ದೆಹಲಿಯ ಗಲಭೆ; ಬಿಜೆಪಿ ನಾಯಕನ ಮನೆಗೆ ಬೆಂಕಿ
ನವದೆಹಲಿ, ಮಾರ್ಚ್ 03 : ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಸಂದರ್ಭದಲ್ಲಿ ಬಿಜೆಪಿ ನಾಯಕ ಮತ್ತು ಆತನ ಸಂಬಂಧಿಕರ ಮನೆಗೆ ಬೆಂಕಿ ಹಚ್ಚಲಾಗಿದೆ. ಕಳೆದ ವಾರ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ 47 ಜನರು ಮೃತಪಟ್ಟಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧ ಹೋರಾಟಗಾರರ ನಡುವೆ ಆರಂಭವಾದ ಘರ್ಷಣೆ ನಂತರ ಹಿಂಸಾಚಾರಕ್ಕೆ ತಿರುಗಿತ್ತು. ಈಶಾನ್ಯ ದೆಹಲಿಯಲ್ಲಿ ಮನೆ, ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು.
ಬಿಜೆಪಿ ಅಲ್ಪ ಸಂಖ್ಯಾತ ಘಟಕದ ಜಿಲ್ಲಾ ಉಪಾಧ್ಯಕ್ಷ ಅಖ್ತರ್ ರಾಜಾ ಮತ್ತು ಅವರ ಸಂಬಂಧಿಕರ ಮನೆಗೆ ಬೆಂಕಿ ಹಚ್ಚಲಾಗಿದೆ. ಫೆಬ್ರವರಿ 25ರಂದು ಭಗೀರಥ್ ವಿಹಾರದಲ್ಲಿರುವ ಮನೆಗೆ ಬೆಂಕಿ ಹಚ್ಚಲಾಗಿದೆ.
ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ದೆಹಲಿ ಸರ್ಕಾರ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಗಂಭೀರವಾಗಿ ಗಾಯಗೊಂಡವರಿಗೆ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದು, ಗಲಭೆಯಲ್ಲಿ ಮನೆ ಕಳೆದುಕೊಂಡವರಿಗೆ ಆಹಾರ ವ್ಯವಸ್ಥೆಯನ್ನು ಮಾಡಲಾಗಿದೆ.

ದುಷ್ಕರ್ಮಿಗಳ ಗುಂಪು
"ಫೆಬ್ರವರಿ 25ರಂದು ಧಾರ್ಮಿಕ ಘೋಷಣೆಗಳನ್ನು ಕೂಗಿ ಮನೆಗೆ ಬೆಂಕಿ ಹಚ್ಚಲಾಗಿದೆ. ನಮ್ಮ ಬಡಾವಣೆಯಲ್ಲಿ 19 ಮುಸ್ಲಿಮರ ಮನೆಗಳಿವೆ. ಅದರಲ್ಲಿ ನಮ್ಮ ಮತ್ತು ಸಂಬಂಧಿಕರ 3 ಮನೆಗೆ ಬೆಂಕಿ ಹಚ್ಚಲಾಗಿದೆ" ಎಂದು ಅಖ್ತರ್ ರಾಜಾ ಹೇಳಿದ್ದಾರೆ.

ಎಲ್ಲರೂ ಹೊರಗಿನವರು
"ದೆಹಲಿಯಲ್ಲಿ ಗಲಭೆ ಮಾಡಿದವರು ಹೊರಗಿನವರು. ಮನೆ ಹೊತ್ತಿ ಉರಿಯುತ್ತಿದ್ದಾಗ ಅಲ್ಲಿಂದ ನಾನು ಮತ್ತು ನನ್ನ ಕುಟುಂಬದ 12 ಸದಸ್ಯರು ಹೊರಗೆ ಓಡಿ ಬಂದೆವು. ಆಗ ದುಷ್ಕರ್ಮಿಗಳ ಗುಂಪು ನಮ್ಮ ಮೇಲೆ ಕಲ್ಲು ತೂರಾಟ ನಡೆಸಿದೆ" ಎಂದು ಅಖ್ತರ್ ರಾಜಾ ಆರೋಪಿಸಿದ್ದಾರೆ.

ಪೊಲೀಸರ ಸಹಾಯ ಕೇಳಿದೆ
"ಮನೆಗೆ ಬೆಂಕಿ ಹಚ್ಚಿದಾಗ ನಾನು ಪೊಲೀಸರ ಸಹಾಯ ಕೇಳಿದೆ. ಆಗ ಸಿಬ್ಬಂದಿ ಕೊರತೆ ಇದೆ ಎಂಬ ಉತ್ತರವನ್ನು ಕೊಟ್ಟರು. ಪಕ್ಷದಿಂದ ಯಾವುದೇ ನಾಯಕರು ನನಗೆ ಸಾಂತ್ವನ ಹೇಳಿಲ್ಲ, ಪರಿಹಾರ ಕೊಟ್ಟಿಲ್ಲ. ಆದರೆ, ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ" ಎಂದು ಅಖ್ತರ್ ರಾಜಾ ಹೇಳಿದ್ದಾರೆ.

ದೆಹಲಿಯಲ್ಲಿ ಕೋಮು ಗಲಭೆ
ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧ ಹೋರಾಟಗಾರರ ನಡುವೆ ಆರಂಭವಾದ ಘರ್ಷಣೆ ನಂತರ ಕೋಮು ಗಲಭೆ ಸ್ವರೂಪ ಪಡೆದುಕೊಂಡಿತ್ತು. ಇದುವರೆಗೂ ಹಿಂಸಾಚಾರದಲ್ಲಿ 47 ಜನರು ಮೃತಪಟ್ಟಿದ್ದಾರೆ. ದೆಹಲಿಯ ಲೆಫ್ಟಿನೆಂಟ್ ಗರ್ವನರ್ ಅನಿಲ್ ಬೈಜಲ್ ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು.












Click it and Unblock the Notifications