ದೆಹಲಿ ಹಿಂಸಾಚಾರದ ಪ್ರಮುಖ ಆರೋಪಿ ಅನ್ಸಾರ್ ಬಿಜೆಪಿಯವನೇ ಅಥವಾ ಎಎಪಿಯವನೇ?
ನವದೆಹಲಿ, ಏಪ್ರಿಲ್ 19: ದೆಹಲಿಯ ಜಹಾಂಗೀರ್ಪುರಿಯಲ್ಲಿ ನಡೆದ ಹಿಂಸಾಚಾರದ ಆರೋಪಿ ಅನ್ಸಾರ್ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ ಜೊತೆ ಗುರುತಿಸಿಕೊಂಡಿದ್ದರು ಎಂದು ಸೋಮವಾರ ಬಿಜೆಪಿ ಪ್ರತಿಪಾದಿಸಿದೆ. ಅದಾಗಿ ಒಂದೇ ದಿನದಲ್ಲಿ ದೆಹಲಿ ಶಾಸಕ ಅತೀಶ್ ಪ್ರತಿಕ್ರಿಯೆ ನೀಡಿದ್ದು, ಅನ್ಸಾರಿಯು ಬಿಜೆಪಿಯ ಸಕ್ರಿಯ ನಾಯಕ ಎಂದು ಆರೋಪಿಸಿದ್ದಾರೆ.
"ಜಹಾಂಗೀರ್ಪುರಿ ಹಿಂಸಾಚಾರ ಪ್ರಮುಖ ಆರೋಪಿ ಅನ್ಸಾರ್ ಬಿಜೆಪಿ ನಾಯಕ. ಬಿಜೆಪಿ ಅಭ್ಯರ್ಥಿ ಸಂಗೀತಾ ಬಜಾಜ್ ಅವರನ್ನು ಕಣಕ್ಕಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಬಿಜೆಪಿ ಗಲಭೆ ಮಾಡಿರುವುದು ಸ್ಪಷ್ಟವಾಗಿದೆ. ಬಿಜೆಪಿ ದೆಹಲಿಯ ಜನರ ಕ್ಷಮೆ ಕೇಳಬೇಕು. ಬಿಜೆಪಿ ಗೂಂಡಾಗಳ ಪಕ್ಷ," ಎಂದು ಶಾಸಕ ಅತೀಶ್ ಟ್ವೀಟ್ ಮಾಡಿದ್ದಾರೆ.
ಜಹಾಂಗೀರ್ಪುರಿ ಹಿಂಸಾಚಾರ ಘಟನೆಯ ಮಾಸ್ಟರ್ಮೈಂಡ್ಗಳು ನಿರ್ದಿಷ್ಟ ಪಕ್ಷದೊಂದಿಗೆ ಏಕೆ ನಂಟು ಹೊಂದಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಪ್ರಶ್ನಿಸಿದ್ದರು. ದೆಹಲಿಯ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಈ ಸಂಬಂಧ ಪತ್ರ ಬರೆದ ಪ್ರವೀಣ್ ಶಂಕರ್ ಕಪೂರ್, ಆರೋಪಿ ಅನ್ಸಾರ್ ಅನ್ನು ಪಕ್ಷದಿಂದ ಹೊರಹಾಕುವಂತೆ ಆಗ್ರಹಿಸಿದ್ದರು.

ದೆಹಲಿ ಜನರಿಗೆ ಉತ್ತರ ನೀಡಿ ಎಂದ ಕಪೂರ್:
"ಜಹಾಂಗೀರ್ಪುರಿ ಗಲಭೆಯಲ್ಲಿ ಭಾಗಿಯಾದ ಯುವಕರು, ಸ್ಪಷ್ಟವಾಗಿ ಎಎಪಿ ಕಾರ್ಯಕರ್ತರಾಗಿದ್ದಾರೆ. ಈ ಕುರಿತು ಆಮ್ ಆದ್ಮಿ ಪಕ್ಷದ ನಾಯಕರು ದೆಹಲಿ ಜನರಿಗೆ ಉತ್ತರ ನೀಡಬೇಕು. ಈ ಹಿಂದೆಯೂ ಎಎಪಿ ಕೌನ್ಸಿಲರ್ ತಾಹಿರ್ ಹುಸೇನ್ ಅವರನ್ನು 2020ರ ದೆಹಲಿ ಗಲಭೆಯ ಪ್ರಮುಖ ಆರೋಪಿಯಾಗಿ ನೋಡಿದ್ದೇವೆ ಎಂದು ಕಪೂರ್ ಪತ್ರದಲ್ಲಿ ತಿಳಿಸಿದ್ದರು.
ಬಿಜೆಪಿಯ ಮತ್ತೊಬ್ಬ ನಾಯಕ ವಿಜೇಂದರ್ ಗುಪ್ತಾ ಕೂಡ ಎಎಪಿ ವಿರುದ್ಧ ವಾಗ್ದಾಳಿ ನಡೆಸಿದರು. "ಮಾದರಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತ" ಎಂಬ ಶೀರ್ಷಿಕೆಯೊಂದಿಗೆ ಅನ್ಸಾರ್ ಅವರ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

ಹಾಗಿದ್ದರೆ ಯಾರು ಈ ಆರೋಪಿ ಅನ್ಸಾರಿ?:
ನವದೆಹಲಿಯ ಜಹಾಂಗೀರ್ಪುರಿ ಪ್ರದೇಶದಲ್ಲಿ ಶನಿವಾರ ನಡೆದ ಹಿಂಸಾಚಾರದಲ್ಲಿ ಅನ್ಸಾರ್ ಪ್ರಮುಖ ಸಂಚುಕೋರ ಎಂದು ಹೇಳಲಾಗುತ್ತಿದೆ. 35 ವರ್ಷದ ಅನ್ಸಾರ್ ಜಹಾಂಗೀರಪುರಿ ಬಿ ಬ್ಲಾಕ್ ನಿವಾಸಿ ಆಗಿದ್ದಾರೆ. ಎರಡು ಹಲ್ಲೆ ಪ್ರಕರಣಗಳು ಸೇರಿದಂತೆ ಇತರ ಸೆಕ್ಷನ್ಗಳ ಅಡಿಯಲ್ಲಿ ಅವರನ್ನು ಪದೇ ಪದೇ ಬಂಧಿಸಲಾಗಿದೆ. ಇದರೊಂದಿಗೆ ಆತನ ವಿರುದ್ಧ ಐದು ಬಾರಿ ಜೂಜು ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಜಹಾಂಗೀರ್ಪುರಿ ಹಿಂಸಾಚಾರ ಪ್ರಕರಣದಲ್ಲಿ ದೆಹಲಿ ಪೊಲೀಸರಿಂದ ಬಂಧಿತರಾಗಿರುವ ಅನ್ಸಾರ್ ಶೇಖ್ ಮತ್ತು ಸೋನು ಶೇಖ್ ಅವರು ಅತ್ಯಾಧುನಿಕ ಬಿಎಂಡಬ್ಲ್ಯು ಸೇರಿದಂತೆ ಇತರ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆಂದು ತಿಳಿದು ಬಂದಿದೆ.
ಇದಕ್ಕೂ ಮುನ್ನ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇತ್ತೀಚೆಗೆ ಬಿಡುಗಡೆಯಾದ 'ಪುಷ್ಪಾ' ಎಂಬ ಮೆಗಾಹಿಟ್ ಚಲನಚಿತ್ರದ "ಮೈ ಜುಕೆಗಾ ನಹಿ" (ನಾನು ಮಂಡಿಯೂರುವುದಿಲ್ಲ) ಎಂಬ ಡೈಲಾಗ್ನ ಪ್ರಸಿದ್ಧ ಕ್ರಿಯೆಯನ್ನು ಅನ್ಸಾರ್ ಅನುಕರಿಸಿದ ನಂತರ ವಿಡಿಯೋ ಸಖತ್ ವೈರಲ್ ಆಗಿ ಹರಿದಾಡಿತ್ತು.
ದೆಹಲಿ ಜಹಾಂಗೀರ್ಪುರಿಯಲ್ಲಿ ನಡೆದ ಹಿಂಸಾಚಾರದ ಘಟನೆ:
ದೆಹಲಿಯ ಜಹಾಂಗೀರ್ಪುರಿಯಲ್ಲಿ ಶನಿವಾರ ಸಂಜೆ ವೇಳೆಗೆ ಹನುಮಾನ್ ಜಯಂತಿ ಆಚರಿಸುತ್ತಿದ್ದ ಸಂದರ್ಭದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ನಡೆಯಿತು. ಪರಸ್ಪರ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಎರಡು ಕೋಮುಗಳ ಜನರು ಕಲ್ಲುತೂರಾಟ ನಡೆಸಿದರು. ಈ ವೇಳೆ 9 ಜನರಿಗೆ ಗಾಯಗಳಾಗಿದ್ದು, ಪೊಲೀಸ್ ಸಿಬ್ಬಂದಿ ಸಹ ಗಾಯಗೊಂಡಿದ್ದರು. ಸಂಜೆ 6 ಗಂಟೆ ವೇಳೆಗೆ ಕಲ್ಲುತೂರಾಟ ನಡೆಸುವುದರ ಜೊತೆಗೆ ಕೆಲವು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ ಪೊಲೀಸರು ಶನಿವಾರವೇ 23 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದರು.












Click it and Unblock the Notifications