ಉಗ್ರರ ಮೇಲೆ ಏರ್ ಸ್ಟ್ರೈಕ್ : ಹೂಡಾರಿಂದ ಪ್ರಶಂಸೆಯ ಸುರಿಮಳೆ
ನವದೆಹಲಿ, ಫೆಬ್ರವರಿ 26 : 2016ರ ಸೆಪ್ಟೆಂಬರ್ 29ರಂದು ನಡೆಸಿದ ಸರ್ಜಿಕಲ್ ಸ್ಟ್ರೈಕ್ ಗೆ ನರೇಂದ್ರ ಮೋದಿ ಸರಕಾರ ಸಿಕ್ಕಾಪಟ್ಟೆ ಪ್ರಚಾರ ನೀಡಿದೆ ಎಂದು ಆಕ್ರೋಶ ವಹಿಸಿದ್ದ, ಸರ್ಜಿಕಲ್ ಸ್ಟ್ರೈಕ್ ನ ನೇತೃತ್ವ ವಹಿಸಿದ್ದ ನಿವೃತ್ತ ಲೆ.ಜ. ಡಿಎಸ್ ಹೂಡಾ ಅವರು, 2019ರ ಫೆಬ್ರವರಿ 26ರಂದು ನಡೆದ ವಾಯು ದಾಳಿಯನ್ನು ಪ್ರಶಂಸಿಸಿದ್ದಾರೆ.
ಭಯೋತ್ಪಾದಕರ ವಿರುದ್ಧ ತಕ್ಕ ಕ್ರಮ ತೆಗೆದುಕೊಂಡಿದ್ದಕ್ಕೆ ಕೇಂದ್ರ ಸರಕಾರಕ್ಕೆ ಮತ್ತು ಅತ್ಯಂತ ಕರಾರುವಾಕ್ಕಾಗಿ ಮತ್ತು ಬಾಲಕೋಟ್ ನಲ್ಲಿ ಪ್ರೊಫೆಷನಲ್ ಆಗಿ ಕಾರ್ಯಾಚರಣೆ ನಡೆಸಿದ ಭಾರತೀಯ ವಾಯು ಸೇನೆಗೆ ನನ್ನ ಅಭಿನಂದನೆಗಳು ಎಂದು, ಸರ್ಜಿಕಲ್ ಸ್ಟ್ರೈಕ್ ನಡೆದಾಗ ನಾರ್ದರ್ನ್ ಆರ್ಮಿ ಕಮಾಂಡರ್ ಆಗಿದ್ದ ಹೂಡಾ ಹೇಳಿದ್ದಾರೆ.
ಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿ
ಫೆಬ್ರವರಿ 26ರ ಬೆಳಿಗ್ಗೆ 3.45ರ ಸುಮಾರಿಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬಾಲಕೋಟ್, ಮುಜಫರಾಬಾದ್ ಮತ್ತು ಚಾಕೋಟಿ ಎಂಬಲ್ಲಿ, ಜೈಷ್-ಎ-ಮೊಹಮ್ಮದ್ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿರುವ ಭಾರತೀಯ ವಾಯು ಸೇನೆ, ಅವರ ತರಬೇತಿ ತಾಣಗಳನ್ನು, ಕಮಾಂಡರ್ ಗಳನ್ನು ಮತ್ತು ಜಿಹಾದಿಗಳನ್ನು ಸರ್ವನಾಶ ಮಾಡಿದೆ.
ಅದೃಷ್ಟವಶಾತ್ ಎಲ್ಲ ಪೈಲಟ್ ಗಳು ಸುರಕ್ಷಿತವಾಗಿದ್ದಾರೆ. ಇಂಥ ದಾಳಿ ನಡೆಯಲೇಬೇಕಾಗಿತ್ತು. ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಕೇಂದ್ರ ಸರಕಾರದಿಂದ ಇಂಥ ಬಲವಾದ ಪ್ರತಿದಾಳಿ ನಡೆದೇ ನಡೆಯುವುದರ ಬಗ್ಗೆ ನನ್ನ ಮನದಲ್ಲಿ ಯಾವುದೇ ಸಂಶಯವಿರಲಿಲ್ಲ ಎಂದು ಡಿಎಸ್ ಹೂಡಾ ಅವರು ಪ್ರಶಂಸೆಯ ಸುರಿಮಳೆಗರೆದಿದ್ದಾರೆ.
ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸಮಿತಿಯಲ್ಲಿ ಲೆ.ಜ. (ನಿವೃತ್ತ) ಡಿ.ಎಸ್ ಹೂಡಾ ಅವರು ಇತ್ತೀಚೆಗೆ ಸೇರಿಕೊಂಡಿದ್ದರು. ಆದರೆ, ತಾವು ಕಾಂಗ್ರೆಸ್ ಪಕ್ಷವನ್ನು ಯಾವುದೇ ಕಾರಣಕ್ಕೂ ಸೇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.
ಪುಲ್ವಾಮಾ ಪ್ರತೀಕಾರ LIVE: ನೂರಾರು ಜೈಷ್ ಉಗ್ರರ ಹತ್ಯೆ ಮಾಡಿದ್ದು ಸತ್ಯ
ಇನ್ನು ಮೇಲಾದರೂ ಡಿಎಸ್ ಹೂಡಾ ಅವರು ಯಾವುದೇ ರಾಜಕೀಯ ಪಕ್ಷದ (ಕಾಂಗ್ರೆಸ್) ಕೈಗೊಂಬೆಯಾಗದೆ, ತಮ್ಮ ಘನತೆಯನ್ನು ಎತ್ತಿ ಹಿಡಿಯಬೇಕು. ನಮ್ಮ ಸೇನೆಗಳಿಗೆ ತಮ್ಮಂಥವರ ಅನುಭವ ಮತ್ತು ನೈಪುಣ್ಯದ ಅವಶ್ಯತಯಿದೆ. ಅವುಗಳಿಗೆ ಸೂಕ್ತವಾಗಿ ಸಲಹೆ ನೀಡಿ ಎಂದು ಟ್ವಿಟ್ಟಿಗರೊಬ್ಬರು ಸಲಹೆ ನೀಡಿದ್ದಾರೆ. ರಾಹುಲ್ ಗಾಂಧಿಯವರೇ, ನೀವು ಕೂಡ ಹೂಡಾ ಅವರಂತೆಯೇ ನರೇಂದ್ರ ಮೋದಿಯವರನ್ನು ಅಭಿನಂದಿಸಿ ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ.