ಕೆಪಿಸಿಸಿ ಅಧ್ಯಕ್ಷ ಸ್ಥಾನ ಘೋಷಣೆ ವಿಳಂಬ: ದೆಹಲಿಯಲ್ಲೇ ಬೀಡುಬಿಟ್ಟ ಡಿಕೆಶಿ
ನವದೆಹಲಿ, ಜನವರಿ 27: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಮಾಜಿ ಸಚಿವ ಡಿಕೆ ಶಿವಕುಮಾರ್ ನಡೆ ತೀವ್ರ ಕುತೂಹಲ ಮೂಡಿಸಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಘೋಷಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. ಹೈಕಮಾಂಡ್ ಭೇಟಿಗೆ ಸತತ ಪ್ರಯತ್ನ ನಡೆಸುತ್ತಿದ್ದಾರೆ.
ಈಗಾಗಲೇ ದೆಹಲಿಯಲ್ಲಿ ವಕೀಲರನ್ನು ಅವರು ಭೇಟಿ ಮಾಡಿದ್ದಾರೆ. ಕಾನೂನು ತೊಡಕುಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ. ಇಂದು ಸಂಜೆ ಅಥವಾ ನಾಳೆ ಬೆಂಗಳೂರಿಗೆ ವಾಪಸಾಗುವ ಸಾಧ್ಯತೆ ಇದೆ.

ಮಧ್ಯಪ್ರದೇಶದಲ್ಲಿ ಡಿಕೆಶಿ ಹೋಮ
ಕೆಪಿಸಿಸಿ ಹುದ್ದೆ ವಿಚಾರದಲ್ಲಿ ಹೈ ಕಮಾಂಡ್ ಗೊಂದಲ ನಿಲುವು ತಾಳಿದೆ. ಹೈ ಕಮಾಂಡ್ನ ಈ ನಡೆ ಹುದ್ದೆ ಆಕಾಂಕ್ಷಿಯಾಗಿರುವ ಡಿಕೆ ಶಿವಕುಮಾರ್ ಅವರನ್ನು ಕಂಗೆಡಿಸಿದೆ. ಇನ್ನೇನು ಡಿಕೆ ಶಿವಕುಮಾರ್ ಅವರೇ ಅಂತಿಮ ಆಯ್ಕೆ ಎನ್ನುವ ಸಂದರ್ಭದಲ್ಲಿ ಹೈ ಕಮಾಂಡ್ ಅನುಸರಿಸುತ್ತಿರುವ ನಡೆ ಡಿಕೆ ಶಿವಕುಮಾರ್ ಅವರಲ್ಲಿ ದಿಗ್ಭ್ರಾಂತಿ ಮೂಡಿಸಿದೆ. ಇದೇ ಹಿನ್ನೆಲೆ ಕಳೆದ ಮೂರು ನಾಲ್ಕು ದಿನಗಳಿಂದಲೂ ಅವರು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಅವರು ದೂರದ ಮಧ್ಯಪ್ರದೇಶಕ್ಕೆ ತೆರಳಿದ್ದು, ಅಲ್ಲಿನ ಬಾಗಲ್ಮುಖಿ, ಧೂಮವತಿ ದೇಗುಲದಲ್ಲಿ ವಿಶೇಷ ಹೋಮ, ಹವನ ನಡೆಸಿದ್ದಾರೆ.

ಸಿದ್ದರಾಮಯ್ಯ ಬಣದ ಬೇಡಿಕೆ ಏನು?
ಶಿವಕುಮಾರ್ ಅವರಿಗೆ ಕೆಪಿಸಿಸಿ ಪಟ್ಟ ನೀಡಲು ಹೈಕಮಾಂಡ್ ಸಮ್ಮತಿ ಸೂಚಿಸಿದೆ ಎಂದು ಹೇಳುತ್ತಿದ್ದರೂ ಕಾರ್ಯಾಧ್ಯಕ್ಷ ಸ್ಥಾನ ವಿಚಾರವಾಗಿ ಸಿದ್ದರಾಮಯ್ಯ ಬಣದ ಬೇಡಿಕೆ ಹಿನ್ನೆಲೆಯಲ್ಲಿ ಸದ್ಯ ಯಾವುದೇ ನಿರ್ಧಾರ ಕೈಗೊಳ್ಳದಿರಲು ಹೈ ಕಮಾಂಡ್ ನಿರ್ಧರಿಸಿದೆ.

ಸಮನ್ವಯ ಸಮಿತಿ ರಚಿಸಬೇಕು
ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ನಾಲ್ವರು ಕಾರ್ಯಾಧ್ಯಕ್ಷರು ಹಾಗೂ ಸಮನ್ವಯ ಸಮಿತಿಯನ್ನು ರಚಿಸಬೇಕು ಎಂದು ಸಿದ್ದರಾಮಯ್ಯ ಬೇಡಿಕೆ ಇಟ್ಟಿದ್ದಾರೆ. ಆದರೆ ಕಾರ್ಯಾಧ್ಯಕ್ಷರ ನೇಮಕಕ್ಕೆ ಡಿಕೆ ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಹಿರಿಯ ಕಾಂಗ್ರೆಸ್ ಮುಖಂಡರೂ ಸಾಥ್ ನೀಡಿದ್ದಾರೆ.

ದೆಹಲಿ ಪೊಲೀಸ್ ಠಾಣೆಗೆ ತೆರಳಿದ ಡಿಕೆ ಶಿವಕುಮಾರ್
ಡಿಕೆಶಿಗೆ ಸೇರಿದ ದೆಹಲಿ ನಿವಾಸದಲ್ಲಿ ಸಿಕ್ಕ ಅಕ್ರಮ ಹಣದ ಕುರಿತು ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸಮನ್ಸ್ ಜಾರಿಗೊಳಿಸಿದ್ದರು. ಅದರಂತೆ ಕಳೆದ ಆ. 30ರಂದು ಡಿಕೆ ಶಿವಕುಮಾರ್ ದೆಹಲಿಯ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಆದರೆ, ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಇಡಿ ಅಧಿಕಾರಿಗಳು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನುಕಳೆದ ಸೆ. 3ರಂದು ವಶಕ್ಕೆ ಪಡೆದಿದ್ದರು. ನಂತರ ಜೈಲಿನಿಂದ ಅವರು ಹೊರ ಬಂದಿದ್ದರು. ಈಗ ಅವರು ಮತ್ತೆ ಠಾಣೆಗೆ ತೆರಳಿದ್ದಾರೆ.












Click it and Unblock the Notifications