ಅಭಿನಂದನ್ ಅವರ ತಂದೆಯಿಂದ ಮನಮಿಡಿಯುವ ಮಾತುಗಳು
ನವದೆಹಲಿ, ಫೆಬ್ರವರಿ 28 : "ಸ್ನೇಹಿತರೆ, ನಿಮ್ಮೆಲ್ಲರ ಕಾಳಜಿಗೆ, ಪ್ರಾರ್ಥನೆಗಳಿಗೆ ಧನ್ಯವಾದಗಳು. ದೇವರ ದಯೆಯಿಂದ ಅಭಿನಂದನ್ ಜೀವಂತವಾಗಿದ್ದಾನೆ, ಗಾಯಗೊಂಡಿಲ್ಲ, ಮಾನಸಿಕವಾಗಿಯೂ ದೃಢವಾಗಿದ್ದಾನೆ. ಧೈರ್ಯವಾಗಿ ಆತ ಮಾತಾಡಿರುವ ರೀತಿ ನೋಡಿ... ಆತನೇ ನಿಜವಾದ ಸೈನಿಕ... ಆತನ ಬಗ್ಗೆ ನಮಗೆ ಅಭಿಮಾನವಿದೆ."
ಹೀಗೆಂದು ಅಭಿಮಾನ ತುಂಬಿದ ಭಾವುಕತೆಯ ಮಾತನ್ನಾಡಿರುವವರು, ಪಾಕಿಸ್ತಾನದಲ್ಲಿ ಸೇನೆಯ ವಶದಲ್ಲಿರುವ ಭಾರತದ ವಾಯು ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ತಂದೆ, ಏರ್ ಮಾರ್ಷಲ್ (ನಿವೃತ್ತ) ವರ್ಧಮಾನ್. ಪರಮ ವಿಶಿಷ್ಟ ಸೇವಾ ಮೆಡಲ್ ಪಡೆದಿರುವ ಸೈನಿಕ.
ನನಗೆ ಗೊತ್ತು, ನಿಮ್ಮೆಲ್ಲರ ಆಶೀರ್ವಾದ, ದೇವರ ದಯೆ ಆತನ ತಲೆಯ ಮೇಲಿದೆ. ಆತ ಸುರಕ್ಷಿತವಾಗಿ ಹಿಂತಿರುಗಲೆಂದು ಪ್ರಾರ್ಥಿಸುತ್ತೇನೆ. ಆತನನ್ನು ಚಿತ್ರಹಿಂಸೆಗೆ ಗುರಿಪಡಿಸುವುದಿಲ್ಲ ಎಂದು ನಂಬಿದ್ದೇನೆ. ಆತ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢನಾಗಿಯೇ ಹಿಂತಿರುಗಿ ಬರುತ್ತಾನೆ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಅವರು ಹೃದಯದ ಮಾತುಗಳನ್ನಾಡಿದ್ದಾರೆ.
ಇಂಥ ಅತೀವ ಸಂಕಷ್ಟದ ಸಮಯದಲ್ಲಿ ನೀವೆಲ್ಲ ನಮ್ಮೊಂದಿಗಿದ್ದಿದ್ದಕ್ಕೆ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಮತ್ತು ನೀವು ನೀಡುತ್ತಿರುವ ಶಕ್ತಿಯಿಂದಲೇ ನಾವೆಲ್ಲ ಇನ್ನಷ್ಟು ದೃಢಚಿತ್ತರಾಗಿದ್ದೇವೆ. ದೇವರ ದಯೆಯಿಂದ ಆತ ವಾಪಸ್ ಬಂದೇ ಬರುತ್ತಾನೆ ಎಂದು ವರ್ಧಮಾನ್ ಅವರು ಭಾವುಕರಾಗುತ್ತಾರೆ.

ಪಾಕ್ ಸೈನಿಕರ ವಶದಲ್ಲಿ ಅಭಿನಂದನ್
ಪಾಕಿಸ್ತಾನ ಭಾರತದ ಮೇಲೆ ಪ್ರತಿದಾಳಿ ನಡೆಸುತ್ತಿರುವಾಗ, ಅವರ ವಿಮಾನಗಳನ್ನು ಹಿಮ್ಮೆಟ್ಟಿಸುವ ಭರದಲ್ಲಿ ಅಭಿನಂದನ್ ಅವರು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ಪ್ರವೇಶಿಸಿದ್ದರು. ಪಾಕಿಸ್ತಾನದ ಸೇನೆ ಅವರು ಚಲಾಯಿಸುತ್ತಿದ್ದ ಮಿಗ್ 21 ಬೈಸನ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದರೂ, ಪ್ಯಾರಾಶೂಟ್ ಸಹಾಯದಿಂದ ಅಭಿನಂದನ್ ಅವರು ಪಾರಾಗಿದ್ದರು. ಆದರೆ, ಕಾಶ್ಮೀರದ ಜನರು ಮತ್ತು ಪಾಕಿಸ್ತಾನದ ಸೈನಿಕರಿಗೆ ಸಿಕ್ಕಿಬಿದ್ದರು. ಇದೀಗ, ಪಾಕ್ ಸೇನೆ ಅವರನ್ನು ವಿಚಾರಣೆಗೆ ಗುರಿಪಡಿಸಿದೆ. ವಿಚಾರಣೆಯ ಸಂದರ್ಭದಲ್ಲಿ, ತಮಗೇನೂ ಆಗಿಲ್ಲ, ನನ್ನನ್ನು ಉತ್ತಮವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ವಾಪಸ್ ಕರೆತರುವಂತೆ ಟ್ವಿಟ್ಟರ್ ಅಭಿಯಾನ
ಅಭಿನಂದನ್ ವರ್ಧಮಾನ್ ಅವರನ್ನು ಪಾಕ್ ವಶದಿಂದ ಬಿಡಿಸಿಕೊಂಡು ಭಾರತಕ್ಕೆ ವಾಪಸ್ ಕರೆತರುವಂತೆ ದೇಶದ ಜನರೆಲ್ಲ ಕೋರುತ್ತಿದ್ದಾರೆ. ನಮ್ಮ ಯುದ್ಧ ನೀತಿಯನ್ನು ಕೈಬಿಟ್ಟು, ಪಾಕಿಸ್ತಾನದ ಜೊತೆ ಮಾತುಕತೆ ನಡೆಸಿ ವಾಪಸ್ ಕರೆದುಕೊಂಡು ಬಂದರೆ, ನಿಮ್ಮ ಗೌರವ ಇನ್ನೂ ಹೆಚ್ಚುತ್ತದೆ ಎಂದು ಮೋದಿಯವರನ್ನು ಸಾರ್ವಜನಿಕರು ಗೋಗರೆಯುತ್ತಿದ್ದಾರೆ. ನೀವು ಚಿಂತಿಸಬೇಕಿಲ್ಲ ಅಭಿನಂದನ್, ನಿಮ್ಮ ಬಳಿ 130 ಕೋಟಿ ಭಾರತೀಯರ ಬೆಂಬಲವಿದೆ, ನೀವು ವಾಪಸ್ ಬಂದೇ ಬರುತ್ತೀರಿ ಎಂದು ಭಾರತೀಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿದೇಶಾಂಗ ಸಚಿವಾಲಯದ ಅಸಮಾಧಾನ
ಈ ನಡುವೆ, ಅಭಿನಂದನ್ ಅವರು ಪಾಕಿಸ್ತಾನದ ಸೇನೆಯ ವಶದಲ್ಲಿರುವುದು ಖಚಿತವಾಗುತ್ತಿದ್ದಂತೆ, ಭಾರತೀಯ ವಿದೇಶಾಂಗ ಸಚಿವಾಲಯ, ಪಾಕಿಸ್ತಾನವನ್ನು ಸಂಪರ್ಕಿಸಿ ಅಭಿನಂದನ್ ಅವರನ್ನು ಕೂಡಲೆ ಬಿಡುಗಡೆ ಮಾಡಬೇಕೆಂದು ಕೋರಿದೆ. ನಾವು ಆಕ್ರಮಣ ಮಾಡಿದ್ದು ಭಯೋತ್ಪಾದಕ ನೆಲೆಗಳ ಮೇಲೆ, ಆದರೆ ನೀವು ಭಾರತದ ಸೈನಿಕರ ಮೇಲೆಯೇ ಆಕ್ರಮಣ ಮಾಡುತ್ತಿದ್ದೀರಿ, ಇದು ನ್ಯಾಯಸಮ್ಮತವಲ್ಲ ಎಂದು ತಮ್ಮ ಅಸಮಾಧಾನವನ್ನು ತೋಡಿಕೊಂಡಿದೆ. ಜೊತೆಗೆ, ಕೆಲ ಪಾಕಿಸ್ತಾನಿಯರು ಕೂಡ ಅಭಿನಂದನ್ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಅತ್ಯಂತ ಗೌರವದಿಂದ ನಡೆಸಿಕೊಳ್ಳಲಾಗುತ್ತಿದೆ
ಪಾಕ್ ವಶದಲ್ಲಿರುವ ಅಭಿನಂದನ್ ಅವರು, ತಮ್ಮನ್ನು ವಿಚಾರಣೆ ನಡೆಸುತ್ತಿದ್ದ ವ್ಯಕ್ತಿಯೊಂದಿಗೆ ಮಾತನಾಡುತ್ತ, ತಾವು ಸುರಕ್ಷಿತವಾಗಿ ಇರುವುದಾಗಿ ಹೇಳಿದ್ದರು. ತಮ್ಮನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳಲಾಗುತ್ತಿದ್ದು, ತಮ್ನನ್ನು ಹೊಡೆಯಲು ಬಂದ ಜನಜಂಗುಳಿಯಿಂದಲೂ ಪಾಕ್ ಸೈನಿಕರು ಪಾರು ಮಾಡಿದ್ದಾರೆ, ಜಂಟಲ್ ಮನ್ ನಂತೆ ನಡೆಸಿಕೊಂಡಿದ್ದಾರೆ, ಅವರು ನಡೆಸಿಕೊಂಡ ರೀತಿಯಿಂದ ನಾನು ಸಂತುಷ್ಟನಾಗಿದ್ದೇನೆ ಎಂದಿರುವ ಅವರು, ತಮಗೆ ಕೇಳಿದ ಕೆಲ ವೈಯಕ್ತಿಕ ಮತ್ತು ವೃತ್ತಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ 'ಕ್ಷಮಿಸಿ, ನಾನು ಇದಕ್ಕೆ ಉತ್ತರಿಸುವಂತಿಲ್ಲ' ಎಂದು ವಿನಮ್ರವಾಗಿಯೇ ಹೇಳಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಭಾರತದ ರಾಯಭಾರಿ ಕಚೇರಿ ಮನವಿ
#GiveBackAbhinanda ಮತ್ತು #BringBackAbhinandan ಎಂಬೆರಡು ಟ್ವಿಟ್ಟರ್ ಹ್ಯಾಶ್ ಟ್ಯಾಗ್ ಗಳು ಟ್ರೆಂಡ್ ಆಗುತ್ತಿವೆ. ಅಭಿನಂದನ್ ಅವರನ್ನು ವಾಪಸ್ ಕಳಿಸಿಕೊಡಿ ಎಂಬು ಪಾಕಿಸ್ತಾನ ಸರಕಾರವನ್ನು ಭಾರತೀಯ ನಾಗರಿಕರು ಒತ್ತಾಯಿಸುತ್ತಿದ್ದಾರೆ. ಈ ನಡುವೆ, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಸುರಕ್ಷಿತವಾಗಿ ವಾಪಸ್ ಕಳಿಸಿಕೊಡಿ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯಕ್ಕೆ ಪಾಕಿಸ್ತಾನದಲ್ಲಿನ ಭಾರತದ ರಾಯಭಾರಿ ಕಚೇರಿ ಮನವಿ ಮಾಡಿಕೊಂಡಿದೆ. ಅದೇ ರೀತಿ, ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿಗೂ ಭಾರತದ ಸರಕಾರ ಅವರನ್ನು ವಾಪಸ್ ಕರೆತರಬೇಕು ಎಂದು ಒತ್ತಾಯಿಸಿದೆ.












Click it and Unblock the Notifications