ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ನವದೆಹಲಿ, ಸೆಪ್ಟೆಂಬರ್ 18: ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.
ಜಾರಿ ನಿರ್ದೇಶನಾಲಯ (ಇಡಿ) ಪರ ಹಿರಿಯ ವಕೀಲರಾದ ನಟರಾಜ್ ಅವರು ಇಂದು ವಿಚಾರಣೆಗೆ ಬಾರದೇ ಇದ್ದ ಕಾರಣ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.
ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಇಡಿ ಯಿಂದ ಬಂಧನಕ್ಕೆ ಒಳಗಾಗಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆ ಇಂದು ದೆಹಲಿ ರೋಸ್ ಅವೆನ್ಯೂನ ವಿಶೇಷ ನ್ಯಾಯಾಲಯದಲ್ಲಿ ನಡೆದಿತ್ತು. ಇಂದು ಜಾಮೀನು ಸಿಗುವ ನಿರೀಕ್ಷೆಯನ್ನು ಡಿಕೆಶಿ ಆಪ್ತರು ವ್ಯಕ್ತಪಡಿಸಿದ್ದರು. ಆದರೆ ಇಂದೂ ಭ್ರಮ ನೀರಸಗೊಂಡಿದೆ.

ಇಂದು ವಿಚಾರಣೆ ಆರಂಭವಾದಾಗ ಡಿ.ಕೆ.ಶಿವಕುಮಾರ್ ಅವರ ಪರ ಹಿರಿಯ ವಕೀಲರಾದ ಅಭಿಷೇಕ್ ಸಿಂಘ್ವಿ ಅವರು ವಾದ ಆರಂಭಿಸಿದರು.
'ಸಚಿನ್ ನಾರಾಯಣ್ ಎಂಬುವರ ಮನೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ಹಣ ದೊರೆತಿದೆ ಎನ್ನಲಾಗಿದೆ, ಆದರೆ ಸ್ವತಃ ಸಚಿನ್ ಅವರು ಉದ್ದಿಮೆದಾರರಾಗಿದ್ದು, 30 ಬಾರ್ ಹೊಂದಿದ್ದಾರೆ. ಅವರ ಮನೆಗೆ ಹಣ ಬರುತ್ತಲೇ ಇರುತ್ತದೆ. ಅವರ ಮನೆಯಲ್ಲಿ ಸಿಕ್ಕಿದ್ದು ಅವರದ್ದೇ ಹಣ' ಎಂದು ವಾದಿಸಿದರು.
ವಾದ ಮುಂದುವರೆಸಿ ಡಿ.ಕೆ.ಶಿವಕುಮಾರ್ ಅವರ ಘೋಷಿತ ಆಸ್ತಿ ಮತ್ತು ಇಡಿ ಆರೋಪಿಸುತ್ತಿರುವ ದೊರೆತ ಹಣ ಇವನ್ನೆಲ್ಲಾ ಪ್ರಸ್ತಾಪಿಸಿ ಡಿ.ಕೆ.ಶಿವಕುಮಾರ್ ಅವರು ತಪ್ಪು ಮಾಡಿಲ್ಲವೆಂದು ವಾದಿಸಿದರು. ಅಭಿಷೇಕ್ ಸಿಂಘ್ವಿ ಅವರ ವಾದ ಮುಗಿಯುವುದಕ್ಕೆ ಬಂದರೂ ಇಡಿ ಪರ ವಕೀಲ ನಟರಾಜ್ ನ್ಯಾಯಾಲಯಕ್ಕೆ ಬರಲಿಲ್ಲ.
ಹಿರಿಯ ವಕೀಲ ನಟರಾಜನ್ ನ್ಯಾಯಾಲಯಕ್ಕೆ ಬಂದಿಲ್ಲ ಹಾಗಾಗಿ ವಿಚಾರಣೆ ನಾಳೆಗೆ ಮುಂದೂಡುವಂತೆ ಇಡಿ ಪರ ಕಿರಿಯ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಅಂತೆಯೇ ನ್ಯಾಯಾಧೀಶ ಅಜಯ್ಕುಮಾರ್ ಕುಹುರ್ ಅವರು ವಿಚಾರಣೆಯನ್ನು ನಾಳೆ ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.
ವಿಚಾರಣೆಯನ್ನು ನಾಳೆಗೆ ಮುಂದೂಡಿದ ಬಳಿಕ ಹಠಾತ್ತನೆ ನಟರಾಜನ್ ಅವರು ನ್ಯಾಯಾಲಯದ ಆವರಣದಲ್ಲಿ ಕಾಣಿಸಿಕೊಂಡರು. ನಟರಾಜನ್ ಅವರು ನ್ಯಾಯಾಲಯದ ಒಳಕ್ಕೆ ಬರುವವರಿದ್ದರು. ಆದರೆ ಅಷ್ಟರಲ್ಲಿಯೇ ಇಡಿ ಅಧಿಕಾರಿಗಳು ಅವರನ್ನು ತಡೆದು ಬೇರೆ ಕೊಠಡಿಗೆ ಕರೆದುಕೊಂಡು ಹೋದರು.












Click it and Unblock the Notifications