ದೆಹಲಿ ಹಿಂಸಾಚಾರ: 3 ಶವ ಪತ್ತೆ, ಸಾವಿನ ಸಂಖ್ಯೆ 45ಕ್ಕೆ ಏರಿಕೆ
ನವದೆಹಲಿ, ಮಾರ್ಚ್ 02: ಸಿಎಎ ಮತ್ತು ಎನ್.ಆರ್.ಸಿ ವಿರೋಧಿಸಿ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 45ಕ್ಕೆ ಏರಿದೆ. ಹಿಂಸಾಚಾರ ಪೀಡಿತ ಪ್ರದೇಶಗಳ ಚರಂಡಿಗಳಲ್ಲಿ 3 ಶವಗಳು ಪತ್ತೆಯಾಗಿದೆ ಎಂದು ದೆಹಲಿ ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಗೋಕುಲ್ ಪುರಿಯ ಚರಂಡಿಯಲ್ಲಿ ಇಬ್ಬರ ಮೃತದೇಹಗಳು ಮತ್ತು ಭಾಗೀರಥಿ ಕಾಲುವೆಯಲ್ಲಿ ಒಂದು ಮೃತದೇಹ ಪತ್ತೆಯಾಗಿದೆ. ಮೃತರ ಗುರುತು ಸಿಕ್ಕಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯಿಂದಾಗಿ, ಮೂರು ದಿನಗಳಲ್ಲಿ 42 ಮಂದಿ ಮೃತಪಟ್ಟಿದ್ದಾರೆ ಎಂದು ವಿವಿಧ ಆಸ್ಪತ್ರೆಗಳು ಖಚಿತಪಡಿಸಿದ್ದವು. ಇದೀಗ ಚರಂಡಿಯಲ್ಲಿ ಮೂರು ಶವಗಳು ಪತ್ತೆಯಾಗಿರುವುದರಿಂದ ಸಾವಿನ ಸಂಖ್ಯೆ 45ಕ್ಕೆ ಏರಿಕೆಯಾಗಿದೆ. 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ದೆಹಲಿಯ ಹಿಂಸಾಚಾರದಿಂದಾಗಿ ಮನೆಗಳು, ಅಂಗಡಿಗಳು, ವಾಹನಗಳು, ಶಾಲೆಗಳು ಸೇರಿದಂತೆ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ. ಗಲಭೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 167 ಎಫ್.ಐ.ಆರ್ ಗಳನ್ನು ದಾಖಲಿಸಿದ್ದು, 885 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಗಲಭೆಗೆ ಸಾಕ್ಷಿಯಾಗಿದ್ದ ಈಶಾನ್ಯ ದೆಹಲಿ ಇದೀಗ ಸಹಜ ಸ್ಥಿತಿಯತ್ತ ಮರಳಿದೆ. ಕಳೆದ ಮೂರು ದಿನಗಳಿಂದ ಹಿಂಸಾತ್ಮಕ ಘಟನೆಗಳು ನಡೆದಿಲ್ಲ. ಭಾನುವಾರವೂ ದೆಹಲಿ ಶಾಂತವಾಗಿತ್ತು. ಆದರೂ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರೆಸಲಾಗಿದೆ. ಸ್ಥಳೀಯ ಜನರ ಜೊತೆಗೆ ಮಾತುಕತೆ ನಡೆಸಿ, ಎಲ್ಲರ ವಿಶ್ವಾಸ ಪಡೆಯುವ ಕೆಲಸ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.












Click it and Unblock the Notifications