'ಕೋವಿಡ್ ಸಂದರ್ಭ ವೈದ್ಯಕೀಯ ಉತ್ಪನ್ನಗಳ ಮೇಲಿನ ಜಿಎಸ್ಟಿ ರದ್ದು ಮಾಡಿ' - ಪ್ರಿಯಾಂಕ ಆಗ್ರಹ
ನವದೆಹಲಿ, ಮೇ 28: ಜಿಎಸ್ಟಿ ಕೌನ್ಸಿಲ್ ಸಭೆಯು ಇಂದು (ಮೇ 28) ನಡೆಯಲಿದ್ದು, ಈಗಾಗಲೇ ಗುರುವಾರ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳ ಹಣಕಾಸು ಸಚಿವರುಗಳು ಸಭೆ ಜಿಎಸ್ಟಿ ನಷ್ಟ ಪರಿಹಾರ ಬೇಡಿಕೆ ಮುಂದಿಡಲು ನಿರ್ಧರಿಸಿದ್ದಾರೆ. ಹಾಗೆಯೇ ತಮ್ಮ ಹಲವು ಬೇಡಿಕೆಗಳ ಬಗ್ಗೆ ಚರ್ಚಿಸಿದ್ದಾರೆ.
ಈ ನಡುವೆ ಶುಕ್ರವಾರ ಕಾಂಗ್ರೆಸ್ ಮುಖಂಡೆ ಪ್ರಿಯಾಂಕ ಗಾಂಧಿ ವಾದ್ರಾ, ''ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅಗತ್ಯ ವೈದ್ಯಕೀಯ ಉತ್ಪನ್ನಗಳ ಮೇಲೆ ಜಿಎಸ್ಟಿ ಹೇರಬಾರದು. ಸಭೆಯಲ್ಲಿ ಚರ್ಚಿಸಿ ಸರ್ಕಾರ ಈ ಅಗತ್ಯ ವೈದ್ಯಕೀಯ ವಸ್ತುಗಳ ಮೇಲಿನ ಎಸ್ಟಿಯನ್ನು ರದ್ದು ಮಾಡಿ'' ಎಂದು ಆಗ್ರಹಿಸಿದ್ದಾರೆ.
ಬಿಜೆಪಿಯೇತರ ಆಡಳಿತದ ಏಳು ರಾಜ್ಯಗಳಿಂದ ಜಿಎಸ್ಟಿ ನಷ್ಟ ಪರಿಹಾರ ಬೇಡಿಕೆ
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕ, ''ಸಾಂಕ್ರಾಮಿಕ ಸಮಯದಲ್ಲಿ ಅಗತ್ಯ ವೈದ್ಯಕೀಯ ಉತ್ಪನ್ನಗಳಾದ ಆಮ್ಲಜನಕ, ವೆಂಟಿಲೇಟರ್ಗಳು, ಲಸಿಕೆಗಳು ಮತ್ತು ಔಷಧಿಗಳ ಮೇಲೆ ಜಿಎಸ್ಟಿ ಹೇರುವುದು ಕ್ರೂರ ಮತ್ತು ಅಸೂಕ್ಷ್ಮ ವಿಚಾರ. ಇಂದಿನ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ, ಕೋವಿಡ್ ವಿರುದ್ಧ ಹೋರಾಡಲು ಬಳಸಲಾಗುವ ಎಲ್ಲಾ ಜೀವ ಉಳಿಸುವ ಔಷಧಿಗಳು ಮತ್ತು ಸಾಧನಗಳಿಗೆ ಸರ್ಕಾರ ಜಿಎಸ್ಟಿಯನ್ನು ತೆಗೆದುಹಾಕಬೇಕು'' ಎಂದು ಒತ್ತಾಯಿಸಿದ್ದಾರೆ. ಹಾಗೆಯೇ ಕೇಂದ್ರ ಸರ್ಕಾರ ಅಗತ್ಯ ವೈದ್ಯಕೀಯ ಉತ್ಪನ್ನಗಳ ಮೇಲೆ ಹೇರುವ ಜಿಎಸ್ಟಿಯ ಪಟ್ಟಿಯನ್ನು ಉಲ್ಲೇಖ ಮಾಡಿದ್ದಾರೆ.
ಶುಕ್ರವಾರ ಜಿಎಸ್ಟಿ ಕೌನ್ಸಿಲ್ ಸಭೆ ನಡೆಯಲಿದೆ. ಗುರುವಾರವೇ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳ ಹಣಕಾಸು ಸಚಿವರುಗಳು ವರ್ಚುವಲ್ ಸಭೆ ಸೇರಿದ್ದಾರೆ. ಈ ಸಭೆಯನ್ನು ರಾಜಸ್ಥಾನ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಶಾಂತಿ ಕುಮಾರ್ ಧರಿವಾಲ್ ಅಯೋಜಿಸಿದ್ದು ಸಭೆಯಲ್ಲಿ ಹಣಕಾಸು ಸಚಿವರಾದ ಅಮಿತ್ ಮಿತ್ರಾ (ಪಶ್ಚಿಮ ಬಂಗಾಳ), ಮನ್ ಪ್ರೀತ್ ಸಿಂಗ್ ಬಾದಲ್ (ಪಂಜಾಬ್), ರಾಮೇಶ್ವರ ಒರಾನ್ (ಜಾರ್ಖಂಡ್), ಟಿ.ಎಸ್. ಸಿಂಗ್ ಡಿಯೋ (ಛತ್ತೀಸ್ ಗಢ), ಕೆ.ಎನ್. ಬಾಲಗೋಪಾಲ್ (ಕೇರಳ) ಮತ್ತು ಪಿ.ಟಿ.ಆರ್. ಪಳನಿವೇಲ್ ತ್ಯಾಗರಾಜನ್ (ತಮಿಳುನಾಡು) ಸಭೆಯಲ್ಲಿ ಭಾಗವಹಿಸಿದ್ದರು.
ಭಾರತದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಮತ್ತಷ್ಟು ಇಳಿಕೆ
''ರಾಜ್ಯಗಳಿಗೆ ತೆರಿಗೆ ನಷ್ಟವನ್ನು ಸರಿದೂಗಿಸಬೇಕು ಮತ್ತು ರಾಜ್ಯ ದೇಶೀಯ ಉತ್ಪನ್ನಗಳಿಗೆ ಹೆಚ್ಚುವರಿ ಸಾಲ ಮಿತಿಯನ್ನು ಒಟ್ಟು ಶೇ. 5 ರಷ್ಟು ಹೆಚ್ಚಿಸಬೇಕು. ಕೋವಿಡ್ ಸಾಂಕ್ರಾಮಿಕ ವಿರುದ್ಧ ಹೋರಾಡಲು ಖರೀದಿಸಲಾದ ಸರಕುಗಳ ಮೇಲಿನ ಎಲ್ಲಾ ತೆರಿಗೆಗಳನ್ನು ಮನ್ನಾ ಮಾಡಬೇಕು'' ಎಂಬ ತಮ್ಮ ಬೇಡಿಕೆಗಳನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮುಂದೆ ಪರಿಣಾಮಕಾರಿಯಾಗಿ ಪ್ರಸ್ತಾಪಿಸಲು ಏಳು ರಾಜ್ಯಗಳ ಸಚಿವರುಗಳು ನಿರ್ಧಾರಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)