ಪತ್ನಿ ಕೊಂದ ಆರೋಪದಿಂದ ಬಹುಬೇಡಿಕೆ ನಿರೂಪಕನಿಗೆ ಖುಲಾಸೆ
ನವದೆಹಲಿ, ಅಕ್ಟೋಬರ್ 05: 'ಇಂಡಿಯಾಸ್ ಮೋಸ್ಟ್ ವಾಂಟೆಡ್' ಎಂಬ ಕಾರ್ಯಕ್ರಮದ ನಿರ್ಮಾಪಕರಾಗಿ, ಬಹುಬೇಡಿಕೆಯ ಆಂಕರ್ ಆಗಿದ್ದ ಸುಹೇಬ್ ಇಲಿಯಾಸಿಗೆ ದೆಹಲಿ ಹೈಕೋರ್ಟ್ ಇಂದು (ಅಕ್ಟೋಬರ್ 05) ಶುಭ ಸುದ್ದಿ ಕೊಟ್ಟಿದೆ. ಪತ್ನಿ ಹತ್ಯೆ ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ.
ಜಸ್ಟೀಸ್ ಎಸ್ ಮುರಳೀಧರ್ ಹಾಗೂ ವಿನೋದ್ ಗೋಯಲ್ ಅವರಿದ್ದ ನ್ಯಾಯಪೀಠವು, ಇಲಿಯಾಸಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದೆ.
ಪಾತಕ ಲೋಕದ ಚರಿತ್ರೆಯನ್ನು ಟಿವಿ ಪರದೆ ಮೇಲೆ ತರುತ್ತಿದ ಇಲಿಯಾಸಿ ಈಗ ತಾನೇ ಕ್ರಿಮಿನಲ್ ಪಟ್ಟಿ ಸೇರಿದ್ದರು. ಜನಪ್ರಿಯ ಟಿವಿ ಕಾರ್ಯಕ್ರಮಗಳ ನಿರ್ಮಾಪಕ ಹಾಗೂ ನಿರೂಪಕ ಸುಹೇಬ್ ಇಲಿಯಾಸಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

2000ರ ಜನವರಿ 11ರಂದು ಸುಹೇಬ್ ಇಲಿಯಾಸಿ ಅವರ ಪತ್ನಿ ಅಂಜು ಇಲಿಯಾಸಿ ಮಾರಣಾಂತಿಕ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಪರಿಗಣಿಸಲಾಗಿತ್ತು. ಆದರೆ, ಅಂಜು ಅವರ ತಾಯಿ ರುಕ್ಮಾ ಸಿಂಗ್ ಅವರು ಸುಹೇಬ್ ವಿರುದ್ಧ ಆರೋಪ ಮಾಡಿದ್ದರು.
ವರದಕ್ಷಿಣೆಗಾಗಿ ಪೀಡಿಸಿದ್ದರಿಂದ ಅಂಜು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಾಗಾಗಿ ಅಳಿಯನ ವಿರುದ್ಧ ತನಿಖೆ ನಡೆಸಬೇಕೆಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಕೂಡ ಅಂಜು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದರು.
2014ರಲ್ಲಿ ದೆಹಲಿ ಕೋರ್ಟ್ ಈ ಬಗ್ಗೆ ತನಿಖೆಗೆ ಆದೇಶಿಸಿತ್ತು. ಇಲಿಯಾಸಿ ಪತ್ನಿಯನ್ನು ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ಪರಿಗಣಿಸಿ, 2017ರ ಡಿಸೆಂಬರ್ 20ರಂದು ಕೆಳ ಹಂತದ ನ್ಯಾಯಾಲಯವು, ಇಲಿಯಾಸಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಈಗ ಹೈಕೋರ್ಟಿನಲ್ಲಿ ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ, ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ.












Click it and Unblock the Notifications