ಸೋಲು ಗೆಲುವಿನ ಲೆಕ್ಕಾಚಾರ: ದೆಹಲಿಯಲ್ಲಿ ಅಂತ್ಯವಾದ ಬಹಿರಂಗ ಪ್ರಚಾರ
ನವದೆಹಲಿ, ಫೆಬ್ರವರಿ.07: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಮತದಾನಕ್ಕೆ 48 ಗಂಟೆ ಇರುವಾಗಲೇ ನೀತಿ ಸಂಹಿತೆಯ ಪ್ರಕಾರ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲಾಗಿದೆ.
ಶುಕ್ರವಾರ ಆಮ್ ಆದ್ಮಿ ಪಕ್ಷ, ಬಿಜೆಪಿ, ಕಾಂಗ್ರೆ,ಸ್ ಸೇರಿದಂತೆ ಎಲ್ಲ ಪಕ್ಷದ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ನಡೆಸಲಿದ್ದಾರೆ. ಫೆಬ್ರವರಿ.08ರ ಶುಕ್ರವಾರ ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಆರಂಭಗೊಳ್ಳಲಿದೆ.
ದೆಹಲಿ ಚುನಾವಣೆ: ಸದ್ಯಕ್ಕೆ ಕೇಜ್ರಿವಾಲ್ ಮೇಲುಗೈ, ಆದರೆ ಅಂಡರ್ ಕರೆಂಟ್!
ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಮ್ಮೆ ಪಟ್ಟ ಗಿಟ್ಟಿಸಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಣತಂತ್ರ ಹೆಣೆದಿದ್ದರೆ, ದೆಹಲಿಯಲ್ಲಿ ಅಧಿಕಾರಕ್ಕೆ ಏರಲು ಬಿಜೆಪಿ ಶತಪ್ರಯತ್ನ ನಡೆಸುತ್ತಿದೆ. ಅಂತಿಮವಾಗಿ ಮತದಾರರ ತೀರ್ಪು ಫೆಬ್ರವರಿ.11ರಂದು ಹೊರ ಬೀಳಲಿದೆ.
ಬಿಜೆಪಿ ವಿರುದ್ಧ ಸಿಎಎ ವಿರೋಧಿ ಅಸ್ತ್ರ ಪ್ರಯೋಗ
ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಸಾಂವಿಧಾನಿಕ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದರ ಮಧ್ಯೆ ಶಾಹಿನ್ ಬಾಗ್ ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುತ್ತಿದ್ದು, ಆಪ್ ಸರ್ಕಾರಕ್ಕೆ ಇದು ಪ್ಲಸ್ ಪಾಯಿಂಟ್ ಎಂದು ವಿಶ್ಲೇಷಿಸಲಾಗುತ್ತಿದೆ.
ದೆಹಲಿ ಚುನಾವಣಾ ಅಖಾಡದಲ್ಲಿ ಕಲಿಗಳು
ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಲ್ಲಿ ಆಮ್ ಆದ್ಮಿ, ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 672 ಮಂದಿ ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದಾರೆ ಎಂದು ಆಯೋಗ ಮಾಹಿತಿ ನೀಡಿದೆ.
ದೆಹಲಿ ಚುನಾವಣೆಯಲ್ಲಿ ಮತದಾರರು ಎಷ್ಟು?
ಕೇಂದ್ರ ಚುನಾವಣಾ ಆಯೋಗಾಧಿಕಾರಿ ಮಾಹಿತಿ ಪ್ರಕಾರ ದೆಹಲಿಯಲ್ಲಿ 1 ಕೋಟಿ 47 ಲಕ್ಷ ಮಂದಿ ಮತದಾರರು ಇದ್ದಾರೆ ಎಂದು ಹೇಳಲಾಗಿದೆ. ಈ ಪೈಕಿ 81,05, 236 ಪುರುಷ, 66,80,277 ಮಹಿಳಾ, 869 ತೃತೀಯ ಲಿಂಗಿ ಮತದಾರರು ಇದ್ದಾರೆ. ಇದರ ಜೊತೆಗೆ 2,04,830 ಹಿರಿಯ ಮತದಾರರು ಇದ್ದಾರೆ ಎಂದು ಅಂಕಿ-ಅಂಶಗಳು ತಿಳಿಸುತ್ತವೆ.
ದೆಹಲಿಯಲ್ಲಿ ಭರ್ಜರಿ ಪ್ರಚಾರ ನಡೆಸಿದ ಬಿಜೆಪಿ
ಇನ್ನು, ದೆಹಲಿಯಲ್ಲಿ ಬಿಜೆಪಿಯು ಜಿದ್ದಿಗೆ ಬಿದ್ದು ಪ್ರಚಾರ ನಡೆಸುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನಡೆಸಿದ ಎರಡು ರೋಡ್ ಶೋ ಸೇರಿದಂತೆ 5,239 ಕಡೆಗಳಲ್ಲಿ ಪ್ರಚಾರ ನಡೆಸಲಾಗಿದೆ ಎಂದು ದೆಹಲಿಯ ಬಿಜೆಪಿ ಮಾಧ್ಯಮ ಸಲಹೆಗಾರ ಪ್ರವೀಣ್ ಶಂಕರ್ ಕಪೂರ್ ಮಾಹಿತಿ ನೀಡಿದ್ದಾರೆ. 70 ವಿಧಾನಸಭಾ ಕ್ಷೇತ್ರಗಳ ಪೈಕಿ 60 ಕ್ಷೇತ್ರಗಳಲ್ಲಿ ಅಮಿತ್ ಶಾ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಪ್ರಚಾರದ ಅಖಾಡದಲ್ಲಿ ಆಪ್ ಕೂಡಾ ಹಿಂದೆ ಬಿದ್ದಿಲ್ಲ
ಇನ್ನು, ದೆಹಲಿಯ ಚುನಾವಣಾ ಪ್ರಚಾರದ ಅಖಾಡದಲ್ಲಿ ಆಮ್ ಆದ್ಮಿ ಪಕ್ಷ ಕೂಡಾ ಹಿಂದೆ ಬಿದ್ದಿಲ್ಲ. ಸ್ವತಃ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 70 ವಿಧಾನಸಭಾ ಕ್ಷೇತ್ರಗಳಲ್ಲಿ 200ಕ್ಕೂ ಹೆಚ್ಚು ಪ್ರಚಾರ ಮತ್ತು ಚುನಾವಣಾ ಸಭೆಗಳನ್ನು ನಡೆಸಿದ್ದಾರೆ. ಅಲ್ಲದೇ ಬಿಜೆಪಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿಕೆ ವಿರುದ್ಧ ಮೌನ ಪ್ರತಿಭಟನೆಯನ್ನು ನಡೆಸಿದ್ದರು.
ಸಂಸದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪ್ರಚಾರ
ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರದ ಅಖಾಡದಲ್ಲಿ ಕಾಂಗ್ರೆಸ್ ಕೂಡಾ ಮಿಂಚಿನ ಪ್ರಚಾರ ನಡೆಸಿದೆ. ಫೆಬ್ರವರಿ.04 ಮತ್ತು 5ರ ಮಂಗಳವಾರ ಮತ್ತು ಬುಧವಾರ ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ವಯವಾಡ್ ಸಂಸದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅಬ್ಬರದ ಪ್ರಚಾರ ನಡೆಸಿದರು. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಉದ್ಯೋಗ ಸೃಷ್ಟಿಸುವಲ್ಲಿ ಸೋತಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು. ಇನ್ನು, ಆಪ್ ವಿರುದ್ಧ ಪ್ರಿಯಾಂಕಾ ಗಾಂಧಿ ಅಭಿವೃದ್ಧಿ ಮಂತ್ರ ಜಪಿಸಿದ್ದರು.