ಮನೆಯ ಬಾಗಿಲಿಗೆ ಬೂದು ಕುಂಬಳಕಾಯಿ ಕಟ್ಟುವ ಮುನ್ನ ಈ 3 ತಪ್ಪು ಮಾಡಬೇಡಿ
ಮನೆಯ ಮುಖ್ಯ ಬಾಗಿಲಿಗೆ ಬೂದು ಕುಂಬಳಕಾಯಿ ಕಟ್ಟುವ ಪದ್ಧತಿ ಭಾರತೀಯ ಸಂಪ್ರದಾಯದಲ್ಲಿ ಬಹಳ ಪ್ರಾಚೀನವಾದದ್ದು. ಹೊಸ ಮನೆ ಕಟ್ಟಿದಾಗ, ವ್ಯಾಪಾರ ಆರಂಭಿಸಿದಾಗ ಅಥವಾ ಮನೆಗೆ ನಕಾರಾತ್ಮಕ ಶಕ್ತಿ ತಗುಲದಿರಲಿ ಎಂಬ ನಂಬಿಕೆಯಿಂದ ಅನೇಕರು ಬಾಗಿಲಿನ ಮುಂದೆ ಬೂದು ಕುಂಬಳಕಾಯಿ ಕಟ್ಟುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಇದು ನರದೃಷ್ಟಿ ಮತ್ತು ನಕಾರಾತ್ಮಕ ಶಕ್ತಿಯಿಂದ ರಕ್ಷಣೆ ನೀಡುತ್ತದೆ ಎಂದು ನಂಬಲಾಗಿದೆ. ಆದರೆ ಇದನ್ನು ಕಟ್ಟುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ವಾಸ್ತು ತಜ್ಞರು ಹೇಳುತ್ತಾರೆ.
ಸಾಮಾನ್ಯವಾಗಿ ಬೂದು ಕುಂಬಳಕಾಯಿಗೆ ವಿಚಿತ್ರ ಮುಖದ ಚಿತ್ರಗಳನ್ನು ಬಿಡಿಸಿ, ಅರಿಶಿನ-ಕುಂಕುಮ ಹಚ್ಚಿ, ಕಪ್ಪು ದಾರದಿಂದ ಕಟ್ಟಲಾಗುತ್ತದೆ. ಕೆಲವರು ನಿಂಬೆಹಣ್ಣಿನ ಜೊತೆಯಲ್ಲೂ ಇದನ್ನು ಕಟ್ಟಿ ಹಾಕುತ್ತಾರೆ. ಇದರ ಹಿಂದಿನ ನಂಬಿಕೆಯ ಪ್ರಕಾರ, ಮನೆ ಅಥವಾ ಅಂಗಡಿಯನ್ನು ಕೆಟ್ಟ ದೃಷ್ಟಿಯಿಂದ ನೋಡುವವರ ಗಮನ ಮೊದಲು ಕುಂಬಳಕಾಯಿಯ ಮೇಲೆಯೇ ಬೀಳುತ್ತದೆ. ಇದರಿಂದ ನಕಾರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸದೇ ತಡೆಯುತ್ತದೆ ಎನ್ನಲಾಗುತ್ತದೆ.

ವಾಸ್ತು ಪ್ರಕಾರ ಬೂದು ಕುಂಬಳಕಾಯಿ ಕಟ್ಟುವಾಗ ಕೆಲವು ತಪ್ಪುಗಳನ್ನು ಮಾಡಬಾರದು. ಮಾರುಕಟ್ಟೆಯಿಂದ ತಂದ ಕುಂಬಳಕಾಯಿಯನ್ನು ನೀರಿನಿಂದ ತೊಳೆಯಬಾರದು ಎಂದು ಹೇಳಲಾಗುತ್ತದೆ. ಹೀಗೆ ಮಾಡಿದರೆ ಅದರಲ್ಲಿರುವ ದೈವಿಕ ಶಕ್ತಿ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ಜೊತೆಗೆ ಕುಂಬಳಕಾಯಿಗೆ ತೊಟ್ಟುಯಿರಬೇಕು. ತೊಟ್ಟು ಇಲ್ಲದ ಕುಂಬಳಕಾಯಿಯನ್ನು ಶುಭಕರವೆಂದು ಪರಿಗಣಿಸಲಾಗುವುದಿಲ್ಲ.
ಇದನ್ನು ಕಟ್ಟಲು ಅಮಾವಾಸ್ಯೆ ದಿನವನ್ನು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗುತ್ತದೆ. ಅಮಾವಾಸ್ಯೆಯಂದು ಸೂರ್ಯೋದಯಕ್ಕೂ ಮುನ್ನ ಕಟ್ಟಿದರೆ ನರದೃಷ್ಟಿಯ ಪರಿಣಾಮ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಅದು ಸಾಧ್ಯವಾಗದಿದ್ದರೆ ಬುಧವಾರ ಅಥವಾ ಶನಿವಾರ ಬೆಳಿಗ್ಗೆ ಕಟ್ಟಬಹುದು. ಆದರೆ ಸೂರ್ಯಾಸ್ತದ ನಂತರ ಬೂದು ಕುಂಬಳಕಾಯಿ ಕಟ್ಟಬಾರದು ಎಂಬ ನಂಬಿಕೆಯೂ ಇದೆ.
ವಾಸ್ತು ನಂಬಿಕೆಯ ಪ್ರಕಾರ ಬೂದು ಕುಂಬಳಕಾಯಿ ಮನೆಯ ಮುಂದೆ ಇರುವ ನಕಾರಾತ್ಮಕ ಶಕ್ತಿಯನ್ನು ತನ್ನೊಳಗೆ ಹೀರಿಕೊಳ್ಳುತ್ತದೆ. ಆದ್ದರಿಂದ ಪ್ರತಿಯೊಂದು ಅಮಾವಾಸ್ಯೆಯ ನಂತರ ಹಳೆಯ ಕುಂಬಳಕಾಯಿಯನ್ನು ತೆಗೆದು ಹೊಸದನ್ನು ಕಟ್ಟುವುದು ಉತ್ತಮ ಎಂದು ಹೇಳಲಾಗುತ್ತದೆ. ಒಂದು ವೇಳೆ ಕುಂಬಳಕಾಯಿ ಬೇಗ ಕೊಳೆಯಲು ಆರಂಭಿಸಿದರೆ, ಅದು ಮನೆಯ ಮೇಲೆ ಬರುವ ಕೆಟ್ಟ ಶಕ್ತಿಯನ್ನು ತಡೆದಿದೆ ಎಂಬ ಸೂಚನೆಯಾಗಿ ನೋಡಲಾಗುತ್ತದೆ. ಅಂತಹ ಸಂದರ್ಭದಲ್ಲಿ ಅದನ್ನು ತಕ್ಷಣ ತೆಗೆದು ಜನರು ಓಡಾಡದ ಸ್ಥಳದಲ್ಲಿ ಬಿಸಾಡಿ ಹೊಸ ಕುಂಬಳಕಾಯಿ ಕಟ್ಟುವುದು ಶುಭಕರವೆಂದು ನಂಬಲಾಗಿದೆ.














Click it and Unblock the Notifications