"ರೈತರು ಕಾಣೆಯಾಗಿದ್ದಾರೆ"; ಹುಡುಕಿ ಕೊಡುತ್ತೇವೆ ಎಂದ ಕೇಜ್ರಿವಾಲ್!
ನವದೆಹಲಿ, ಫೆಬ್ರವರಿ.03: ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕುಟುಂಬದಿಂದ ಬೇರೆಯಾಗಿ ಕಳೆದು ಹೋಗಿರುವ ರೈತರನ್ನು ಮತ್ತೆ ಕುಟುಂಬಸ್ಥರೊಂದಿಗೆ ಸೇರಿಸುವ ನಿಟ್ಟಿನಲ್ಲಿ ದೆಹಲಿ ಸರ್ಕಾರವು ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
ನವದೆಹಲಿ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರೈತರು ಉಗ್ರ ಹೋರಾಟ ನಡೆಸುತ್ತಿದ್ದಾರೆ. ಇತ್ತೀಚಿಗೆ ನಡೆದ ದೆಹಲಿ ಹಿಂಸಾಚಾರದ ಬಳಿಕ ಹಲವು ರೈತರು ತಮ್ಮ ಕುಟುಂಬ ಸದಸ್ಯರಿಂದ ಬೇರ್ಪಟ್ಟಿದ್ದಾರೆ. ಅಂಥ ರೈತರನ್ನು ಹುಡುಕಿ ಕೊಡುವಂತೆ ಕಿಸಾನ್ ಒಕ್ಕೂಟಗಳು ಮನವಿ ಸಲ್ಲಿಸಿದ್ದವು.
ದೆಹಲಿಯಲ್ಲಿ ರೈತರ ಹೋರಾಟದ ಹಾದಿಗೆ ಸೀಮೆಂಟ್ ಗೋಡೆ, ಕಬ್ಬಿಣದ ಸೆರಳು!
ಮನೆಯವರಿಂದ ದೂರ ದೂರ ಆಗಿರುವ ರೈತರನ್ನು ಗುರುತಿಸಿ ಅವರನ್ನು ಮತ್ತೆ ಕುಟುಂಬ ಸದಸ್ಯರೊಂದಿಗೆ ಸೇರಿಸುವ ಕಾರ್ಯವನ್ನು ಸರ್ಕಾರದ ವತಿಯಿಂದ ಮಾಡಲಾಗುತ್ತದೆ. ಅಗತ್ಯ ಬಿದ್ದಲ್ಲಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರ ಜೊತೆಗೂ ಈ ಸಂಬಂಧ ಚರ್ಚಿಸುತ್ತೇನೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
115 ಬಂಧಿತರ ಹೆಸರಿನ ಪಟ್ಟಿ ಬಿಡುಗಡೆ
ನವದೆಹಲಿಯಲ್ಲಿ ಕಳೆದ ಜನವರಿ.26ರ ಗಣರಾಜ್ಯೋತ್ಸವದ ದಿನ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ಪಡೆದ ಶಂಕಿತ ಆರೋಪಿಗಳ ಹೆಸರಿನ ಪಟ್ಟಿಯನ್ನು ದೆಹಲಿ ಸರ್ಕಾರ ಬಿಡುಗಡೆಗೊಳಿಸಿದೆ. 115 ಮಂದಿ ಬಂಧಿತರ ಬಗ್ಗೆ ಮಾಹಿತಿಯನ್ನು ಸರ್ಕಾರ ನೀಡಿದೆ. ಈ ಎಲ್ಲ ಬಂಧಿತ ಆರೋಪಿಗಳನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.
ರೈತ ಸಂಘಟನೆ ಆಯೋಗದಿಂದ ದೆಹಲಿ ಸಿಎಂಗೆ ಮನವಿ
ಕಳೆದ ಮಂಗಳವಾರವಷ್ಟೇ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ಕಾರ್ಯಕರ್ತರನ್ನೊಳಗೊಂಡ ನಿಯೋಗವು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿತ್ತು. ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧದ ಪಿತೂರಿ ಅಡಗಿದೆ. ಈ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ರೈತರು ಮನವಿ ಸಲ್ಲಿಸಿದ್ದರು.
ದೆಹಲಿಯ ತಿಹಾರ್ ಜೈಲು ಸೇರಿದವರು ನಿಜವಾದ ರೈತರೇ?
ನವದೆಹಲಿ ಹಿಂಸಾಚಾರದಲ್ಲಿ ಬೇರೆ ಯಾರದ್ದೋ ಕೈವಾಡವಿರುವ ಬಗ್ಗೆ ರೈತರು ಶಂಕೆ ವ್ಯಕ್ತಪಡಿಸಿದ್ದಾರೆ. ದೆಹಲಿ ಪೊಲೀಸರು ಹಿಂಸಾಚಾರಕ್ಕೆ ಸಂಬಂಧಿಸಿದಂತೆ 115 ಜನರನ್ನು ಬಂಧಿಸಿ ತಿಹಾರ್ ಜೈಲಿನಲ್ಲಿ ಇರಿಸಿದ್ದಾರೆ. ಆ ಜೈಲಿನಲ್ಲಿರುವವರು ನಿಜವಾದ ರೈತರೇ, ಇದೀಗ ನಾಪತ್ತೆಯಾಗಿರುವವರು ನಿಜವಾಗಿಯೂ ರೈತರಾ ಹಾಗೂ ಈ ರೈತರೆಲ್ಲ ಕೃಷಿ ಕಾಯ್ದೆ ವಿರುದ್ಧ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೋ ಇಲ್ಲವೋ ಎನ್ನುವುದರ ಬಗ್ಗೆ ವಿಚಾರಣೆ ನಡೆಸಬೇಕಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹಿಸಿದೆ.
ಭಾರತದಾದ್ಯಂತ ಹೆದ್ದಾರಿಗಳ ತಡೆಗೆ ರೈತರ ಕರೆ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರುದ್ಧ ರಾಷ್ಟ್ರವ್ಯಾಪ್ತಿ "ಛಕ್ಕಾ ಜಾಮ್" (ರಾಷ್ಟ್ರೀಯ ಹೆದ್ದಾರಿ ತಡೆ) ನಡೆಸುವುದಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ಕರೆ ಕೊಟ್ಟಿದೆ. ಭಾರತದಾದ್ಯಂತ ಫೆಬ್ರವರಿ.06ರ ಶನಿವಾರ ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೂ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸುವುದುದಾಗಿ ಘೋಷಿಸಲಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ರೈತರ ಪ್ರತಿಭಟನಾ ಸ್ಥಳದಲ್ಲಿ ಇಂಟರ್ ನೆಟ್ ಕಡಿತಗೊಳಿಸುವುದು. ಪ್ರತಿಭಟನಾಕಾರರಿಗೆ ಕುಡಿಯುವ ನೀರು, ವಿದ್ಯುತ್, ಶೌಚಾಲಯ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳೂ ಸಿಗದಂತೆ ಮಾಡುವುದರ ವಿರುದ್ಧ ರೈತರು ಹೆದ್ದಾರಿ ತಡೆಗೆ ಕರೆ ನೀಡಿದ್ದಾರೆ.