ಮುಂದಿನ 2-3 ದಿನಗಳಲ್ಲಿ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಬಂಧನ!
ನವದೆಹಲಿ, ಆಗಸ್ಟ್ 23: ಭ್ರಷ್ಟಾಚಾರ ಪ್ರಕರ ಸಂಬಂಧ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ತಂಡವು ಎರಡರಿಂದ ಮೂರು ದಿನಗಳಲ್ಲೇ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಗುಜರಾತ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭೇಟಿ ನೀಡಿದ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಭಾವನಗರದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿ ಎಎಪಿ ನಡುವೆ ವಾಕ್ ಸಮರ: ಬಿಜೆಪಿ ಸೇರಲು 5 ಕೋಟಿ ರೂ. ಆಫರ್- ಎಎಪಿ ವಕ್ತಾರ ಸೌರಭ್ ಆರೋಪ
ಭ್ರಷ್ಟಾಚಾರ ಪ್ರಕರಣದಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾರನ್ನು ಮುಂದಿನ 10 ದಿನಗಳಲ್ಲಿ ಬಂಧಿಸಲಾಗುತ್ತದೆ ಎಂದು ಕೇಳಿದ್ದೆನು. ಆದರೆ ಸಿಬಿಐ ಅಧಿಕಾರಿಗಳ ಉತ್ಸಾಹವನ್ನು ನೋಡುತ್ತಿದ್ದಂತೆ ಎರಡರಿಂದ ಮೂರು ದಿನಗಳಲ್ಲಿ ಅವರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಆಪ್ ಪಡೆದ ಜನಬೆಂಬಲವೇ ಬಿಜೆಪಿಗೆ ಮುಳ್ಳು
ಆಮ್ ಆದ್ಮಿ ಪಕ್ಷ ಮತ್ತು ಡಿಸಿಎಂ ಮನೀಶ್ ಸಿಸೋಡಿಯಾ ಪಡೆಯುತ್ತಿರುವ ಜನ ಬೆಂಬಲವು ಬಿಜೆಪಿಯ ಕಣ್ಣು ಕುಕ್ಕುತ್ತಿದೆ. ಜನರು ತಮಗೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲವನ್ನು ನೀಡುತ್ತಿದ್ದಂತೆ ಬಿಜೆಪಿ ಉಲ್ಟಾ ಹೊಡೆಯುತ್ತಿದೆ. ಕೇಂದ್ರ ಸರ್ಕಾರವು ನನ್ನ ಕುತ್ತಿಗೆ ಹಿಡಿದು ಬೆದರಿಸುವ ಉತ್ಸಾಹದಲ್ಲಿದೆ. ಆದರೆ ನನ್ನ ಬಗ್ಗೆ ಚಿಂತಿಸಬೇಡಿ, ನಾನು ಪ್ರಾಮಾಣಿಕತೆಯ ಕುತ್ತಿಗೆಯನ್ನು ಹೊಂದಿದ್ದು, ಯಾವುದೇ ಆತಂಕವಿಲ್ಲ," ಎಂದು ಡಿಸಿಎಂ ಮನೀಶ್ ಸಿಸೋಡಿಯಾ ಹೇಳಿದರು. ದೆಹಲಿ ಸರ್ಕಾರದ ಮದ್ಯ ನೀತಿಯ ಬಗ್ಗೆ ಕೇಂದ್ರೀಯ ತನಿಖಾ ದಳ ದಾಖಲಿಸಿರುವ ಪ್ರಕರಣದಲ್ಲಿ ಸಿಸೋಡಿಯಾ ಹೆಸರನ್ನು ಸೇರಿಸಲಾಗಿದೆ. ಕಳೆದ ವಾರ ಏಳು ರಾಜ್ಯಗಳಾದ್ಯಂತ ಇರುವ ಇತರ 31 ಸ್ಥಳಗಳ ಜೊತೆಗೆ ಅವರ ದೆಹಲಿ ಮನೆಯ ಮೇಲೆ ದಾಳಿ ನಡೆಸಿತ್ತು.
ಜಾಗತಿಕ ಮಟ್ಟದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ
ಭಾರತೀಯ ಜನತಾ ಪಕ್ಷವು ಪ್ರಬಲವಾಗಿದ್ದ ದೆಹಲಿ ಮತ್ತು ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷವು ಹಿಡಿತ ಸಾಧಿಸಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ತನ್ನ ಕಾರ್ಯವೈಖರಿಯಿಂದ ಬಿಜೆಪಿಯು ಜಾಗತಿಕ ಮಟ್ಟದಲ್ಲಿ ಮನ್ನಣೆಯನ್ನು ಪಡೆದುಕೊಂಡಿದೆ. ಆದರೆ ಸಿಬಿಐ ತೆಗೆದುಕೊಳ್ಳುತ್ತಿರುವ ಕ್ರಮವು ಬಿಜೆಪಿಗೆ ತೀವ್ರ ಹಿನ್ನಡೆಯನ್ನು ಉಂಟು ಮಾಡುತ್ತಿದೆ ಎಂದು ಎಎಪಿ ಹೇಳಿದೆ.
ಗುಜರಾತ್ನಲ್ಲಿ ಅಸ್ತ್ರ ಪ್ರಯೋಗಿಸಲು ಸಿದ್ಧವಾದ ಆಪ್
ಕಳೆದ 20 ವರ್ಷಗಳಿಗೂ ಹೆಚ್ಚು ಕಾಲ ಬಿಜೆಪಿ ಆಡಳಿತ ನಡೆಸುತ್ತಿರುವ ಗುಜರಾತ್ನಲ್ಲಿ ರಾಜಕೀಯ ಅಸ್ತ್ರ ಪ್ರಯೋಗಕ್ಕೆ ಆಮ್ ಆದ್ಮಿ ಪಕ್ಷವು ಅಣಿಯಾಗಿದೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಇರುವನ ನ್ಯೂನತೆಗಳನ್ನು ಆಪ್ ಎತ್ತಿ ತೋರಿಸುತ್ತಿದೆ. ಉದ್ಯೋಗ ಕೊರತೆ, ಉತ್ತಮ ಶಿಕ್ಷಣ ಮತ್ತು ಆರೋಗ್ಯ ವಲಯದಲ್ಲಿ ಸಾರ್ವಜನಿಕರು ಯಾವ ರೀತಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಆಪ್ ಮುಖ್ಯವಾಗಿ ಫೋಕಸ್ ಮಾಡುತ್ತಿದೆ. "ಮೊದಲ ಬಾರಿಗೆ, ಬಿಜೆಪಿಯವರು ಎಎಪಿಯಿಂದ ಪಾಠ ಕಲಿಯುತ್ತಿದ್ದಾರೆ," ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
ಉದ್ಯೋಗ ಇಲ್ಲದವರಿಗೆ ಪ್ರತಿ ತಿಂಗಳು 3000 ರೂಪಾಯಿ
ಗುಜರಾತ್ ನೆಲದಲ್ಲಿ ಆಮ್ ಆದ್ಮಿ ಪಕ್ಷವು ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ 10 ಲಕ್ಷ ಜನರಿಗೆ ಉದ್ಯೋಗವನ್ನು ನೀಡಲಾಗುತ್ತದೆ. ಅಂದರೆ ಪ್ರತಿ ವರ್ಷ ಎರಡು ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು. ಇನ್ನು ಉದ್ಯೋಗ ಇಲ್ಲದ ಮಂದಿಗೆ ಪ್ರತಿ ತಿಂಗಳು 3000 ರೂಪಾಯಿ ಭತ್ಯೆ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದರು.
"ಭಾರತದ ಮಟ್ಟಿಗೆ ನಿರುದ್ಯೋಗವು ದೊಡ್ಡ ಸಮಸ್ಯೆಯಾಗಿದೆ. ಪದವಿ ಪಡೆದುಕೊಂಡ ವಿದ್ಯಾವಂತರಿಗೂ ಉದ್ಯೋಗ ಸಿಗುತ್ತಿಲ್ಲ. ಗುಜರಾತ್ ಪಾಲಿಗೆ ಉದ್ಯೋಗ ಅತಿದೊಡ್ಡ ಅಗತ್ಯವಾಗಿದೆ. ಇಲ್ಲಿ ಉದ್ಯೋಗಗಳು ಸಾಕಷ್ಟಿವೆ, ಆದರೂ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿಲ್ಲ," ಎಂದು ಮನೀಶ್ ಸಿಸೋಡಿಯಾ ದೂಷಿಸಿದರು.