ಸುದ್ದಿವಾಹಿನಿ ಜೊತೆ ಮಾತನಾಡಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮಗಳು ಹರ್ಷಿತಾ ಕೇಜ್ರಿವಾಲ್, ಬಿಜೆಪಿ ನಾಯಕರು ತಂದೆಯನ್ನು ಭಯೋತ್ಪಾದಕ ಎಂದು ಕರೆದಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
'ರಾಜಕೀಯ ಹೊಲಸು ಎಂದು ಹೇಳುತ್ತಾರೆ ಆದರೆ ಅವರು (ಬಿಜೆಪಿ) ರಾಜಕೀಯನ್ನು ಇನ್ನಷ್ಟು ಹೊಲಸುಗೊಳಿಸುವಲ್ಲಿ ನಿರತರಾಗಿದ್ದಾರೆ' ಎಂದಿದ್ದಾರೆ.

'ಮಕ್ಕಳಿಗೆ ಶಿಕ್ಷಣ ನೀಡುವುದು, ಉತ್ತಮ ಆರೋಗ್ಯ ನೀಡುವುದು, ಶಾಲೆಗಳನ್ನು-ಆಸ್ಪತ್ರೆಗಳನ್ನು ನಿರ್ಮಿಸುವುದು, ನೀರು-ವಿದ್ಯುತ್ ಅನ್ನು ಉಚಿತವಾಗಿ ನೀಡುವುದು ಭಯೋತ್ಪಾದನೆಯೇ?' ಎಂದು ಹರ್ಷಿತಾ ಕೇಜ್ರಿವಾಲ್ ಪ್ರಶ್ನೆ ಮಾಡಿದ್ದಾರೆ.
'ಬಿಜೆಪಿಯವರು 200 ಸಂಸದರು, 11 ಸಿಎಂ ಗಳನ್ನು ದೆಹಲಿಗೆ ಕರೆತಂದಿದ್ದಾರೆ. ಕರೆತರಲಿ ನಮಗೆ ಚಿಂತೆಯಿಲ್ಲ, ಎಎಪಿ ಪರವಾಗಿ ನಾವು ಮಾತ್ರ ಪ್ರಚಾರ ಮಾಡುತ್ತಿಲ್ಲ, ದೆಹಲಿಯ 2 ಕೋಟಿ ಜನರೂ ಪ್ರಚಾರ ಮಾಡುತ್ತಿದ್ದಾರೆ' ಎಂದು ಹೇಳಿದ್ದಾರೆ.
ಪಿಯೂಷ್ ಗೋಯಲ್ ಸೇರಿದಂತೆ ಇನ್ನೂ ಕೆಲವು ಬಿಜೆಪಿ ನಾಯಕರು ಅರವಿಂದ ಕೇಜ್ರಿವಾಲ್ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅರವಿಂದ ಕೇಜ್ರಿವಾಲ್, 'ನನ್ನನ್ನು ಹೇಗೆ ಅವರು ಭಯೋತ್ಪಾದಕ ಎಂದು ಕರೆಯಬಲ್ಲರು. ದೆಹಲಿಯ ಜನರ ಸೇವೆಗಾಗಿ ನನ್ನ ಜೀವನವನ್ನು ನಾನು ಮುಡುಪಿಟ್ಟಿದ್ದೇನೆ. ಶಾಲೆ, ಆಸ್ಪತ್ರೆ ಕಟ್ಟಿಸಿದ್ದೇನೆ. ಕುಡಿಯುವ ನೀರು, ವಿದ್ಯುತ್ ಅನ್ನು ನೀಡಿದ್ದೇನೆ, ದೆಹಲಿ ಕುಟುಂಬದ ಹಿರಿಯ ಮಗನಂತೆ ಕೆಲಸ ಮಾಡಿದ್ದೇನೆ' ಎಂದಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆ ಮತದಾನವು ಫೆಬ್ರವರಿ 8 ರಂದು ನಡೆಯಲಿದೆ. ಫೆಬ್ರವರಿ 11 ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications