ಚಿಕಿತ್ಸೆ ಬಳಿಕ ಭಾರತಕ್ಕೆ ಮರಳಿದ ಕೇಂದ್ರ ಸಚಿವ ಅರುಣ್ ಜೇಟ್ಲಿ
ನವದೆಹಲಿ, ಫೆಬ್ರವರಿ 9: ಚಿಕಿತ್ಸೆಗಾಗಿ ಜನವರಿಯಲ್ಲಿ ಅಮೆರಿಕಕ್ಕೆ ತೆರಳಿದ್ದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸುಮಾರು ಒಂದು ತಿಂಗಳ ಬಳಿಕ ಭಾರತಕ್ಕೆ ಮರಳಿದ್ದಾರೆ.
ತೊಡೆಯಲ್ಲಿರುವ ಸೂಕ್ಷ್ಮ ಸ್ನಾಯು ಕ್ಯಾನ್ಸರ್ ಚಿಕಿತ್ಸೆಗಾಗಿ ಅವರು ನ್ಯೂಯಾರ್ಕ್ಗೆ ತೆರಳಿದ್ದರು ಎನ್ನಲಾಗಿದೆ.
ಮನೆಗೆ ಮರಳಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಜೇಟ್ಲಿ ಅವರು ಶನಿವಾರ ಮಧ್ಯಾಹ್ನ ಟ್ವೀಟ್ ಮಾಡಿದ್ದಾರೆ.

ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಜೇಟ್ಲಿ ಅವರು ಕಳೆದ ಏಪ್ರಿಲ್ನಲ್ಲಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಡಯಾಲಿಸಿಸ್ಗೆ ಒಳಗಾಗಿದ್ದರು. ಬಳಿಕ ಅವರಿಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.
ಜೇಟ್ಲಿ ಅವರ ಗೈರ ಹಾಜರಿಯಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಮಧ್ಯಂತರ ಹಣಕಾಸು ಸಚಿವ ಖಾತೆಯನ್ನು ನೀಡಲಾಗಿತ್ತು. ಫೆ. 1ರಂದು ಅವರು ಕೇಂದ್ರದ ಕೊನೆಯ ಬಜೆಟ್ ಮಂಡಿಸಿದ್ದರು.
ಅಮೆರಿಕಕ್ಕೆ ಚಿಕಿತ್ಸೆಗೆ ತೆರಳಿದ್ದರೂ ಅರುಣ್ ಜೇಟ್ಲಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರು. ಸರ್ಕಾರದ ಚಟುವಟಿಕೆಗಳು, ಪ್ರತಿಪಕ್ಷಗಳ ಆರೋಪಕ್ಕೆ ಸಾಮಾಜಿಕ ಮಾಧ್ಯಮಗಳ ಮೂಲಕವೇ ಪ್ರತಿಕ್ರಿಯೆ ನೀಡುತ್ತಿದ್ದ ಅವರು, ಬಜೆಟ್ ಮಂಡನೆ ಬಳಿಕ ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನವನ್ನೂ ನೀಡಿದ್ದರು.
ಪಿಟಿಐ ಸುದ್ದಿ ಸಂಸ್ಥೆಯ ವರದಿಯನ್ವಯ ಜೇಟ್ಲಿ ಅವರು ವೇಗವಾಗಿ ಗುಣಮುಖರಾಗುತ್ತಿದ್ದು, ಮುಂದಿನವಾರ ಸಂಸತ್ಗೆ ಹಾಜರಾಗುವ ಸಾಧ್ಯತೆಯೂ ಇದೆ. ಆದರೆ, ಅದು ಡಾಕ್ಟರ್ ಸಲಹೆಯನ್ನು ಅವಲಂಬಿಸಿದೆ.












Click it and Unblock the Notifications