ಇಡಿ ವಶದಲ್ಲಿ ಅನುಭವಿಸಿದ ಕಷ್ಟ ಹೇಳಿಕೊಂಡ ಡಿ.ಕೆ.ಶಿವಕುಮಾರ್
Recommended Video
ನವದೆಹಲಿ, ಸೆಪ್ಟೆಂಬರ್ 17: ಜಾರಿ ನಿರ್ದೇಶನಾಲಯ (ಇಡಿ) ವಶದಲ್ಲಿರುವ ಡಿ.ಕೆ.ಶಿವಕುಮಾರ್ ವಶದಲ್ಲಿ ತಾವು ಅನುಭವಿಸುತ್ತಿರುವ ಕಷ್ಟವನ್ನು ಬೆಂಬಲಿಗರ ಬಳಿ ಇಂದು ಹೇಳಿಕೊಂಡಿದ್ದಾರೆ.
ಇಡಿ ವಶದಿಂದ ಡಿ.ಕೆ.ಶಿವಕುಮಾರ್ ಅವರನ್ನು ರೋಸ್ ಅವೆನ್ಸೂನ ವಿಶೇಷ ನ್ಯಾಯಾಲಯದ ಬಳಿ ಕರೆದುಕೊಂಡು ಬಂದಾಗ ಬೆಂಬಲಿಗನೊಬ್ಬ 'ಶೇವ್ ಮಾಡಿಕೊಂಡು ಬರೋದು ಅಲ್ವೇನಣ್ಣ' ಎಂದು ಕೇಳಿದ್ದಾನೆ.
ಬೆಂಬಲಿಗನ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, 'ಶೇವ್ ಇರಲಿ, ಸ್ನಾನ ಮಾಡಿ ಎರಡು ದಿನ ಆಯ್ತು' ಎಂದು ಪ್ರತ್ಯುತ್ತರ ನೀಡಿದ್ದಾರೆ.

ಸೆಪ್ಟೆಂಬರ್ 13 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾಗಲೂ ಡಿ.ಕೆ.ಶಿವಕುಮಾರ್ ಅವರು ನ್ಯಾಯಾಲಯದ ಮುಂದೆ ತಮ್ಮ ಕಷ್ಟವನ್ನು ಹೇಳಿಕೊಂಡು, ಇಡಿ ಅಧಿಕಾರಿಗಳು ಕಿರುಕುಳ ನೀಡುತ್ತಿರುವುದಾಗಿ ದೂರಿದ್ದರು.
'ರಕ್ತದ ಒತ್ತಡ ಹೆಚ್ಚಾಗಿ, ಸೂಜಿ ಚುಚ್ಚಿದ ಜಾಗದಿಂದ ರಕ್ತ ಒಸರುತ್ತಿದ್ದರೂ ಬಿಡದೆ ಇಡಿ ಅಧಿಕಾರಿಗಳು ವಿಚಾರಣೆಗೆ ಕರೆದುಕೊಂಡು ಹೋದರು, ವಿಶ್ರಾಂತಿಯೇ ನೀಡದೆ ವಿಚಾರಣೆ ಮಾಡುತ್ತಿದ್ದಾರೆ' ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದ್ದರು.
ಡಿ.ಕೆ.ಶಿವಕುಮಾರ್ ಅವರ ಮನವಿಗೆ ಸ್ಪಂದಿಸಿದ್ದ ನ್ಯಾಯಾಧೀಶರು, ಮೊದಲಿಗೆ ವೈದ್ಯಕೀಯ ತಪಾಸಣೆ ಮಾಡಿ, ಆ ನಂತರವಷ್ಟೆ ಅವರನ್ನು ವಿಚಾರಣೆಗೆ ಒಳಪಡಿಸಿ ಎಂದಿದ್ದರು. ಆದರೆ ಈ ನಾಲ್ಕು ದಿನದಲ್ಲಿ (ಸೆ.13 ರಿಂದ ಸೆ.17) ವರೆಗೆ ಡಿ.ಕೆ.ಶಿವಕುಮಾರ್ ಬಹುಪಾಲು ಸಮಯವನ್ನು ಆಸ್ಪತ್ರೆಯಲ್ಲಿಯೇ ಕಳೆದಿದ್ದಾರೆ.
14 ದಿನದ ಇಡಿ ಕಸ್ಟಡಿ ಅಂತ್ಯವಾದ ಕಾರಣ ಇಂದು ಡಿ.ಕೆ.ಶಿವಕುಮಾರ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಡಿ.ಕೆ.ಶಿವಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಆದರೆ ಅವರ ಆರೋಗ್ಯ ಸರಿ ಇಲ್ಲದ ಕಾರಣ, ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಅವಶ್ಯಕತೆ ಇದ್ದರಷ್ಟೆ ಅಲ್ಲಿಯೇ ಉಳಿಸಿಕೊಳ್ಳಲಾಗುತ್ತದೆ. ಜಾಮೀನು ಅರ್ಜಿ ನಾಳೆ ವಿಚಾರಣೆಗೆ ಬರಲಿದೆ.












Click it and Unblock the Notifications