ಎಎಪಿ ತೊರೆಯುವ ಸುಳಿವು ನೀಡಿದ ಶಾಸಕಿ ಅಲ್ಕಾ ಲಂಬಾ
ನವದೆಹಲಿ, ಮೇ 26: ದೆಹಲಿಯ ಚಾಂದಿನಿ ಚೌಕ್ ಕ್ಷೇತ್ರದ ಹಾಲಿ ಶಾಸಕಿ, ಆಮ್ ಆದ್ಮಿ ಪಕ್ಷದ ನಾಯಕಿ ಅಲ್ಕಾ ಲಂಬಾ ಅವರು ಆಮ್ ಆದ್ಮಿ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. 2020ರಲ್ಲಿ ಆಮ್ ಆದ್ಮಿ ಪಕ್ಷ ಜೊತೆಗಿನ ಪಯಣ ಮುಗಿಯಲಿದೆ ಎಂದು ಹೇಳಿದ್ದಾರೆ.
ಆದರೆ, ಪರೋಕ್ಷವಾಗಿ ಎಎಪಿ ತೊರೆಯುವ ಬಗ್ಗೆ ಲಂಬಾ ಸುಳಿವು ನೀಡಿದ್ದಾರೆ. ಮುಂದಿನ ವರ್ಷದ ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ನಿಗದಿಯಾಗಿದೆ. ಚುನಾವಣೆ ಬಳಿಕ ಪಕ್ಷ ತೊರೆಯುತ್ತಾರೋ ಅಥವಾ ಅದಕ್ಕೂ ಮೊದಲೇ ತೊರೆಯುತ್ತಾರೋ ಗೊತ್ತಿಲ್ಲ.
ಲೋಕಸಭೆ ಚುನಾವಣೆ 2019ರಲ್ಲಿ 7ಕ್ಕೆ ಏಳು ಕ್ಷೇತ್ರಗಳಲ್ಲಿ ಕಳಪೆ ಸಾಧನೆ ಮಾಡಿದ ಎಎಪಿಯ ಸೋಲಿಗೆ ಯಾರು ಹೊಣೆ ಎಂದು ಅರವಿಂದ್ ಕೇಜ್ರಿವಾಲ್ ರನ್ನು ಪ್ರಶ್ನಿಸಿದ ಶಾಸಕಿ ಅಲ್ಕಾ ಲಂಬಾರನ್ನು ಶನಿವಾರದಂದು ಪಕ್ಷದ ಅಧಿಕೃತ ವಾಟ್ಸಾಪ್ ಗ್ರೂಪಿನಿಂದ ಹೊರಕ್ಕೆ ಹಾಕಲಾಗಿದೆ.
ದೆಹಲಿ ಈಶಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿದ್ದ ದಿಲೀಪ್ ಪಾಂಡೆ ಅವರು ಅಲ್ಕಾ ಅವರನ್ನು ಗ್ರೂಪಿನಿಂದ ಹೊರಹಾಕಿರುವ ಸ್ಕೀನ್ ಶಾಟ್ ಗಳನ್ನು ಟ್ವೀಟ್ ಮಾಡಲಾಗಿದೆ. ಈ ಹಿಂದೆ ರಾಜೀವ್ ಗಾಂಧಿ ಅವರ ಭಾರತರತ್ನ ಹಿಂಪಡೆಯುವ ಚರ್ಚೆ ಬಂದಾಗ, ರಾಜೀವ್ ಗಾಂಧಿ ಪರ ವಾದಿಸಿದ್ದ ಕಾರಣಕ್ಕೆ ಅಲ್ಕಾ ಅವರನ್ನು ವಾಟ್ಸಾಪ್ ಗ್ರೂಪಿನಿಂದ ಹೊರ ಹಾಕಲಾಗಿತ್ತು.
ನಾಲ್ಕು ತಿಂಗಳಿನಿಂದ ಪಕ್ಷದ ಪ್ರಮುಖರನ್ನು ಸಂಪರ್ಕಿಸಲು ಯತ್ನಿಸಿ, ವಿಫಲಳಾಗಿದ್ದೇನೆ. ಹೀಗಾಗಿ ನಾನು ಈ ಬಾರಿ ಪಕ್ಷದ ಪರ ಪ್ರಚಾರದಲ್ಲಿ ಭಾಗಿಯಾಗುವುದಿಲ್ಲ ಎಂದು ಲೋಕಸಭೆ ಚುನಾವಣೆಯೊಂದ ದೂರವುಳಿದಿದ್ದರು. ನನಗೆ ಸದ್ಯಕ್ಕೆ ಯಾವುದೇ ಆಫರ್ ಬಂದಿಲ್ಲ, ಯಾರೊಬ್ಬರೂ ನನ್ನನ್ನು ಭೇಟಿ ಮಾಡಿ ಮಾತನಾಡಿಲ್ಲ, ಆದರೆ, ಈ ರೀತಿ ಆಫರ್ ಬಂದರೆ ಅದನ್ನು ಗೌರವಯುತವಾಗಿ ಪರಿಗಣಿಸುತ್ತೇನೆ. ಕಾಂಗ್ರೆಸ್ ಜತೆ 20 ವರ್ಷಗಳ ನಂಟಿದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು

ಕಾಂಗ್ರೆಸ್ ಜತೆ ಎಎಪಿ ಮೈತ್ರಿ
ದೆಹಲಿಯಲ್ಲದೆ, ಹರ್ಯಾಣ, ಪಂಜಾಬ್ ನಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಲು ಇನ್ನಿಲ್ಲದ್ದಂತೆ ಬೇಡಿದ ಎಎಪಿಯ ಹುಳುಕು ಎಲ್ಲರಿಗೂ ಗೊತ್ತಾಗಿದೆ ಎಂದು ಅಲ್ಕಾ ಹೇಳಿದ್ದಾರೆ.2013ರಲ್ಲಿ ಆಮ್ ಆದ್ಮಿ ಪಕ್ಷ ಸೇರಿದ ಲಂಬಾ, ಚಾಂದಿನಿ ಚೌಕ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದು, ಸ್ಥಳೀಯವಾಗಿ ಜನಪ್ರಿಯತೆ ಉಳಿಸಿಕೊಂಡಿದ್ದಾರೆ. ಆದರೆ, ಶೀಲಾ ದೀಕ್ಷಿತ್ ಅವರು ಹಿಂತಿರುಗಿದ ಬಳಿಕ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎಎಪಿ ಮೈತ್ರಿ ಅಸಾಧ್ಯವಾಯಿತು.

ಎಎಪಿಯಲ್ಲಿ ಪರಿಸ್ಥಿತಿ ಬದಲಾಗಿದೆ
ಬಿಜೆಪಿಯನ್ನು ಆಡಳಿತದಿಂದ ದೂರ ಇಡಬಲ್ಲ ಪಕ್ಷ ಎಂದೆನಿಸಿದ್ದರಿಂದ ನಾನು ಎಎಪಿ ಸೇರಿದೆ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಚಾಂದಿನಿ ಚೌಕ್ ಹಾಗೂ ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಪ್ರಭಾವ ಹೆಚ್ಚಿಸಿಕೊಂಡಿದೆ. ಎಎಪಿ ಉದ್ದೇಶವೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದೇ ಆಗಿದ್ದಲ್ಲಿ ನಾನು ಕಾಂಗ್ರೆಸ್ ಸೇರಿ ಅಧಿಕೃತವಾಗಿ ಮೂಲ ಉದ್ದೇಶದ ಪರ ಹೋರಾಟ ನಡೆಸುವುದರಲ್ಲಿ ತಪ್ಪೇನಿಲ್ಲ ಎಂದಿದ್ದರು.

ಶಾಸಕಿ ಅಲ್ಕಾ ಲಂಬಾ ರಾಜೀನಾಮೆಗೆ ಒತ್ತಡ
ಕಳೆದ ತಿಂಗಳು ಗ್ರೇಟರ್ ಕೈಲಾಶ್ ಕ್ಷೇತ್ರದ ಎಎಪಿ ಶಾಸಕ ಸೌರಭ್ಭಾರದ್ವಾಜ್ ಜೊತೆ ಅಲ್ಕಾ ಲಂಬಾ ಟ್ವೀಟ್ ವಾರ್ ನಡೆಸಿದ್ದರು.ನಂತರ ಲಂಬಾ ಅವರ ರಾಜೀನಾಮೆಗೆ ಆಗ್ರಹಿಸಿದ್ದರು. ಈ ಕುರಿತು ಮಾತನಾಡಿದ ಲಂಬಾ, ಪಕ್ಷದ ನಾಯಕರು ಪದೇ ಪದೇ ನನ್ನ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಏನೇ ಆಗಿದ್ದರೂ ಪಕ್ಷ ಮತ್ತು ನನ್ನ ನಡುವೆ ಆಗಿದೆ. ನನ್ನ ಕ್ಷೇತ್ರದ ಜನರ ಕೈಯನ್ನು ನಾನು ಬಿಡುವುದಿಲ್ಲ. ಅವರಿಂದ ಆಯ್ಕೆಯಾಗಿರುವ ನಾನು ಅವರ ಒಳಿತಿಗೆ ಪ್ರಾರ್ಥಿಸುತ್ತೇನೆ. ನನ್ನ ಕ್ಷೇತ್ರದ ಅಭಿವೃದ್ಧಿಯತ್ತ ಮಾತ್ರ ನಾನು ಗಮನ ಹರಿಸುತ್ತೇನೆ ಎಂದರು.

ಕಾಂಗ್ರೆಸ್ ಸೇರುವ ಇಚ್ಛೆ ಕೂಡಾ ಹೊಂದಿದ್ದಾರೆ.
ವಿದ್ಯಾರ್ಥಿ ಸಂಘಟನೆ ನಾಯಕಿಯಾಗಿ 90ರ ದಶಕದಲ್ಲಿ ಬೆಳೆದ ಲಂಬಾ ಅವರು 1995ರಲ್ಲಿ ದೆಹಲಿ ವಿವಿ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆಯಾಗಿದ್ದರು. ಕಾಂಗ್ರೆಸ್ಸಿನ ವಿದ್ಯಾರ್ಥಿ ಸಂಘಟನೆ ಎನ್ ಎಸ್ ಯುಐನ ಸಕ್ರಿಯ ಸದಸ್ಯರಾಗಿದ್ದ ಲಂಬಾ ಅವರು 2002ರಲ್ಲಿ ಮಹಿಳಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2013ರಲ್ಲಿ ಆಮ್ ಆದ್ಮಿ ಪಕ್ಷ ಸೇರಿದ ಲಂಬಾ, ಚಾಂದಿನಿ ಚೌಕ್ ವಿಧಾನಸಭಾ ಕ್ಷೇತ್ರದಿಂದ 2015ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. 2013ರಿಂದ 2020 ರ ತನಕ ನನ್ನ ಪಯಣ ಆಶಾದಾಯಕವಾಗಿತ್ತು. ಎಲ್ಲಾ ಕ್ರಾಂತಿಕಾರಿ ಸಂಗಾತಿಗಳಿಗೆ ನನ್ನ ಅಭಿನಂದನೆಗಳು ಎಂದಿದ್ದಾರೆ












Click it and Unblock the Notifications