2014 ರಲ್ಲೇ ರಾಜೀನಾಮೆ ನೀಡಿದ್ದೆ... ದೇವೇಗೌಡರು ಬಿಚ್ಚಿಟ್ಟ ಸತ್ಯ!
Recommended Video

ನವದೆಹಲಿ, ಫೆಬ್ರವರಿ 14: "2014 ರ ಲೋಕಸಭಾ ಚುನಾವಣೆಯ ನಂತರ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ" ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಬುಧವಾರ ಸಂಸತ್ತಿನಲ್ಲಿ ಹೇಳಿದರು.
16 ನೇ ಲೋಕಸಭೆಯ ಕೊನೆಯ ಅಧಿವೇಶನದ ಕೊನೆಯ ದಿನದಂದು ವಿವಿಧ ಪಕ್ಷದ ನಾಯಕರು ತಮ್ಮ ಐದು ವರ್ಷಗಳ ಅನುಭವವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ದೇವೇಗೌಡರು, ತಾವು ರಾಜೀನಾಮೆ ನೀಡಿದ್ದ ವಿಷಯವನ್ನು ಬಿಚ್ಚಿಟ್ಟರು.
ತಮ್ಮ ಮಾತಿಗೆ ಬದ್ಧರಾಗುವ ಉದ್ದೇಶದಿಂದ ತಾವು ಈ ಹೆಜ್ಜೆ ಇಟ್ಟಿದ್ದಾಗಿ ಗೌಡರು ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ದೇವೇಗೌಡರು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದು ಏಕೆ?

ಆಡಿದ ಮಾತಿಗೆ ಬದ್ಧರಾಗುವ ಉದ್ದೇಶ
2014 ರ ಲೋಕಸಭಾ ಚುನಾವಣೆಗೂ ಮುನ್ನ ದೇವೇಗೌಡರು ಒಮ್ಮೆ, 'ಆಗ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ, ಅಕಸ್ಮಾತ್ 276 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇ ಆದಲ್ಲಿ ನಾನು ನನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ' ಹೇಳಿಬಿಟ್ಟಿದ್ದರು!

282 ಸ್ಥಾನ ಗೆದ್ದಿದ್ದ ಬಿಜೆಪಿ
ದೇವೇಗೌಡರ ಲೆಕ್ಕಾಚಾರ ತಲೆಕೆಳಗಾಗಿ ಬಿಜೆಪಿ 276 ಅಲ್ಲ, ಅದಕ್ಕಿಂತ ಆರು ಸ್ಥಾನಗಳನ್ನು ಹೆಚ್ಚಾಗಿ ಗೆದ್ದು 282 ಸ್ಥಾನಗಳಲ್ಲಿ ಅಭೂತಪೂರ್ವ ಜಯ ಗಳಿಸಿತು. ಬಿಜೆಪಿಯನ್ನು ಬೆಂಬಲಿಸಿದ ಎನ್ ಡಿಎ ಮೈತ್ರಿಕೂಟದಿಂದಾಗಿ ಬಿಜೆಪಿ ಬಲ ಮುನ್ನೂರನ್ನು ಮೀರಿತು. ಮೋದಿ ಪ್ರಧಾನಿಯಾದರು. ಅಲ್ಲಿಗೆ ದೇವೇಗೌಡರಿಗೆ ಭಾರೀ ಮುಖಭಂಗವಾಗಿತ್ತು!

ಮಾತು ಉಳಿಸಿಕೊಳ್ಳಲು ಮುಂದಾದ ಗೌಡರು
ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ದೇವೇಗೌಡರು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಾನು ಕೊಟ್ಟ ಮಾತನ್ನು ತಪ್ಪುವುದಿಲ್ಲ. ನೀವು(ಬಿಜೆಪಿ) 276 ಸ್ಥಾನಕ್ಕಿಂತ ಹೆಚ್ಚನ್ನು ಗೆದ್ದರೆ ಇಲ್ಲಿರುವುದಿಲ್ಲ ಎಂದಿದ್ದೆ, ಆದ್ದರಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದರು.

ರಾಜೀನಾಮೆ ನಿರಾಕರಿಸಿದ ಮೋದಿ
ದೇವೇಗೌಡರ ರಾಜೀನಾಮೆ ವಿಷಯ ತಿಳಿದ ಮೋದಿ. "ರಾಜಕಾರಣದಲ್ಲಿ ಇಂಥ ಎಷ್ಟೋ ಮಾತುಗಳು ಬಂದು ಹೋಗುತ್ತವೆ. ಅವನ್ನೆಲ್ಲ ಗಂಭೀರವಾಗಿ ಭಾವಿಸಬೇಡಿ. ಲೋಕಸಭೆಯಲ್ಲಿ ನಿಮ್ಮಂಥ ಹಿರಿಯರು ಇರಬೇಕು. ನಿಮ್ಮ ಮಾರ್ಗದರ್ಶನ ನಮಗೆ ಬೇಕು. ನಿಮ್ಮ ರಾಜೀನಾಮೆಯನ್ನು ನಾವ್ಯಾರೂ ಒಪ್ಪಿಕೊಳ್ಳುವುದಿಲ್ಲ" ಎಂದಿದ್ದರು ಎದು ದೇವೇಗೌಡರು ಹೇಳಿದರು.












Click it and Unblock the Notifications