ಅಧಿಕೃತವಾಗಿ ಬಿಜೆಪಿ ಸೇರಿದ ವಿದೇಶಾಂಗ ಸಚಿವ ಎಸ್ ಜೈಶಂಕರ್
ನವದೆಹಲಿ, ಜೂನ್ 24: ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಸೋಮವಾರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನವದೆಹಲಿಯ ಪಾರ್ಲಿಮೆಂಟ್ ಹೌಸ್ ನಲ್ಲಿ ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಅವರ ಉಪಸ್ಥಿತಿಯಲ್ಲಿ ಅವರು ಬಿಜೆಪಿ ಸೇರಿದರು.
ಭಾರತದ ಪ್ರಸಿದ್ಧ ಸ್ಟ್ರಾಟಜಿಸ್ಟ್ ಗಳಲ್ಲಿ ಒಬ್ಬರಾದ ಕೆ ಸುಬ್ರಹ್ಮಣ್ಯಂ ಅವರ ಪುತ್ರರಾದ ಜೈಶಂಕರ್, ಅಜಿತ್ ದೋವಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ನಮ್ಮ ವಿದೇಶಿ ನೀತಿಗೆ ಒಂದು ಸ್ವರೂಪ ನೀಡಿದವರು.
ಭಾರತ ಹಾಗೂ ಅಮೆರಿಕ ನಡುವೆ ನಾಗರಿಕ ಅಣ್ವಸ್ತ್ರ ಒಪ್ಪಂದ ಏರ್ಪಟ್ಟ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುಬ್ರಮಣ್ಯಂ ಜೈಶಂಕರ್ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.

1977ರ ಬ್ಯಾಚಿನ ಇಂಡಿಯನ್ ಫಾರಿನ್ ಸರ್ವೀಸ್ ಅಧಿಕಾರಿಯಾಗಿದ್ದ ಅವರು ಯುರೋಪಿನ ಅನೇಕ ರಾಜಧಾನಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಶ್ರೀಲಂಕಾದಲ್ಲಿ ಶಾಂತಿ ಸ್ಥಾಪನೆಗಾಗಿ ಭಾರತ ಯತ್ನಿಸಿದ್ದಾಗ ರಾಜಕೀಯ ಸಲಹೆಗಾರ, ಕಾರ್ಯದರ್ಶಿಯಾಗಿದ್ದರು. 2018ರಲ್ಲಿ ನಿವೃತ್ತಿ ಬಳಿಕ ಟಾಟಾ ಸಮೂಹದ ಗ್ಲೋಬಲ್ ಕಾರ್ಪೊರೇಟ್ ವ್ಯವಹಾರಗಳ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವಯೋ ಸಹಜ ಅನಾರೋಗ್ಯದ ಕಾರಣ ಈ ಬಾರಿ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಆದ್ದರಿಂದ ಅವರ ಸ್ಥಾನದಲ್ಲಿ ಜೈ ಶಂಕರ್ ಅವರನ್ನು ನೇಮಿಸಲಾಗಿದೆ. ಅವರನ್ನು ರಾಜ್ಯ ಸಭೆಯಿಂದ ಸಂಸದರನ್ನಾಗಿ ಆರಿಸಲಾಗುತ್ತದೆ.











Click it and Unblock the Notifications