ಹಣ ವಿತ್ ಡ್ರಾ ನಿಯಮಗಳಲ್ಲಿ ರೈತರಿಗೆ ಸಡಿಲಿಕೆ
ರೈತರು ಮತ್ತು ಕೃಷಿ ವ್ಯಾಪಾರಿಗಳ ಅನುಕೂಲಕ್ಕಾಗಿ ಹಣ ವಿತ್ ಡ್ರಾ ಮಿತಿ ನಿಯಮಗಳನ್ನು ಕೇಂದ್ರ ಸರ್ಕಾರ ಗುರುವಾರ ಸಡಿಲಗೊಳಿಸಿದೆ.
ನವದೆಹಲಿ, ನವೆಂಬರ್, 16: ರೂ. 500 ಹಾಗು ರೂ. 1,000 ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿದ್ದರಿಂದ ರೈತರು, ವ್ಯಾಪಾರಸ್ಥರು ವಹಿವಾಟು ನಡೆಸಲಾಗದೇ ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದರು.
ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಹಣ ವಿತ್ ಡ್ರಾ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ. ರೈತರು ತಮ್ಮ ಖಾತೆಯಿಂದ ವಾರಕ್ಕೆ 25 ಸಾವಿರ ರೂ. ವರೆಗೂ ವಿತ್ ಡ್ರಾ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ.[ಹಣ ವಿನಿಮಯ ಮಿತಿ 2,000 ರೂ.ಗೆ ಇಳಿಕೆ]
ದೇಶದ ಹಲವು ಭಾಗಗಳಲ್ಲಿ ರಬಿ ಕೃಷಿ ಚಟುವಟಿಕೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಧಕ್ಕೆಯಾಗಬಾರದೆಂಬ ಉದ್ದೇಶದಿಂದ ಈ ನಿಯಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ತಿಳಿಸಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಅವರು "ರಬಿ ಕೃಷಿ ಚಟುವಟಿಕೆಗಳಿಗಾಗಿ ರೈತರು ಬಿತ್ತನೆ ಬೀಜ, ರಸಗೊಬ್ಬರ ಮುಂತಾದವುಗಳನ್ನು ಕೊಳ್ಳುವ ಅಗತ್ಯವಿರುತ್ತದೆ.[ಮದುವೆ ಸಮಾರಂಭಗಳಿಗಾಗಿ 2.5 ಲಕ್ಷ ಡ್ರಾ ಮಾಡಬಹುದು]
ಆದ್ದರಿಂದ ರೈತರು ಮತ್ತು ಕೃಷಿ ವ್ಯಾಪರಸ್ಥರ ಅನುಕೂಲಕ್ಕಾಗಿ ನಿಯಮಗಳನ್ನು ಸಡಿಲಿಸಲಾಗಿದೆ. ರೈತರು ತಮ್ಮ ಖಾತೆಯಿಂದ ಕೃಷಿ ಉತ್ಪನ್ನಗಳಿಗಾಗಿ 25 ಸಾವಿರ ರೂ. ವರೆಗೂ ಹಣ ವಿತ್ ಡ್ರಾ ಮಾಡಬಹುದು ಎಂದು ಹೇಳಿದರು.
ಕಿಸಾನ್ ಕ್ರೆಡಿಟ್ ಕಾರ್ಡ್ ಗಳ ಮೂಲಕವೂ ಸಹ ರೈತರು ಹಣವನ್ನು ವಿತ್ ಡ್ರಾ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.
ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಿ ಬಂದ ದೊಡ್ಡ ಮೊತ್ತದ ಹಣವನ್ನು ಚೆಕ್ ಅಥವಾ ಆರ್ ಟಿ ಜಿ ಎಸ್ ಮೂಲಕ ಖಾತೆಗೆ ಹಾಕಿಕೊಳ್ಳಬಹುದು. ಖಾತೆಯಿಂದ ವಾರಕ್ಕೆ 25 ಸಾವಿರ ರೂ. ವರೆಗೂ ವಿತ್ ಡ್ರಾ ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.