ದೆಹಲಿ ಚುನಾವಣೆಗೆ ಒಂದು ದಿನದ ಮುನ್ನ ಕೇಜ್ರಿವಾಲ್ ಗೆ ಭಾರೀ ಆಘಾತ
ನವದೆಹಲಿ, ಫೆ 7: ಎಪ್ಪತ್ತು ಶಾಸಕರ ದೆಹಲಿ ವಿಧಾನಸಭೆಗೆ ನಾಳೆ (ಶನಿವಾರ, ಫೆ 8) ಚುನಾವಣೆ ನಡೆಯಲಿದೆ. ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರೆ, ಕಾಂಗ್ರೆಸ್ ಪ್ರಚಾರ ಸಪ್ಪೆಯಾಗಿತ್ತೆಂದೇ ಹೇಳಬಹುದು.
ಚುನಾವಣೆಗೆ ಒಂದು ದಿನದ ಮುನ್ನ ಜಾರಿ ನಿರ್ದೇಶನಾಲಯದ (ಇಡಿ) ತನಿಖಾ ವರದಿಯೊಂದು ಬಹಿರಂಗಗೊಂಡಿದೆ. ಈ ವರದಿಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ಸಿಗೆ ಭಾರೀ ಆಘಾತ ತಂದೊಡ್ಡುವ ಅಂಶಗಳಿವೆ.
ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ದ ದೆಹಲಿಯ ಶಹೀನ್ ಬಾಗ್ ನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸಂಬಂಧ ಪಟ್ಟಂತೆ, ಇಡಿಯ ವರದಿ ಇದಾಗಿದೆ. ಹೋರಾಟಗಾರರಿಗೆ ದುಡ್ಡು ಎಲ್ಲಿಂದ ಹರಿದು ಬರುತ್ತಿದೆ ಎನ್ನುವುದರ ಬಗ್ಗೆ ಇಡಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಈ ವಿವಾದೀತ ಮಸೂದೆಯನ್ನು ವಿರೋಧಿಸುತ್ತಿರುವ ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಬಿಜೆಪಿ ಮುಖಂಡರು, ಈಗಾಗಲೇ ದೇಶದ್ರೋಹಿ, ಹಿಂದೂ ವಿರೋಧಿ ಎಂದು ವಾಗ್ದಾಳಿ ನಡೆಸಿದ್ದಾರೆ. ವರದಿಯಲ್ಲಿ ಏನಿದೆ, ಮುಂದೆ ಓದಿ:

ದೆಹಲಿ ಘಟಕದ ಮುಖ್ಯಸ್ಥ ಮೊಹಮ್ಮದ್ ಪರ್ವೇಜ್ ಅಹಮದ್
ಕೇರಳದಲ್ಲಿ ತನ್ನ ಮೂಲ ಕಾರ್ಯಾಚಾರಣೆ ಸೆಂಟರ್ ಅನ್ನು ಹೊಂದಿರುವ ಪಿಎಫ್ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ದೇಶದ ವಿವಿದೆಡೆ ತನ್ನ ಬಾಹುವನ್ನು ವಿಸ್ತರಿಸಿಕೊಂಡಿದೆ. ದೆಹಲಿಯ ಶಹೀನ್ ಬಾಗ್ ನಲ್ಲಿ ಮತ್ತು ದೇಶದ ಇತರೆಡೆ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ದದ ಹೋರಾಟಗಾರರಿಗೆ, ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ ಈ ಸಂಘಟನೆಯ ಮೇಲಿದೆ. ಈ ಸಂಘಟನೆಯ ದೆಹಲಿ ಘಟಕದ ಮುಖ್ಯಸ್ಥ ಮೊಹಮ್ಮದ್ ಪರ್ವೇಜ್ ಅಹಮದ್.

ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್
ಪರ್ವೇಜ್ ಮೊಹಮ್ಮದ್ ಮತ್ತು ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಜೊತೆ ಹಣಕಾಸಿನ ವ್ಯವಹಾರ ಇಟ್ಟುಕೊಂಡಿರುವ ಅಂಶ ಇಡಿ ತನಿಖೆಯಲ್ಲಿ ಬಹಿರಂಗಗೊಂಡಿದೆ. ಈತನ ಜೊತೆಗೆ, ನಡೆಸಿದ ಹಣಕಾಸು ವ್ಯವಹಾರದ ದಾಖಲೆಗಳು, ವಾಟ್ಸಾಪ್ ಚಾಟ್ ನ ಸ್ಕ್ರೀನ್ ಶಾಟ್ ಕಾಪಿಗಳನ್ನು ಇಡಿ ತನ್ನ ವಶಕ್ಕೆ ತೆಗೆದುಕೊಂಡಿದೆ.

ಕಾಂಗ್ರೆಸ್ ಮುಖಂಡ ಉದಿತ್ ರಾಜ್
ಸಂಜಯ್ ಸಿಂಗ್ ಅಲ್ಲದೇ, ಕಾಂಗ್ರೆಸ್ ಮುಖಂಡ ಉದಿತ್ ರಾಜ್ ಜೊತೆಗೂ, ಪರ್ವೇಜ್ ಮೊಹಮ್ಮದ್ ಹಣಕಾಸು ವ್ಯವಹಾರವನ್ನು ಇಟ್ಟುಕೊಂಡಿದ್ದಾನೆ. ಪಿಎಫ್ಐ ಸಂಘಟನೆಗೆ ಸೇರಿದ ವಿವಿಧ ಖಾತೆಗಳಿಗೆ ಒಂದೇ ತಿಂಗಳ ಅವಧಿಯಲ್ಲಿ 120 ಕೋಟಿ ರೂ. ಹಣ ಜಮೆಯಾಗಿತ್ತು. ಇದರ ಮೂಲವನ್ನು ಜಾರಿ ನಿರ್ದೇಶನಾಲಯ ಈಗ ಕೆದಕಿದಾಗ, ಈ ಸ್ಪೋಟಕ ಮಾಹಿತಿಗಳು ಇಡಿಗೆ ಲಭಿಸಿದೆ.

ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ ಎನ್ನುವ ಫಲಿತಾಂಶ
"ಅಮಿತ್ ಶಾ ಅವರ ಮರ್ಜಿಯಂತೆ ಇಡಿ ಕೆಲಸ ಮಾಡುತ್ತಿದೆ" ಎಂದು ಆಪ್ ಹೇಳಿಕೆ ನೀಡಿದೆ. ಇದುವರೆಗೆ ಪ್ರಕಟಗೊಂಡಿರುವ ಚುನಾವಣಾಪೂರ್ವ ಸಮೀಕ್ಷೆಗಳಲ್ಲಿ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ ಎನ್ನುವ ಫಲಿತಾಂಶ ಬಂದಿತ್ತು. ಆದರೆ, ಈಗ ಇಡಿ ತನಿಖಾ ವರದಿ, ಮತದಾರರ ಮೇಲೆ, ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದಕ್ಕೆ, ಫೆಬ್ರವರಿ ಹನ್ನೊಂದರ ವರೆಗೆ ಕಾದರೆ ಸಾಕು.












Click it and Unblock the Notifications