ಡಿಕೆಶಿಗೆ ಮತ್ತೆ ಆಘಾತ: ನ್ಯಾಯಾಂಗ ಬಂಧನದ ಅವಧಿ ಅ.15 ರವರೆಗೆ ವಿಸ್ತರಣೆ
ಬೆಂಗಳೂರು, ಅಕ್ಟೋಬರ್ 01: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಶಾಸಕ ಡಿ ಕೆ ಶಿವಕುಮಾರ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಅ.15 ರವರೆಗೆ ವಿಸ್ತರಿಸುವಂತೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಆದೇಶಿಸಿದೆ.
ಅಕ್ಟೋಬರ್ 4 ಮತ್ತು 5 ರಂದು ಶಿವಕುಮಾರ್ ಅವರನ್ನು ವಿಚಾರಣೆ ನಡೆಸುವಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದೆ.
ಡಿಕೆ ಶಿವಕುಮಾರ್ ಅವರ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಕುರಿತಂತೆ ಹಲವು ದಾಖಲೆಗಳನ್ನು ಇ.ಡಿ.(ಜಾರಿ ನಿರ್ದೇಶನಾಲಯ) ವಶಪಡಿಸಿಕೊಂಡಿದ್ದು, ಅಕ್ರಮ ವ್ಯವಹಾರದ ಕುರಿತಂತೆ ಹಲವು ದಾಖಲೆಗಳನ್ನು ಕಲೆಹಾಕಿದೆ. ಈ ಕುರಿತು ಮತ್ತಷ್ಟು ವಿಚಾರಣೆಯ ಅಗತ್ಯವಿದ್ದು, ಜಾಮೀನಿನ ಮೇಲೆ ಡಿಕೆಶಿ ಬಿಡುಗಡೆಯಾದರೆ ತಮ್ಮ ಪ್ರಭಾವವನ್ನು ಬಳಸಿಕೊಂಡು ಸಾಕ್ಷ್ಯ ನಾಶ ಮಾಡಬಹುದು ಎಂಬ ವಾದವನ್ನು ಮುಂದಿಟ್ಟು, ಅವರ ಬಂಧನದ ಅವಧಿಯನ್ನು ವಿಸ್ತರಿಸುವಂತೆ ಮಾಡುವಲ್ಲಿ ಇಡಿ ಯಶಸ್ವಿಯಾಗಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೆ. 3ರಂದು ಇ.ಡಿ. ಡಿಕೆ ಶಿವಕುಮಾರ್ ಅವರನ್ನು ಬಂಧಿಸಿತ್ತು. ಇದಕ್ಕೂ ಮೊದಲು ಆಗಸ್ಟ್ 30ರಿಂದ ಸತತ ನಾಲ್ಕು ದಿನ ವಿಚಾರಣೆಗೆ ಒಳಪಡಿಸಿತ್ತು. ಬಳಿಕ ಅವರನ್ನು ವಿಶೇಷ ನ್ಯಾಯಾಲಯವು ಇ.ಡಿ ವಶಕ್ಕೆ ಒಪ್ಪಿಸಿತ್ತು. 14 ದಿನಗಳ ವಿಚಾರಣೆಯ ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಸೋಮವಾರ ಜಾಮೀನುಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸಹ ತಿರಸ್ಕರಿಸಿತ್ತು. ಈ ಮೂಲಕ ಡಿಕೆಶಿ ಭಾರೀ ನಿರಾಸೆಗೊಳಗಾಗಿದ್ದರು. ಇದೀಗ ಅವರಿಗೆ ಮತ್ತೊಂದು ಆಘಾತ ಎದುರಾಗಿದೆ.












Click it and Unblock the Notifications