Breaking: ಡಿಕೆಶಿಗೆ ಬಿಗ್ ರಿಲೀಫ್, ಜಾಮೀನು ಅವಧಿ ವಿಸ್ತರಣೆ
ನವದೆಹಲಿ, ಆ.02: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮಂಗಳವಾರ ದೆಹಲಿಯ ಇಡಿ ವಿಶೇಷ ಕೋರ್ಟ್ ಜಾಮೀನು ಅವಧಿ ವಿಸ್ತರಿಸಿದೆ.
ಜಾರಿ ನಿರ್ದೇಶನಾಲಯದ ವಿಶೇಷ ಕೋರ್ಟ್ ನ್ಯಾಯಾಧೀಶ ವಿಕಾಸ್ ಧುಲ್ ಜಾಮೀನು ಅವಧಿಯನ್ನು ವಿಸ್ತರಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಇತರ ನಾಲ್ಕು ಆರೋಪಿಗಳಿಗೆ ಷರತ್ತು ವಿಧಿಸಿ ಜಾಮೀನು ವಿಸ್ತರಿಸಲಾಗಿದೆ. ಆರೋಪಿಗಳು ದೇಶ ಬಿಟ್ಟು ಹೋಗುವಂತಿಲ್ಲ ಸೇರಿದಂತೆ 3 ಪ್ರಮುಖ ಷರತ್ತು ವಿಧಿಸಲಾಗಿದೆ.

ತಲಾ 1 ಲಕ್ಷ ಭದ್ರತಾ ಠೇವಣಿ, ಒಬ್ಬರ ಸಾಕ್ಷಿ, ದೇಶ ಬಿಟ್ಟು ಹೋಗಬಾರದು ಮತ್ತು ಸಾಕ್ಷಿ ನಾಶ ಮಾಡಬಾರದು ಎಂಬ ಷರತ್ತಿನ ಮೇಲೆ ನ್ಯಾಯಾಧೀಶ ವಿಕಾಸ ಧುಲ್ ಜಾಮೀನು ಮಂಜೂರು ಮಾಡಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ವಿಚಾರಣೆ ನಡೆಸಲಾಗಿತ್ತು. ವಾದ -ಪ್ರತಿವಾದ ಆಲಿಸಿದ್ದ ನ್ಯಾಯಪೀಠ ಮಂಗಳವಾರಕ್ಕೆ ಆದೇಶ ಕಾಯ್ದಿರಿಸಿತ್ತು. ಇಂದು ಜಾಮೀನು ವಿಸ್ತರಿಸಿ ತೀರ್ಪು ನೀಡಿದೆ.
ಪ್ರಕರಣದ ಇತರ ಆರೋಪಿಗಳಾದ ಆಂಜನೇಯ ಹನುಮಂತಯ್ಯ, ರಾಜೇಂದ್ರ, ಸಚಿನ್ ನಾರಾಯಣ ಮತ್ತು ಸುನಿಲ್ ಶರ್ಮ ಅವರಿಗೂ ಷರತ್ತುಬದ್ಧ ಜಾಮೀನು ನೀಡಲಾಗಿದೆ.

ಆರೋಪಿಗಳಿಗೆ ಜಾಮೀನು ನೀಡದಂತೆ ಇಡಿ ಪರ ವಕೀಲರು ವಾದ ಮಂಡಿಸಿದ್ದರು, ಆದರೆ, ಜಾಮೀನು ವಿರೋಧಿಸುವುದಕ್ಕೆ ಕಾರಣಗಳಿಲ್ಲ ಎಂದಿರುವ ನ್ಯಾಯಪೀಠ ಎಲ್ಲಾ ಆರೋಪಿಗಳಿಗೂ ಜಾಮೀನು ವಿಸ್ತರಿಸಿದೆ.
ಜುಲೈ 28 ರಂದು ಚನ್ನಪಟ್ಟಣದಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್, "ಜುಲೈ 30 ರಂದು ಇಡಿ ವಿಚಾರಣೆ ಇದೆ ಹಾಗಾಗಿ ನಾನು ದೆಹಲಿಗೆ ತೆರಳುತ್ತಿದ್ದೇನೆ. ನನ್ನನ್ನು ಇಡಿ ತನಿಖೆಯಲ್ಲಿ ಸಿಲುಕಿಸಲು ಹಲವಾರು ಪ್ರಯತ್ನಿಸುತ್ತಿದ್ದಾರೆ. ನಾನು ತಪ್ಪು ಮಾಡಿಲ್ಲ ಎಂದರೆ ತಾಯಿ ಚಾಮುಂಡೇಶ್ವರಿ ದೇವಿ ನನ್ನನ್ನು ರಕ್ಷಿಸುತ್ತಾಳೆ. ಕೆಲವರು ಏನೇನೋ ಆಸೆ ಪಡುತ್ತಿದ್ದಾರೆ. ನನ್ನನ್ನು ಸಿಲುಕಿಸಲು ಸಂಚು ಮಾಡುತ್ತಿದ್ದಾರೆ. ಆ ಬಗ್ಗೆ ನಿಧಾನವಾಗಿ ಮಾತನಾಡುತ್ತೇನೆ' ಎಂದು ಹೇಳಿದ್ದರು.












Click it and Unblock the Notifications