ದೆಹಲಿ ಹಿಂಸಾಚಾರ: ಮೃತ ಹೆಡ್ ಕಾನ್ಸ್ ಟೇಬಲ್ ಕುಟುಂಬಕ್ಕೆ 1 ಕೋಟಿ ಪರಿಹಾರ
ನವದೆಹಲಿ, ಫೆಬ್ರವರಿ.27: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಹೆಡ್ ಕಾನ್ಸ್ ಟೇಬಲ್ ರತನ್ ಲಾಲ್ ಕುಟುಂಬಕ್ಕೆ ದೆಹಲಿ ಸರ್ಕಾರ 1 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದೆ. ಈ ಸಂಬಂಧ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್, ದೆಹಲಿ ಪೊಲೀಸರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದರು.
ಹಿಂಸಾಚಾರದಲ್ಲಿ ಪ್ರಾಣತೆತ್ತ ಹೆಡ್ ಕಾನ್ಸ್ ಟೇಬಲ್ ರತನ್ ಲಾಲ್ ಕುಟುಂಬಕ್ಕೆ 1 ಕೋಟಿ ಪರಿಹಾರ ಮತ್ತು ಅವರ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ನೀಡುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದರು. ಕಳೆದ ಫೆಬ್ರವರಿ.24ರಂದು ಗೋಕುಲ್ ಪುರ್ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ರತನ್ ಲಾಲ್ ಮೃತಪಟ್ಟಿದ್ದರು.
ದೆಹಲಿ ಸಂಘರ್ಷ: ಹೆಡ್ ಕಾನ್ಸ್ಟೆಬಲ್ ಸಾವಿನ ಪ್ರಕರಣಕ್ಕೆ ತಿರುವು
ಈಶಾನ್ಯ ದೆಹಲಿಯ ಹಿಂಸಾಚಾರ ಪೀಡಿತ ಪ್ರದೇಶ ಭೇಟಿ ನೀಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದರು. ಕಳೆದ ನಾಲ್ಕು ದಿನಗಳಿಂದ ಹಿಂಸಾಚಾರಕ್ಕೆ ನಲುಗಿದ್ದ ರಾಷ್ಟ್ರ ರಾಜಧಾನಿಯಲ್ಲಿ ಪರಿಸ್ಥಿತಿ ಗುರುವಾರ ಕೊಂಚ ಹತೋಟಿಗೆ ಬಂದಿದೆ. ಇದುವರೆಗೂ ನಡೆದ ಹಿಂಸಾಚಾರದಲ್ಲಿ 27 ಮಂದಿ ಪ್ರಾಣ ಬಿಟ್ಟಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಹಿಂಸಾಚಾರ ನಡೆದ ಈಶಾನ್ಯ ಜಿಲ್ಲೆಯ ಪ್ರದೇಶಗಳು:
ದೆಹಲಿ ಈಶಾನ್ಯ ಜಿಲ್ಲೆಯ ಜಫ್ರಾಬಾದ್, ಮೌಜ್ ಪುರ್, ಬಾಬರ್ ಪುರ್, ಯಮುನಾ ವಿಹಾರ್, ಭಜನ್ ಪುರ, ಚಾಂದ್ ಬಾಗ್ ಮತ್ತು ಶಿವ ವಿಹಾರ್ ಸೇರಿದಂತೆ ಹಲವೆಡೆ ಪೌರತ್ವ ತಿದ್ದುಪಡಿ ಕಾಯ್ದೆ ಪರ ಮತ್ತು ವಿರೋಧಿ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಕಲ್ಲುತೂರಾಟದಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು.












Click it and Unblock the Notifications