ನವದೆಹಲಿಯಲ್ಲಿ ಮನುಷ್ಯರು ಉಸಿರಾಡೋ ಸ್ಥಿತಿಯಲ್ಲೇ ಇಲ್ಲ, ಇನ್ನು ಪ್ರಾಣಿಗಳ ಗತಿ?
ನವದೆಹಲಿ, ನವೆಂಬರ್ 10: ರಾಷ್ಟ್ರ ರಾಜಧಾನಿ ವಾಯುಗುಣಮಟ್ಟ ದಿನದಿಂದ ದಿನಕ್ಕೆ ವಿಷಕಾರಿಯಾಗುತ್ತಾ ಹೋಗುತ್ತಿದೆ, ದೆಹಲಿಯ ಜನರು ಉಸಿರಾಡುವುದೇ ಕಷ್ಟವಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಉಸಿರಾಟಕ್ಕೆ ಸುರಕ್ಷಿತ ಹತ್ತಕ್ಕಿಂತ 10 ಪಟ್ಟು ವಿಷಮಯವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ದೀಪಾವಳಿಗೆ ಪಟಾಕಿ ಸಿಡಿಸುವುದಕ್ಕೆ ನಿರ್ಬಂಧ ಹಾಗೂ ಹಸಿರು ಪಟಾಕಿ ಬಳಕೆ ಮಾರ್ಗಸೂಚಿ ನೆಪ ಮಾತ್ರವಾದ ಹಿನ್ನೆಲೆ ನವದೆಹಲಿಯಲ್ಲಿ ಮಾಲಿನ್ಯ ಮಿತಿ ಮೀರಿದೆ.
ಗುರುವಾರ ಬೆಳಗಿನ ಜಾವ ವಾಯುಗುಣಮಟ್ಟ ಸೂಚ್ಯಂಕ 1 ಸಾವಿರದ ಹತ್ತಿರ ಬಂದಿತ್ತು. ಕಣವು(ಪಿಎಂ-2.5) ಸೂಚ್ಯಂಕ ಕೂಡ ಸಾವಿರವನ್ನು ದಾಟಿದೆ. ಇದೇ ದೆಹಲಿ ಸರ್ಕಾರ ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಹೀಗಾಗಿ ಶನಿವಾರದವರೆಗೆ ಡೀಸೆಲ್ ಎಂಜಿನ್ ವಾಹನಗಳನ್ನು ಬಳಸಬೇಡಿ ಎಂದು ಮನವಿ ಮಾಡಲಾಗಿದೆ. ಕಳೆದ 2 ವಾರಗಳಿಂದ ಮಾಲಿನ್ಯ ಕಡಿಮೆ ಮಾಡುವ ಸಲುವಾಗಿ ದೆಹಲಿ ಸರ್ಕಾರ ತೆಗೆದುಕೊಳ್ಳುತ್ತಿರುವ ಯಾವುದೇ ಕ್ರಮದಿಂದ ಪ್ರಯೋಜನವಾಗುತ್ತಿಲ್ಲ. ಸಾರ್ವಜನಿಕರು ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸಿರುವ ಕಾರಣ ವಾಯು ತೀರಾ ಹದಗೆಟ್ಟಿದೆ.

ದೆಹಲಿ ಮಾಲಿನ್ಯ 20 ಸಿಗರೇಟ್ ಸೇದುವುದಕ್ಕೆ ಸಮ
ದೆಹಲಿ ಮಾಲಿನ್ಯ ಎಷ್ಟರ ಮಟ್ಟಿಗಿದೆ ಎಂದರೆ 20ಸಿಗರೇಟ್ ಸೇದುವುದಕ್ಕೆ ಸಮವಾಗಿದೆ. ದೆಹಲಿಯ ಗಂಗಾರಾಮ್ ಆಸ್ಪತ್ರೆಯ ಶಾಸಕೋಶ ಚಿಕಿತ್ಸಾ ಫೌಂಡೇಶನ್ ಮುಖ್ಯಸ್ಥ ಡಾ ಅರವಿಂದ್ ಹೇಳುವ ಪ್ರಕಾರ ರಾಜಧಾನಿ ವಾಯುಮಾಲಿನ್ಯ ಜನರ ಮೇಲೆ ಆಗುತ್ತಿರುವ ಏರುಪೇರನ್ನು ವಿವರಿಸಿದ್ದಾರೆ.ಸಿಗರೇಟು ಸೇದುವವರ ಶ್ವಾಸಕೋಶಗಳು ಕಪ್ಪಾಗಿ ಕಂಡುಬಂದರೆ, ಉಳಿದವರದ್ದು ಗುಲಾಬಿ ಬಣ್ಣದಲ್ಲಿ ಇರುತ್ತಿತ್ತು. ಆದರೆ ವಾಯುಮಾಲಿನ್ಯ ದ ಪರಿಣಾಮ ಎಲ್ಲರಲ್ಲೂ ಕಪ್ಪು ಶ್ವಾಸಕೋಶಗಳು ಕಾಉತ್ತಿವೆ, ಇದು ಭಯಾನಕ ಎಂದು ಹೇಳಿದ್ದಾರೆ.

ಮಾಲಿನ್ಯ, 3 ದಿನ ಸರಕು ಸಾಗಣೆ ವಾಹನಗಳ ನಿಷೇಧ
ದೀಪಾವಳಿ ಬೆನ್ನಲ್ಲೇ ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ದೆಹಲಿಗೆ ಸರಕುಸಾಗಣೆ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ಮಂಗಳವಾರ ಹಾಗೂ ಬುಧವಾರ ಪಟಾಕಿ ಸಿಡಿಸಿದ ಪರಿಣಾಮ ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲೀನ್ಯ ಹೆಚ್ಚಾಗಿದ್ದು, ಹೊಗೆ ಜತೆಗೆ ಮಂಜು ಮಿಶ್ರಣವಾಗಿ ಪರಿಸ್ಥಿತಿ ಹದಗೆಟ್ಟಿದೆ ಎಂದು ಕೇಂದ್ರ ಮಾಲೀನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ಪಟಾಕಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರಕಾರ ಅನೇಕ ಸೂಚನೆಗಳನ್ನು ನೀಡಿದ್ದರೂ ಸಾರ್ವಜನಿಕರು ಇವುಗಳನ್ನು ಗಾಳಿಗೆ ತೂರಿ ಪಟಾಕಿ ಸಿಡಿಸಿದ್ದಾರೆ.

ಪಟಾಕಿ ಸಿಡಿಸಿದವರ ವಿರುದ್ಧ ಎಫ್ಐಆರ್
ಸುಪ್ರೀಂ ಕೋರ್ಟಿನ ಹೊರತಾಗಿಯೂ ಅಕ್ರಮವಾಗಿ ಪಟಾಕಿ ಮಾರಾಟ ಮಾಡಿದವರ ಹಾಗೂ ರಾತ್ರಿ 8 ಗಂಟೆಗೂ ಮುನ್ನ ಪಟಾಕಿ ಸಿಡಿಸಿದವರ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮಳಿಗೆಗಳ ಮೇಲೆ ದಾಳಿ ಮಾಡಿದ ಪೊಲೀಸರು ಸುಮಾರು 600 ಕೆ.ಜಿಗೂ ಹೆಚ್ಚಿನ ಪಟಾಕಿ ವಶಪಡಿಸಿಕೊಂಡಿದ್ದು, 100ಕ್ಕೂ ಹೆಚ್ಚು ಮಂದಿ ಎಫ್ಐಆರ್ ದಾಖಲಿಸಲಾಗಿದೆ.

ವಾಯುಮಾಲಿನ್ಯ ಕಡಿತಕ್ಕೆ ಕೇಂದ್ರದ ಅಭಿಯಾನ
ರಾಜ್ಯದ ಬೆಂಗಳೂರು, ದಾವಣಗೆರೆ, ಕಲಬುರಗಿ ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿನ ವಾಯು ಮಾಲಿನ್ಯವನ್ನು ,ಮುಂದಿನ ಮೂರು ವರ್ಷಗಳಲ್ಲಿ ಶೇ.35ರಷ್ಟು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಪರಿಸರ ಸಚಿವಾಲಯ ಮಾಲಿನ್ಯ ವಿರೋಧಿ ಅಭಿಯಾನವನ್ನು ಹಮ್ಮಿಕೊಂಡಿದೆ.

ವಾಯು ಮಾಲಿನ್ಯ: ಪ್ರಾಣಿಗಳ ಗತಿ ಏನು?
ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿ ಮೀರಿದೆ ಮನುಷ್ಯರು ಮಾಸ್ಕ್ ಧರಿಸುತ್ತಾರೆ, ಮನೆಯೊಳಗಿದ್ದು ಅಲ್ಪಮಟ್ಟಿಗೆ ಮಾಲಿನ್ಯದಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತಾರೆ. ಆದರೆ ಪ್ರಾಣಿಗಳ ಗತಿ ಏನು ಎಂದು ಒಮ್ಮೆಯಾದರೂ ಯೋಚಿಸಬೇಕು. ಮನುಷ್ಯರು ಮಾಡಿರುವ ತಪ್ಪಿಗೆ ಪ್ರಾಣಿಗಳು ಬಲಿಯಾಗುತ್ತಿವೆ. ನಾಯಿ, ಹಸುಗಳು, ಹಂದಿ, ಬೆಕ್ಕು, ಪಕ್ಷಿಗಳ ಪ್ರಾಣಕ್ಕೆ ಹಾನಿಯಾಗುತ್ತಿದೆ. ಹಾಗಾದರೆ ಅವುಗಳನ್ನು ರಕ್ಷಿಸುವವರು ಯಾರು ಎನ್ನುವುದು ಪ್ರಶ್ನೆಯಾಗಿದೆ.












Click it and Unblock the Notifications