ಸಾಲದ ಸುಳಿಯಲ್ಲಿ ಎಚ್ಎಎಲ್: ಸಚಿವೆ ಜೊತೆ ಅಧಿಕಾರಿಗಳ ಚರ್ಚೆ
ನವದೆಹಲಿ, ಜನವರಿ 9: ಅತ್ತ ರಫೇಲ್ ಒಪ್ಪಂದದ ವಿವಾದ, ಇತ್ತ ನೌಕರರಿಗೆ ಸಾಲ ನೀಡಲು ಹಣವಿಲ್ಲದ ಆರ್ಥಿಕ ಸಂಕಷ್ಟಗಳ ಮಧ್ಯೆ ಸಿಲುಕಿರುವ ಎಚ್ಎಎಲ್ ತನ್ನ ಸಮಸ್ಯೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ.
ಎಚ್ಎಎಲ್ ಅಧ್ಯಕ್ಷ ಆರ್. ಮಾಧವನ್ ಅವರು ಬುಧವಾರ ಸಶಸ್ತ್ರ ಪಡೆಗಳ ಮುಖ್ಯಸ್ಥರ ಜೊತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಂಸತ್ನಲ್ಲಿ ಭೇಟಿ ಮಾಡಿದರು.
ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಏರ್ ಚೀಫ್ ಮಾರ್ಷಲ್ ಬಿರೇಂದರ್ ಸಿಂಗ್ ಧನೌ ಮತ್ತು ನೌಕಾ ಪಡೆ ಮುಖ್ಯಸ್ಥ ಸುನಿಲ್ ಲಂಬಾ ಅವರು ನಿರ್ಮಲಾ ಅವರೊಂದಿಗಿನ ಸಭೆಯಲ್ಲಿ ಭಾಗವಹಿಸಿದ್ದರು.

ಎಚ್ಎಎಲ್ಗೆ ರಫೇಲ್ ಯುದ್ಧ ವಿಮಾನ ತಯಾರಿಕೆಯ ಆಫ್ಸೆಟ್ ಪಾಲುದಾರಿಕೆಯ ಒಪ್ಪಂದ ನೀಡದೆಯೇ ಇರುವುದು ಭಾರಿ ವಿವಾದ ಸೃಷ್ಟಿಸಿದೆ. ಅದರ ಬೆನ್ನಲ್ಲೇ ಎಚ್ಎಎಲ್ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವುದು ಕೂಡ ಚರ್ಚೆಗೀಡು ಮಾಡಿದೆ.
ಎಚ್ಎಎಲ್ ಸೇನಾ ಪಡೆಗಳಿಗೆ ಅಗತ್ಯವಾದ ರಕ್ಷಣಾ ಸಾಧನಗಳನ್ನು ತಯಾರಿಸಿಕೊಡುತ್ತಿದೆ. ಆದರೆ, ಸಾವಿರಾರು ಕೋಟಿ ರೂ. ಬಾಕಿ ಹಣ ಸೇನೆಯಿಂದ ಇನ್ನೂ ಪಾವತಿಯಾಗಿಲ್ಲ. ಇದರಿಂದ ಹೊಸ ಯೋಜನೆಗಳನ್ನು ಸ್ವೀಕರಿಸಲು ಸಾಧ್ಯವಿಲ್ಲದೆ ಹಾಗೂ ನೌಕರರಿಗೆ ವೇತನ ಪಾವತಿಸಲು ಹಣವಿಲ್ಲದೆ ಎಚ್ಎಎಲ್ ಸಾಲ ಮಾಡುವ ಸ್ಥಿತಿಗೆ ತಲುಪಿದೆ.
ಅತ್ತ ಐಎಎಫ್ಗೆ ಬಜೆಟ್ನಲ್ಲಿ ಘೋಷಣೆಯಾದ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಹೀಗಾಗಿ ಎಚ್ಎಎಲ್ಗೆ ಪಾವತಿ ಮಾಡಲು ಐಎಎಫ್ ಬಳಿಯೂ ಹಣವಿಲ್ಲ ಎನ್ನಲಾಗಿದೆ.
ಮಂಗಳವಾರ ನಡೆದ ಮಂಡಳಿ ಸಭೆಯಲ್ಲಿ ಎಚ್ಎಎಲ್ನ ಆರ್ಥಿಕ ಸ್ಥಿತಿಗತಿಯ ಬಗ್ಗೆ ಚರ್ಚಿಸಲಾಗಿತ್ತು.












Click it and Unblock the Notifications