NEET: ಸಂಸತ್ ಆವರಣದಲ್ಲಿ ಡಿಎಂಕೆ ಸಂಸದರ ಪ್ರತಿಭಟನೆ
ನವದೆಹಲಿ, ಸೆ. 14: ವೈದ್ಯಕೀಯ ವೃತ್ತಿಪರ ಕೋರ್ಸ್ ಪ್ರವೇಶಕ್ಕಾಗಿ ನಡೆಸಲಾಗುವ National Eligibility-cum-Entrance Test(NEET)ವಿರುದ್ಧ ನಿಂತಿದ್ದ ತಮಿಳುನಾಡು ಸಿಡಿದೆದ್ದಿದೆ. ದೇಶದಲ್ಲಿ 15 ಲಕ್ಷಕ್ಕೂ ಅಧಿಕ ಮಂದಿ ಆಕಾಂಕ್ಷಿಗಳು ಪರೀಕ್ಷೆ ಬರೆಯುವ ವೇಳೆಗೆ ತಮಿಳುನಾಡಿನಲ್ಲಿ ಸರಣಿ ಆತ್ಮಹತ್ಯೆ ಕಾಡತೊಡಗಿದೆ.
ಹೀಗಾಗಿ, ನೀಟ್ ವಿರುದ್ಧ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಇದೇ ವೇಳೆ ಸಂಸತ್ತಿನಲ್ಲಿ ಇಂದು ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಸಂಸದರು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಡಿಎಂಕೆ ಸಂಸದರಾದ ಟಿಆರ್ ಬಾಲು, ತಿರುಚ್ಚಿ ಶಿವ, ಕನಿಮೊಳಿ ಅವರು ಪ್ರತಿಭಟನೆ ನಡೆಸಿದರು. ನಂತರ ಮಾತನಾಡಿದ ಸಂಸದ ಶಿವ, ''ಬಡವರು, ಗ್ರಾಮೀಣ ಭಾಗದವರಿಗೆ ನೀಟ್ ಮಾರಕವಾಗಿ ಪರಿಣಮಿಸಿದೆ. ಶಾಲೆಗಳಲ್ಲಿ ಹೆಚ್ಚಿನ ಅಂಕ ಗಳಿಸಿದವರು ನೀಟ್ ಪರೀಕ್ಷೆಯಲ್ಲಿ ವೈಫಲ್ಯ ಕಾಣುತ್ತಿದ್ದಾರೆ. ಖಾಸಗಿ ಕೋಚಿಂಗ್ ಸಿಗದ ಕಾರಣ, ಪರೀಕ್ಷೆಯಲ್ಲಿ ಫೇಲ್ ಆಗುವ ಭೀತಿಯಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ'' ಎಂದು ಹೇಳಿದರು.

2017ರಲ್ಲಿ ಅರಿಯಲೂರಿನ ಮೆಡಿಕಲ್ ಕೋರ್ಸ್ ಆಕಾಂಕ್ಷಿ ಅನಿತಾ ಆತ್ಮಹತ್ಯೆ ಪ್ರಕರಣದ ನಂತರ ತಮಿಳುನಾಡಿನಲ್ಲಿ ನೀಟ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕೊವಿಡ್ 19 ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸದಂತೆ ಕೋರ್ಟ್ ಮೆಟ್ಟಿಲೇರಿದರೂ ಫಲ ಸಿಗಲಿಲ್ಲ. ಡಿಎಂಕೆ ಅಲ್ಲದೆ ಎಐಎಡಿಎಂಕೆ ಕೂಡಾ ಕೇಂದ್ರ ಸರ್ಕಾರದ ವಿರುದ್ಧ ದನಿಯೆತ್ತಿತ್ತು.
ಧರ್ಮಪುರಿಯ ಇಲಕ್ಕಿಯಂಪಟ್ಟಿ ಎಂಬ ಊರಿನ 20 ವರ್ಷದ ಯುವಕ ಎಂ ಆದಿತ್ಯ, ನಾಮಕ್ಕಲ್ ಜಿಲ್ಲೆ ತಿರುಚೆಂಗೊಡೆಯ 21ವರ್ಷದ ಮೋತಿಲಾಲ್ ಹಾಗೂ ಮದುರೈನ ಯುವತಿ ಜ್ಯೋತಿಶ್ರೀ ಎಲ್ಲರೂ ಪರೀಕ್ಷೆ ಭಯ ಹಾಗೂ ವೈಫಲ್ಯಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.












Click it and Unblock the Notifications