ಸಂಸತ್ ಚಲೋ ಮುಂದೂಡಿಕೆ: ಕೇಂದ್ರ ಸರ್ಕಾರಕ್ಕೆ ಡಿಸೆಂಬರ್ 4ರ ಗಡುವು ವಿಧಿಸಿದ ರೈತರು
ನವದೆಹಲಿ, ನವೆಂಬರ್ 27: ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಕ್ಕೆ ಸಂಬಂಧಿಸಿದಂತೆ ಮಸೂದೆಯನ್ನು ಪರಿಚಯಿಸಿದ ಹಿನ್ನೆಲೆ (ನವೆಂಬರ್ 29) ಸೋಮವಾರ ನಡೆಸಲು ಕರೆ ನೀಡಿದ್ದ ಸಂಸತ್ ಚಲೋ ಅಥವಾ ಸಂಸತ್ ಮೆರವಣಿಗೆಯನ್ನು ರೈತ ಸಂಘಟನೆಗಳು ಮುಂದೂಡಿವೆ.
"ಸೋಮವಾರ ಸಂಸತ್ತಿನಲ್ಲಿ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಮಸೂದೆಯನ್ನು ಅಂಗೀಕರಿಸಲಾಗುವುದು ಎಂದು ಕೇಂದ್ರ ಸರ್ಕಾರ ನಮಗೆ ಭರವಸೆ ನೀಡಿದೆ. ಈ ಹಿನ್ನೆಲೆ ನವೆಂಬರ್ 29ರಂದು ನಡೆಸಲು ತೀರ್ಮಾನಿಸಿದ್ದ ಸಂಸತ್ ಚಲೋ ಅನ್ನು ಮುಂದೂಡಿದ್ದೇವೆ," ಎಂದು ರೈತ ಮುಖಂಡ ದರ್ಶನ್ ಪಾಲ್ ಹೇಳಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ ನಡೆಸಿದ ಸಭೆಯ ನಂತರದಲ್ಲಿ ರೈತ ಸಂಘಟನೆಗಳ ತೀರ್ಮಾನವನ್ನು ಅವರು ತಿಳಿಳಿಸಿದ್ದಾರೆ.
ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆ ರದ್ದಾಯ್ತು; ಮುಂದೇನು ರೈತರ ಕಥೆ?
"ನಾವು ಪ್ರಧಾನಿಗೆ ಪತ್ರ ಬರೆದಿದ್ದೇವೆ, ಅದರಲ್ಲಿ ನಾವು ಹಲವು ಬೇಡಿಕೆಗಳನ್ನು ಮಾಡಿದ್ದೇವೆ. ನಾವು ರೈತರ ಮೇಲಿನ ಪ್ರಕರಣಗಳನ್ನು ರದ್ದುಗೊಳಿಸಬೇಕು, MSP ಖಾತರಿಪಡಿಸಬೇಕು, ಈ ಚಳುವಳಿಯಲ್ಲಿ ಹುತಾತ್ಮರಾದ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು, ಹುಲ್ಲು ಸುಡುವ ಪ್ರಕರಣಗಳು ಮತ್ತು ವಿದ್ಯುತ್ ಬಿಲ್ಗಳನ್ನು ರದ್ದುಗೊಳಿಸಬೇಕು,'' ಎಂದು ರೈತ ಮುಖಂಡ ದರ್ಶನ್ ಪಾಲ್ ಒತ್ತಾಯಿಸಿದ್ದಾರೆ.
ಡಿಸೆಂಬರ್ 4ರ ಗಡುವು ವಿಧಿಸಿದ ರೈತರು
ವಿವಾದಿತ ಕೃಷಿ ಕಾಯ್ದೆ ರದ್ದುಗೊಳಿಸುವ ಮಸೂದೆಗೆ ಸಂಸತ್ತಿನಲ್ಲಿ ಅನುಮೋದನೆ ಪಡೆದುಕೊಳ್ಳಬೇಕು. ಇದರ ಜೊತೆಗೆೆ ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ "ನಾವು ಡಿಸೆಂಬರ್ 4ರವರೆಗೂ ಕಾದು ನೋಡುತ್ತೇವೆ, ತದನಂತರದಲ್ಲಿ ಮುಂದಿನ ನಿರ್ಧಾರದ ಬಗ್ಗೆ ಘೋಷಿಸುತ್ತೇವೆ," ಎಂದು ರೈತ ಮುಖಂಡ ದರ್ಶನ್ ಪಾಲ್ ಹೇಳಿದ್ದಾರೆ.
ಸಂಸತ್ ಮೆರವಣಿಗೆ ಕುರಿತು ರಾಕೇಶ್ ಟಿಕಾಯತ್ ಘೋಷಣೆ
ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ಚಳಿಗಾಲ ಅಧಿವೇಶನ ಆರಂಭವಾಗುವ ಮೊದಲ ದಿನದಿಂದಲೇ ಸಂಸತ್ ಚಲೋ (ಟ್ಯಾಕ್ಟರ್ ಮೆರವಣಿಗೆ) ನಡೆಸುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಇದೇ ವಾರದ ಪ್ರಾರಂಭದಲ್ಲಿ ಘೋಷಿಸಿದ್ದರು. ಪ್ರತಿದಿನ 60 ಟ್ರ್ಯಾಕ್ಟರ್ಗಳಲ್ಲಿ 1,000 ರೈತರನ್ನು ಸಂಸತ್ತಿಗೆ ಕಳುಹಿಸಿ ಕೊಡುವುದಕ್ಕೆ ರೈತರು ಯೋಜನೆ ರೂಪಿಸಿಕೊಂಡಿದ್ದರು. ಆದರೆ ಸಂಸತ್ತಿನಲ್ಲಿ ಗದ್ದಲ ಮತ್ತು ಗೊಂದಲದ ನಡುವೆ ಕಳೆದ ವರ್ಷ ಅಂಗೀಕರಿಸಲಾದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಕೃಷಿ ಸಚಿವ ನರೇಂದ್ರ ತೋಮರ್ ಸೋಮವಾರ ಮಂಡಿಸಲಿದ್ದಾರೆ ಎಂದು ಸರ್ಕಾರ ಹೇಳಿದೆ.
ಪ್ರತಿಭಟನೆ ಅಂತ್ಯಗೊಳಿಸಿ ವಾಪಸ್ ಹೋಗಲು ರೈತರಿಗೆ ಮನವಿ
ಕೇಂದ್ರ ಸರ್ಕಾರದ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ 2020, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020, (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020 ಅನ್ನು ಸಂಸತ್ ಚಳಿಗಾಲ ಅಧಿವೇಶನದ ಮೊದಲ ದಿನವಾದ (ನವೆಂಬರ್ 29) ಸೋಮವಾರ ರದ್ದುಗೊಳಿಸುವ ಮಸೂದೆ ಮಂಡಿಸುವುದಕ್ಕೆ ಕೇಂದ್ರ ಸರ್ಕಾರ ಈಗಾಗಲೇ ನಿರ್ಧರಿಸಿದೆ. ಈ ಹಿನ್ನೆಲೆ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಿ ಮನೆಗೆ ಹಿಂತಿರುಗುವಂತೆ ಶನಿವಾರ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮನವಿ ಮಾಡಿಕೊಂಡಿದ್ದಾರೆ.
"ಕೇಂದ್ರ ಸರ್ಕಾರ ರಚಿಸುತ್ತಿರುವ ಈ ಸಮಿತಿಯ ಸಂವಿಧಾನದೊಂದಿಗೆ ಕನಿಷ್ಛ ಬೆಂಬಲ ಬೆಲೆ(MSP) ಮೇಲಿನ ರೈತರ ಬೇಡಿಕೆಯನ್ನು ಈಡೇರಿಸುತ್ತದೆ. ಹೊಲಗದ್ದೆಯಲ್ಲಿ ಪೈರಿನ ನಂತರ ಕಸ ಸುಡುವುದನ್ನು ಅಪರಾಧ ಅಲ್ಲದಂತೆ ಪರಿಗಣಿಸಲು ರೈತ ಸಂಘಟನೆಗಳು ಒತ್ತಾಯಿಸಿದ್ದವು. ಭಾರತ ಸರ್ಕಾರ ಈ ಬೇಡಿಕೆಯನ್ನೂ ಒಪ್ಪಿಕೊಂಡಿದೆ. ಹೀಗಿರುವಾಗ ರೈತರು ಆಂದೋಲನವನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ. ರೈತರು ತಮ್ಮ ಆಂದೋಲನವನ್ನು ಕೊನೆಗೊಳಿಸಿ ಮನೆಗೆ ಹೋಗಬೇಕೆಂದು ನಾನು ಒತ್ತಾಯಿಸುತ್ತೇನೆ," ಎಂದು ತೋಮರ್ ಹೇಳಿದ್ದಾರೆ.
ಕೃಷಿ ಸಚಿವ ತೋಮರ್ ಬೇಡಿಕೆಗೆ ರೈತರ ಪ್ರತಿಕ್ರಿಯೆ
ರೈತರು ಪ್ರತಿಭಟನೆಯನ್ನು ಅಂತ್ಯಗೊಳಿಸಿ ವಾಪಸ್ಸಾಗಬೇಕು ಎಂಬ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮನವಿಯನ್ನು ಸಂಯುಕ್ತ ಕಿಸಾನ್ ಮೋರ್ಚಾ ತಿರಸ್ಕರಿಸಿದೆ. ಕೇಂದ್ರ ಸರ್ಕಾರವು ರೈತರೊಂದಿಗೆ ಮಾತುಕತೆಯನ್ನು ಆರಂಭಿಸಬೇಕು. ಬಾಕಿ ಉಳಿದಿರುವ ಎಲ್ಲ ಬೇಡಿಕೆಗಳ ಬಗ್ಗೆ ರೈತ ಮುಖಂಡರೊಂದಿಗೆ ಚರ್ಚಿಸಬೇಕು. ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ನಮಗೆ ಹೆಚ್ಚಿನ ಸ್ಪಷ್ಟತೆ ಬೇಕಾಗಿದೆ. MSP ಸಮಿತಿ ಅನುಸರಿಸುವ ನಿಯಮಗಳು ಏನಾಗಿರುತ್ತವೆ? ಯಾವಾಗ ಸರ್ಕಾರ MSP ಅನ್ನು ಕಾನೂನಾಗಿ ಜಾರಿಗೊಳಿಸುತ್ತದೆ," ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ಗುರ್ನಾಮ್ ಸಿಂಗ್ ಚಾರುಣಿ ಪ್ರಶ್ನೆ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಘೋಷಣೆಗೆ ಪ್ರತಿಕ್ರಿಯಿಸಿದ ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್, "ನಾವು ರಚಿಸಲಾದ ಸಮಿತಿಯ ವಿವರಗಳನ್ನು ಓದಿಲ್ಲ. ವಿವರಗಳ ಬಗ್ಗೆ ನಮಗೆ ತಿಳಿಸಿದ ನಂತರವೇ ನಾವು ಪ್ರತಿಕ್ರಿಯಿಸುತ್ತೇವೆ ಮತ್ತು ಕ್ರಮ ಕೈಗೊಳ್ಳುತ್ತೇವೆ," ಎಂದಿದ್ದಾರೆ.
Recommended Video