ಅಣ್ಣನ ಪರಿಸ್ಥಿತಿ ಕಂಡು ಕಣ್ಣೀರು ಹಾಕಿದ ಡಿ.ಕೆ.ಸುರೇಶ್
Recommended Video
ನವದೆಹಲಿ, ಸೆಪ್ಟೆಂಬರ್ 04: ಅಣ್ಣ ಡಿ.ಕೆ.ಶಿವಕುಮಾರ್ ಗೆ ಒದಗಿ ಬಂದ ದುಸ್ಥಿತಿ ಕಂಡು ತಮ್ಮ ಡಿ.ಕೆ.ಸುರೇಶ್ ಕಣ್ಣೀರು ಹಾಕಿದ್ದಾರೆ.
ಇಂದು ಡಿ.ಕೆ.ಶಿವಕುಮಾರ್ ಅವರನ್ನು ಹತ್ತು ದಿನಗಳ ಕಾಲ ಇಡಿ ವಶಕ್ಕೆ ನೀಡಲಾಯಿತು. ಈ ಸಮಯ ಇಡಿ ಕಚೇರಿಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಕಣ್ಣೀರು ಹಾಕಿದರು.
ಬಿಜೆಪಿಯ ಸೇಡಿನ ರಾಜಕೀಯಕ್ಕೆ ಡಿ.ಕೆ.ಶಿವಕುಮಾರ್ ಬಲಿಯಾಗಿದ್ದಾರೆ ಎಂದು ಹೇಳಿದ ಡಿ.ಕೆ.ಸುರೇಶ್ ಗದ್ಗದಿತರಾದರು. ಕಳೆದ ಶುಕ್ರವಾರ ಡಿ.ಕೆ.ಶಿವಕುಮಾರ್ ವಿಚಾರಣೆಗೆಂದು ಬಂದಾಗಿನಿಂದಲೂ ಡಿ.ಕೆ.ಸುರೇಶ್ ಅಣ್ಣನ ನೆರಳಾಗಿಯೇ ಇದ್ದರು.

'ನಾವು ಕಾನೂನಿಗೆ ಗೌರವ ಕೊಡುತ್ತೇವೆ, ಡಿ.ಕೆ.ಶಿವಕುಮಾರ್ ಅವರು ತನಿಖೆಗೆ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಮುಂದಿನ ಕಾನೂನು ಹೋರಾಟದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ' ಎಂದು ಡಿ.ಕೆ.ಸುರೇಶ್ ಹೇಳಿದರು.
'ನನ್ನನ್ನು ನೋಡಲು ಯಾರೂ ರಾಜ್ಯದಿಂದ ಬರುವುದು ಬೇಡ, ನಾನೇ ಶೀಘ್ರವಾಗಿ ರಾಜ್ಯಕ್ಕೆ ಬರುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ' ಎಂದು ಡಿ.ಕೆ.ಸುರೇಶ್ ಮಾಹಿತಿ ನೀಡಿದರು.
ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಯಾರೂ ಕೂಡ ಆತಂಕಕ್ಕೆ ಒಳಗಾಗುವುದು ಬೇಡ. ಡಿಕೆಶಿ ಎಲ್ಲವನ್ನೂ ಗೆದ್ದುಕೊಂಡು ಹೊರಗೆ ಬರುತ್ತಾರೆ. ನಾವು ಯಾವುದೇ ರೀತಿಯ ಅಪರಾಧಗಳನ್ನು ಮಾಡಿಲ್ಲ. ಬಿಜೆಪಿಯವರು ಕಾನೂನು ತಿರುಚುತ್ತಿದ್ದಾರೆ ಎಂದು ಅವರು ಹೇಳಿದರು.
ವಿರೋಧ ಪಕ್ಷದಲ್ಲಿನ ಶಕ್ತಿವಂತ ಅಭ್ಯರ್ಥಿಗಳನ್ನು ಹತ್ತಿಕ್ಕುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಇದಕ್ಕೆ ಕರ್ನಾಟಕದಿಂದ ಡಿ.ಕೆ.ಶಿವಕುಮಾರ್ ಬಲಿಯಾಗಿದ್ದಾರೆ, ನಾವೆಲ್ಲರೂ ಒಗ್ಗಟ್ಟಾಗಿ ಮೋದಿ ಸರ್ಕಾರದ ವಿರುದ್ಧ ಹೋರಾಟ ಮಾಡೋಣ ಎಂದು ಡಿ.ಕೆ.ಸುರೇಶ್ ಕರೆ ನೀಡಿದರು.












Click it and Unblock the Notifications