ಕರ್ನಾಟಕ ಹಿಜಾಬ್ ವಿವಾದ; ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ನವದೆಹಲಿ, ಸೆ.22: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಎತ್ತಿ ಹಿಡಿದಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ವಿವಿಧ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತನ್ನ ತೀರ್ಪು ಕಾಯ್ದಿರಿಸಿದೆ.
ರಾಜ್ಯದ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದರ ಮೇಲಿನ ನಿಷೇಧ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮತ್ತು ನ್ಯಾಯಾಮೂರ್ತಿ ಸುಧಾಂಶು ಧುಲಿಯಾ ಅವರ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಆದೇಶವನ್ನು ಕಾದಿರಿಸಿದೆ.
ಶಾಲಾ-ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಬಾರದೇಕೆ?: ಸುಪ್ರೀಂಕೋರ್ಟ್ ಪ್ರಶ್ನೆ
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕರ್ನಾಟಕದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವಡಗಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಕೆ.ಎಂ. ನಟರಾಜ್ ರಾಜ್ಯದ ಪರವಾಗಿ ವಾದ ಮಂಡಿಸಿದ್ದರು. ಇನ್ನುಳಿದಂತೆ ಕಪಿಲ್ ಸಿಬಲ್, ಕಾಲಿನ್ ಗೊನ್ಸಾಲ್ವಿಸ್, ದೇವದತ್ ಕಾಮತ್, ದುಷ್ಯಂತ್ ದಾವೆ ಮತ್ತು ಸಲ್ಮಾನ್ ಖುರ್ಷಿದ್ ಅರ್ಜಿದಾರರ ಪರ ವಾದ ಮಂಡಿಸಿದ್ದಾರೆ.
ಹಿಜಾಬ್ ಕುರಿತ ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ
ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ವಿವಿಧ ಅರ್ಜಿಗಳ ವಿಚಾರಣೆಯನ್ನು ಗುರುವಾರ ಸುಪ್ರೀಂ ಕೋರ್ಟ್ ನಡೆಸಿದ್ದು, ತೀರ್ಪು ಕಾಯ್ದಿರಿಸಿದೆ.
ಸುಪ್ರೀಂ ಕೋರ್ಟ್ನಲ್ಲಿ ಮುಸ್ಲಿಂ ಅರ್ಜಿದಾರರನ್ನು ಪ್ರತಿನಿಧಿಸುವ ಹಿರಿಯ ವಕೀಲ ದುಷ್ಯಂತ್ ದಾವೆ, "ನಂಬಿಗಸ್ತರಿಗೆ ಇದು (ಹಿಜಾಬ್) ಅತ್ಯಗತ್ಯ. ನಂಬಿಕೆಯಿಲ್ಲದವರಿಗೆ ಇದು ಅನಿವಾರ್ಯವಲ್ಲ" ಎಂದರು.
ಮುಸ್ಲಿಂ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಅನುಮತಿ ನೀಡುವುದರ ಮೂಲಕ ಬೇರೆ ವಿದ್ಯಾರ್ಥಿಗಳಿಗೆ ವೈವಿಧ್ಯತೆಯ ಪರಿಚಯವಾಗುತ್ತದೆ ಎಂದು ಬುಧವಾರ ಸುಪ್ರೀಂ ಕೋರ್ಟ್ ಹೇಳಿದೆ.
ಇದು ಸಮವಸ್ತ್ರದಿಂದಲ್ಲ, ಆಯೋಗದ ಲೋಪಗಳಿಂದ ನಡೆದಿದೆ
"ಇದು ಸಮವಸ್ತ್ರದ ಬಗ್ಗೆ ಅಲ್ಲ. ಆಯೋಗದ ಕ್ರಮಗಳು ಮತ್ತು ಸಂಭವಿಸಿದ ಲೋಪಗಳ ಕ್ರಿಯೆಗಳ ಸರಣಿಯಿಂದ ಆಗಿದೆ. ನಾನು ಯಾವುದೇ ವ್ಯಕ್ತಿ ಅಥವಾ ಯಾರನ್ನೂ ದೂಷಿಸುತ್ತಿಲ್ಲ, ಆದರೆ ಈ ಆಯೋಗ ಮತ್ತು ಅವರ ಲೋಪವು ಅಲ್ಪಸಂಖ್ಯಾತ ಸಮುದಾಯಗಳನ್ನು ಅಂಚಿನಲ್ಲಿಡುವ ಕ್ರಿಯೆ ಎಂದು ತೋರಿಸುತ್ತದೆ" ಎಂದು ಕೆಲವು ಮೇಲ್ಮನವಿದಾರರನ್ನು ಪ್ರತಿನಿಧಿಸುವ ಹಿರಿಯ ವಕೀಲ ದುಷ್ಯಂತ್ ದವೆ, ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠಕ್ಕೆ ತಿಳಿಸಿದರು.
ವಕೀಲ ದವೆ, "ಲವ್ ಜಿಹಾದ್" ನಂತಹ ವಿವಾದಗಳನ್ನು ಉಲ್ಲೇಖಿಸಿದರು. "ನಾವು ಇಂದು ನೋಡುತ್ತಿರುವ ರೀತಿಯ ವಾತಾವರಣದ ಬೆಳಕಿನಲ್ಲಿ ಈ ಪ್ರಕರಣವನ್ನೂ ಪರಿಗಣಿಸಬೇಕಾಗಿದೆ. ಇದು ನಾವು 5,000 ವರ್ಷಗಳಿಗಿಂತ ಹಿಂದೆ ಹೋಗುತ್ತಿದ್ದೇವೆ ಎಂಬುದನ್ನು ತೋರಿಸುತ್ತದೆ" ಎಂದು ಹೇಳಿದರು.
ಹಿಜಾಬ್ನಿಂದ ವಿದ್ಯಾರ್ಥಿಗಳಿಗೆ ವೈವಿಧ್ಯತೆಯ ಪರಿಚಯವಾಗುತ್ತದೆ
ಮುಸ್ಲಿಂ ವಿದ್ಯಾರ್ಥಿಗಳಿಗೆ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಅನುಮತಿ ನೀಡುವುದರ ಮೂಲಕ ಬೇರೆ ವಿದ್ಯಾರ್ಥಿಗಳಿಗೆ ವೈವಿಧ್ಯತೆಯ ಪರಿಚಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಹಿಜಾಬ್ ಅನ್ನು ಸಾಂಸ್ಕೃತಿಕವಾಗಿ ಸಂವೇದನಾಶೀಲರಾಗಿಸುವಲ್ಲಿ ಒಂದು ಅವಕಾಶವಾಗಿ ಏಕೆ ನೋಡಬಾರದು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ಗುರುವಾರ ವಿಚಾರಣೆ ಬಳಿಕೆ ಆದೇಶ ಕಾಯ್ದಿರಿಸಿದೆ.
ಹೈಕೋರ್ಟ್ ಆದೇಶಕ್ಕೆ ಆಕ್ರೋಶ, ಸುಪ್ರೀಂಗೆ ಮೇಲ್ಮನವಿ
ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿದ್ದ ಕರ್ನಾಟಕ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಮಾರ್ಚ್ 15 ರಂದು ಎತ್ತಿಹಿಡಿದಿತ್ತು. ಕಾಲೇಜು ಕ್ಯಾಂಪಸ್ಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಲು ರಾಜ್ಯದ ಸರ್ಕಾರಿ ಕಾಲೇಜುಗಳಿಗೆ ಅಧಿಕಾರ ನೀಡಿತು.
ಆದೇಶದ ಬೆನ್ನಲ್ಲೇ ರಾಜ್ಯದಲ್ಲಿ ಭಾರಿ ಆಕ್ರೋಶ ಉಂಟಾಗಿತ್ತು. ಹಲವು ಮಂದಿ ಈ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದ್ದ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋಟ್್ಗೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿಗಳ ವಿಚಾರಣೆಗೆ ಸುಪ್ರೀಂಕೋರ್ಟ್ ಪೀಠ ರಚಿಸಿತ್ತು.