ದೆಹಲಿಯಲ್ಲಿ ಏಕಾಏಕಿ ಏರಿದ ಕೊರೊನಾ ಪ್ರಕರಣ; ಸರ್ಕಾರವನ್ನು ತರಾಟೆ ತೆಗೆದುಕೊಂಡ ಕೋರ್ಟ್
ನವದೆಹಲಿ, ನವೆಂಬರ್ 11: ರಾಜಧಾನಿ ದೆಹಲಿಯಲ್ಲಿ ಕೆಲ ದಿನಗಳಿಂದ ಕೊರೊನಾ ಸೋಂಕಿನ ಪ್ರಕರಣ ಏರುಗತಿಯಲ್ಲಿದೆ. ಹೀಗಿದ್ದೂ ಸಾರ್ವಜನಿಕರು ಸೇರುವ ಸಭೆ ಸಮಾರಂಭಗಳಲ್ಲಿ, ಸಾರಿಗೆಯಲ್ಲಿ ಕೋವಿಡ್ 19 ಸುರಕ್ಷತಾ ಮಾನದಂಡಗಳನ್ನು ಸಡಿಲಿಸಿರುವ ಕುರಿತು ದೆಹಲಿ ಹೈ ಕೋರ್ಟ್ ಸರ್ಕಾರವನ್ನು ಬುಧವಾರ ತರಾಟೆಗೆ ತೆಗೆದುಕೊಂಡಿದೆ.
ನಗರದಲ್ಲಿ ಈಚೆಗೆ ಪ್ರತಿನಿತ್ಯದ ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ಮಹಾರಾಷ್ಟ್ರ, ಕೇರಳದಂಥ ದೊಡ್ಡ ರಾಜ್ಯಗಳಿಗೂ ಹೆಚ್ಚಾಗಿ ದೆಹಲಿ ನಗರದಲ್ಲಿ ಅಧಿಕ ಪ್ರಕರಣಗಳು ಕಂಡುಬರುತ್ತಿವೆ. ಆದರೆ ಪರಿಸ್ಥಿತಿ ಹದಗೆಡುತ್ತಿರುವ ಇಂಥ ಸಮಯದಲ್ಲಿ ಸೋಂಕನ್ನು ನಿಭಾಯಿಸಲು ಸರ್ಕಾರ ಏನು ವಾಸ್ತವಿಕ ಯೋಜನೆಗಳನ್ನು, ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಪ್ರಶ್ನಿಸಿದೆ.
ದೆಹಲಿಯಲ್ಲಿ ಇನ್ನಷ್ಟು ಹೆಚ್ಚಲಿದೆ ಸೋಂಕು; ಐಸಿಎಂಆರ್ ಕೊಟ್ಟ ಕಾರಣ ಇಷ್ಟು...
ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಕಳೆದ ಎರಡು ವಾರಗಳಿಂದ ಏನೇನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದರ ಕುರಿತು ವರದಿ ಸಲ್ಲಿಸಲು ತಿಳಿಸಿದೆ.
ನ್ಯಾಯಮೂರ್ತಿಗಳಾದ ಹಿಮ ಕೊಹ್ಲಿ ಹಾಗೂ ಸುಬ್ರಹ್ಮಣಿಯಂ ಪ್ರಸಾದ್ ಅವರನ್ನೊಳಗೊಂಡ ಪೀಠವು, ಸಭೆ ಕೂಟಗಳಲ್ಲಿ ಈ ಹಿಂದೆ 50 ಮಂದಿಗೆ ಅವಕಾಶವಿತ್ತು. ಆ ಸಂಖ್ಯೆಯನ್ನು 200 ಮಂದಿಗೆ ಏರಿಸಲಾಗಿದೆ. ಸರ್ಕಾರ ಏಕೆ ಈ ಸಂಖ್ಯೆಯನ್ನು ಏರಿಸಿತು? ಈಚೆಗೆ ಸಾರಿಗೆಯಲ್ಲೂ ವಿನಾಯಿತಿ ನೀಡಿ, ಸಾರ್ವಜನಿಕ ಸಾರಿಗೆಯಲ್ಲಿ ಸಾಕಷ್ಟು ಮಂದಿ ಸಂಚರಿಸಬಹುದು ಎಂದು ಅನುಮತಿ ನೀಡಿದೆ. ಸೋಂಕಿನ ಸೂಪರ್ ಸ್ಟ್ರೆಡರ್ ಗಳಾಗಿ ಈ ಸಾರಿಗೆ ವ್ಯವಸ್ಥೆ ಪರಿವರ್ತಿತಗೊಳ್ಳಬಹುದಾದ ಸಾಧ್ಯತೆ ಇದೆ. ಹೀಗೆ ನಿಯಮಗಳನ್ನು ಸಡಿಲಿಸಲು ಕಾರಣವೇನು ಎಂದು ಪ್ರಶ್ನೆ ಮಾಡಿದೆ.
ಇದೇ ಸಂದರ್ಭ, ಮಾಸ್ಕ್ ಧರಿಸುವಿಕೆಯನ್ನು ಕಾನೂನುಬದ್ಧವಾಗಿ ಕಡ್ಡಾಯಗೊಳಿಸಿಲ್ಲದ ವಿಷಯವೂ ನ್ಯಾಯಮೂರ್ತಿಗಳ ಸಿಟ್ಟಿಗೆ ಕಾರಣವಾಯಿತು.
ಕೆಲವು ದಿನಗಳಿಂದೀಚೆ ದೆಹಲಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಏರುಗತಿಯಲ್ಲಿದೆ. ಪ್ರತಿನಿತ್ಯ 7000 ಪ್ರಕರಣಗಳು ಕಂಡುಬರುತ್ತಿದೆ. ನವೆಂಬರ್ 10ರಂದು 7,830 ಹೊಸ ಪ್ರಕರಣಗಳು ದಾಖಲಾಗಿತ್ತು.