ಕೈಮೀರಿದ ದೆಹಲಿ ಹಿಂಸಾಚಾರ: ಸೋನಿಯಾ ಕೇಳಿದ ಪಂಚ ಪ್ರಶ್ನೆಗೆ ಮೋದಿ, ಶಾ ಬಳಿ ಉತ್ತರವಿದೆಯೇ?
ನವದೆಹಲಿ, ಫೆ 26: ಕೈಮೀರಿ ಹೋಗುತ್ತಿರುವ ದೆಹಲಿ ಹಿಂಸಾಚಾರವನ್ನು ತಹಬಂದಿಗೆ ತರಲು ಸೇನೆಯನ್ನು ಕರೆಸುವಂತೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.
ಮಂಗಳವಾರ (ಫೆ 25) ಅಮಿತ್ ಶಾ ಜೊತೆಗಿನ ಸಭೆಯ ವೇಳೆಯೂ ಕೇಜ್ರಿವಾಲ್ ಈ ಮನವಿಯನ್ನು ಮಾಡಿದ್ದರು. ಆದರೆ, ಪೊಲೀಸರೇ ಪರಿಸ್ಥಿತಿಯನ್ನು ತಿಳಿಗೊಳಿಸಲಿದ್ದಾರೆಂದು ಕೇಂದ್ರ ಗೃಹಸಚಿವರು ಹೇಳಿದ್ದರು.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಈಶಾನ್ಯ ದೆಹಲಿ ಭಾಗದಲ್ಲಿನ ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ, ಸ್ಥಳೀಯರಲ್ಲಿ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ.
ಈ ನಡುವೆ ತುರ್ತು ಪತ್ರಿಕೋಗೋಷ್ಠಿ ಕರೆದ ಎಐಸಿಸಿ ಹಂಗಾಮೀ ಅಧ್ಯಕ್ಷೆ ಸೋನಿಯಾ ಗಾಂಧಿ, ಕೇಂದ್ರ ಮತ್ತು ದೆಹಲಿ ಸರಕಾರಕ್ಕೆ ಐದು ಪ್ರಶ್ನೆಯನ್ನು ಕೇಳಿದ್ದಾರೆ. ಅದು ಹೀಗಿದೆ:

ಕೇಂದ್ರ ಗೃಹ ಸಚಿವಾಲಯದ ಸುಪರ್ದಿಗೆ ದೆಹಲಿಯ ಪೊಲೀಸ್ ವ್ಯವಸ್ಥೆ
ರಾಷ್ಟ್ರ ರಾಜಧಾನಿ ದೆಹಲಿಯ ಪೊಲೀಸ್ ವ್ಯವಸ್ಥೆ ಕೇಜ್ರಿವಾಲ್ ಸರಕಾರಕ್ಕೆ ಬರದೇ, ಕೇಂದ್ರ ಗೃಹ ಸಚಿವಾಲಯದ ಸುಪರ್ದಿಗೆ ಬರುತ್ತದೆ. ಹಾಗಾಗಿ, ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ನೇರವಾಗಿ ಸೋನಿಯಾ ಗಾಂಧಿ ಡಿಮಾಂಡ್ ಮಾಡಿದ್ದಾರೆ. ಜೊತೆಗೆ, ಕೇಜ್ರಿವಾಲ್ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

ಸೋನಿಯಾ ಗಾಂಧಿ ಡಿಮಾಂಡ್
1. "ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರವು ವ್ಯವಸ್ಥಿತವಾಗಿ ನಡೆಯುತ್ತಿದೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲೂ ಹೀಗೆಯೇ ಆಗಿತ್ತು. ಚುನಾವಣೆಯ ಸಮಯದಲ್ಲಿ ತಮ್ಮ ಭಾಷಣಗಳ ಮೂಲಕ ದ್ವೇಷವನ್ನು ಕಕ್ಕಿದ ಬಿಜೆಪಿ ನಾಯಕರು ದೆಹಲಿಯ ವಾತಾವರಣವನ್ನು ಹದಗೆಡಿಸಿದರು. ಪ್ರಚೋದನಾಕಾರಿ ಭಾಷಣ ಮಾಡಿದ ಬಿಜೆಪಿ ನಾಯಕರ ಮೇಲೆ ಕ್ರಮ ಯಾಕೆ ತೆಗೆದುಕೊಳ್ಳಲಿಲ್ಲ?

ಅಮಿತ್ ಶಾ ಏನು ಮಾಡುತ್ತಿದ್ದರು
2. "ದೆಹಲಿಯಲ್ಲಿ ಇಷ್ಟೊಂದು ಹಿಂಸಾಚಾರ ನಡೆಯುತ್ತಿದ್ದರೂ, ಕೇಂದ್ರ ಗೃಹ ಸಚಿವ ಅಮಿತ್ ಶಾ ಏನು ಮಾಡುತ್ತಿದ್ದರು. ಭಾನುವಾರದಿಂದ (ಫೆ 23) ಹಿಂಸಾಚಾರ ನಡೆಯುತ್ತಿದ್ದರೂ ಅಮಿತ್ ಶಾ ಯಾಕೆ ಸುಮ್ಮನಿದ್ದಾರೆ"?
3. ದೆಹಲಿ ಪೊಲೀಸ್ ವ್ಯವಸ್ಥೆ ಕೇಂದ್ರ ಗೃಹಸಚಿವಾಲಯದ ಅಡಿಯಲ್ಲಿ ಬಂದರೂ, ದೆಹಲಿ ಮುಖ್ಯಮಂತ್ರಿಯಾಗಿರುವ ಅರವಿಂದ್ ಕೇಜ್ರಿವಾಲ್ ಇಷ್ಟು ದಿನ ಏನು ಮಾಡುತ್ತಿದ್ದರು. ಪರಿಸ್ಥಿತಿಯ ಗಂಭೀರತೆ ಅವರಿಗೆ ಅರ್ಥವಾಗಲಿಲ್ಲವೇ?

ಗುಪ್ತಚರ ಇಲಾಖೆಗೆ ಗಲಭೆಯ ಮಾಹಿತಿ ಇರಲಿಲ್ಲವೇ
4. "ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹಿಂಸಾಚಾರ ನಡೆಯುತ್ತಿದ್ದರೂ, ಕೇಂದ್ರ ಗುಪ್ತಚರ ಇಲಾಖೆಗೆ ಗಲಭೆಯ ಮಾಹಿತಿ ಇರಲಿಲ್ಲವೇ. ಇಲಾಖೆ ಏನು ಮಾಡುತ್ತಿದೆ"?
5. ದೆಹಲಿ ಪೊಲೀಸರು ಯಾಕೆ ವೈಫಲ್ಯಗೊಂಡರು. ಎಷ್ಟು ಪೊಲೀಸರನ್ನು ಕರ್ತವ್ಯಕ್ಕೆ ನೇಮಿಸಲಾಗಿತ್ತು. ಪರಿಸ್ಥಿತಿ ಕೈಮೀರುತ್ತಿದೆ ಎಂದು ಗೊತ್ತಿದರೂ, ಹೆಚ್ಚಿನ ಪೊಲೀಸರನ್ನು ಯಾಕೆ ನಿಯೋಜಿಸಲಿಲ್ಲ"?












Click it and Unblock the Notifications