ಗೋಮಾಂಸ ಬೇಕಾದರೆ ಪಾಕಿಸ್ತಾನಕ್ಕೆ ಹೋಗಿ: ನಖ್ವಿ
ನವದೆಹಲಿ, ಮೇ.22: ಗೋಹತ್ಯೆ ನಿಷೇಧದ ಸಮಸ್ಯೆ ಇನ್ನೂ ಬಗೆಹರಿಯದೆ ಚರ್ಚೆಯಲ್ಲಿರುವಾಗಲೇ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ನೀಡಿರುವ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಗೋ ಮಾಂಸ ತಿನ್ನಬೇಕೆನಿಸಿದರೆ ಪಾಕ್ಸಿತಾನಕ್ಕೆ ಹೋಗಿ ಎಂದು ಕರೆ ನೀಡಿದ್ದಾರೆ.
ಗೋಮಾಂಸ ಮಾರಾಟದ ಮೇಲೆ ಹೇರಿರುವ ನಿಷೇಧವನ್ನು ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಆಜ್ ತಕ್ ಟಿವಿ ಜೊತೆ ನಡೆಸಲಾದ ಮಂಥನ್ ಕಾರ್ಯಕ್ರಮದಲ್ಲಿ ಸಮರ್ಥಿಸಿಕೊಂಡಿದ್ದಾರೆ.

ಇದು ಲಾಭ ನಷ್ಟದ ಪ್ರಶ್ನೆಯಲ್ಲ. ನಂಬಿಕೆ ಹಾಗೂ ಭಾವನಾತ್ಮಕ ವಿಷಯವಾಗಿದೆ. ಗೋವುಗಳ ಬಗ್ಗೆ ಹಿಂದೂಗಳು ಪವಿತ್ರವಾದ ಭಾವನೆ ಇಟ್ಟುಕೊಂಡಿದ್ದಾರೆ. ಇದು ಅವರ ಧಾರ್ಮಿಕ ನಂಬಿಕೆ ಪ್ರಶ್ನೆಯಾಗಿದೆ. ಗೋಹತ್ಯೆ ಮಾಡುವುದು ಸರಿಯಲ್ಲ. ಯಾರಿಗೆ ಗೋಮಾಂಸ ತಿನ್ನದೆ ಬದುಕಲು ಸಾಧ್ಯವೇ ಇಲ್ಲವೋ, ಅಂಥವರು ಪಾಕಿಸ್ತಾನ, ಅರಬ್ ದೇಶ ಅಥವಾ ಗೋಮಾಂಸ ಲಭ್ಯವಿರುವ ದೇಶಕ್ಕೆ ಹೋಗಿ ತಿನ್ನಬಹುದು ಎಂದು ನಖ್ವಿ ಹೇಳಿದ್ದಾರೆ.
ಇತ್ತೀಚೆಗೆ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಕೆಲವು ರಾಜ್ಯಗಳಲ್ಲಿ ಜಾರಿಗೆ ತಂದಿರುವ ಗೋಮಾಂಸ ಮಾರಾಟ ನಿಷೇಧವನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು. ವಿಶೇಷವಾಗಿ ಹೆಚ್ಚು ಮುಸ್ಲಿಂ ಜನಾಂಗ ಹೊಂದಿರುವ ರಾಜ್ಯಗಳಾದ ಗೋವಾ, ಜಮ್ಮು ಮತ್ತು ಕಾಶ್ಮೀರ, ಹಾಗೂ ಕೇರಳದಲ್ಲಿ ಈ ನಿಷೇಧವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಉತ್ತರವಾಗಿ ನಖ್ವಿ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಸರ್ಕಾರ ಮುಸ್ಲಿಮರ ವಿರೋಧಿಯಲ್ಲ, ಮುಸ್ಲಿಮರ ಶಿಕ್ಷಣ, ಬಡತನ ನಿರ್ಮೂಲನೆಗಾಗಿ ಅನೇಕ ಸಾಮಾಜಿಕ ಭದ್ರತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ. (ಐಎಎನ್ಎಸ್)












Click it and Unblock the Notifications