4 ಕೇಜಿ ತೂಕ ಇಳಿದ ಚಿದಂಬರಂ; ಜಾಮೀನಿನಲ್ಲಿ ಜೈಲೂಟದ ಪ್ರಸ್ತಾಪ
ನವದೆಹಲಿ, ಅಕ್ಟೋಬರ್ 3: ಕೇಂದ್ರದ ಮಾಜಿ ಸಚಿವ- 74 ವರ್ಷದ ಪಿ. ಚಿದಂಬರಂಗೆ ತಿಹಾರ್ ಜೈಲಿನೊಳಗೆ ನೀಡುತ್ತಿರುವ ಆಹಾರ ಸರಿ ಹೊಂದುತ್ತಿಲ್ಲವಂತೆ. ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಜಾಮೀನು ಅರ್ಜಿಯಲ್ಲಿ ಅವರು ಈ ಸಂಗತಿ ಪ್ರಸ್ತಾಪಿಸಿದ್ದಾರೆ. ಜೈಲಿನ ಊಟ ಸರಿ ಹೊಂದದೆ ಆರೋಗ್ಯ ಕ್ಷೀಣಿಸುತ್ತಿದ್ದು, 4 ಕೇಜಿ ತೂಕ ಕಡಿಮೆ ಆಗಿರುವುದಾಗಿ ತಿಳಿಸಿದ್ದಾರೆ.
ಸದ್ಯಕ್ಕೆ ನ್ಯಾಯಾಂಗ ಬಂಧನದಲ್ಲಿ ಇರುವ ಪಿ. ಚಿದಂಬರಂ, ತಿಹಾರ್ ಜೈಲಿನಲ್ಲಿ ಇದ್ದಾರೆ. ಚಿದಂಬರಂ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿರುವ ಪ್ರಕಾರ, ಅವರ ಅರೋಗ್ಯ ಕ್ಷೀಣಿಸಿದೆ. ಉಳಿಸಿರುವ ಸೆಲ್ ಹಾಗೂ ನೀಡುತ್ತಿರುವ ಆಹಾರ ಎರಡೂ ಹೊಂದಿಕೆ ಆಗುತ್ತಿಲ್ಲ. ನ್ಯಾಯಾಂಗ ಬಂಧನದ ಅವಧಿಯಲ್ಲಿ ನಾಲ್ಕು ಕೇಜಿ ತೂಕ ಕಳೆದುಕೊಂಡಿದ್ದಾರೆ.
ಸಿಬಿಐ ವಶದಲ್ಲಿ ಗರಿಷ್ಠ ಪ್ರಮಾಣದ ಹದಿನೈದು ದಿನವೂ ಸೇರಿ ಚಿದಂಬರಂ ನಲವತ್ತೆರಡು ದಿನದಿಂದ ಸೆರೆವಾಸ ಅನುಭವಿಸುತ್ತಿದ್ದಾರೆ. ಆದ್ದರಿಂದ ಹೀಗೇ ಸೆರೆವಾಸ ಮುಂದುವರಿಸಿದರೆ ಅದು ಶಿಕ್ಷೆಯಂತಾಗುತ್ತದೆ. ವಿಚಾರಣೆಗೆ ಅವರನ್ನು ಒಳಪಡಿಸಿಲ್ಲ ಮತ್ತು ಅದರ ಅಗತ್ಯವೂ ಇಲ್ಲ ಎಂದು ಜಾಮೀನು ಅರ್ಜಿಯಲ್ಲಿ ಹೇಳಲಾಗಿದೆ.

ಐಎನ್ ಎಕ್ಸ್ ಮೀಡಿಯಾ ಹಗರಣದಲ್ಲಿ ದೆಹಲಿ ಹೈ ಕೋರ್ಟ್ ನಿಂದ ಜಾಮೀನು ನಿರಾಕರಣೆಯಾದ ಮೂರು ದಿನದ ನಂತರ ಅರ್ಜಿ ವಿಚಾರಣೆ ಶೀಘ್ರ ಕೈಗೆತ್ತಿಕೊಳ್ಳುವಂತೆ ಪಿ. ಚಿದಂಬರಂ ಗುರುವಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಚಿದಂಬರಂ ಪರ ವಕಿಲ ಕಪಿಲ್ ಸಿಬಲ್ ಈ ಅರ್ಜಿಯನ್ನು ನ್ಯಾ. ಎನ್. ವಿ. ರಮಣ ನೇತೃತ್ವದ ಪೀಠಕ್ಕೆ ಸಲ್ಲಿಸಿದ್ದರು.
ನ್ಯಾ ರಮಣ ಮಾತನಾಡಿ, ಚಿದಂಬರಂ ಅರ್ಜಿಯ ವಿಲೇವಾರಿ ಬಗ್ಗೆ ನಿರ್ಧರಿಸಲು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ಮನವಿ ಮಾಡಲಾಗುವುದು ಎಂದಿದ್ದಾರೆ. ಆಗಸ್ಟ್ ಇಪ್ಪತ್ತೊಂದನೇ ತಾರೀಕು ಸಿಬಿಐನಿಂದ ಚಿದಂಬರಂ ಅವರನ್ನು ಬಂಧಿಸಲಾಗಿತ್ತು. ಇನ್ನು ಇ. ಡಿ. ಯಿಂದಲೂ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಲಾಗಿದೆ.
ಐಎನ್ ಎಕ್ಸ್ ಮೀಡಿಯಾ ಹಗರಣದಲ್ಲಿ ಸಾರ್ವಜನಿಕರ ಹಣ ಒಳಗೊಂಡಿಲ್ಲ. ಜತೆಗೆ ರಾಜ್ಯಸಭಾ ಸದಸ್ಯರಾಗಿರುವ ಪಿ. ಚಿದಂಬರಂ ಕಾನೂನಿಗೆ ಬದ್ಧವಾಗಿರುವ ನಾಗರಿಕರು. ಅವರು ದೇಶ ಬಿಟ್ಟು ಹೋಗಲ್ಲ, ವಿಚಾರಣೆಗೆ ಲಭ್ಯರಿರುತ್ತಾರೆ ಎಂದು ಸಮರ್ಥನೆ ನೀಡಿದ್ದರು.












Click it and Unblock the Notifications