ಯಾವ ಕೊರೊನಾ ಸೋಂಕಿತರಿಗೆ 'ಸಿಟಿ ಸ್ಕ್ಯಾನ್' ಹೆಚ್ಚು ಅಪಾಯಕಾರಿ!?
ನವದೆಹಲಿ, ಮೇ 03: ಕೊರೊನಾವೈರಸ್ ಸೋಂಕಿನ ಆರಂಭಿಕ ಲಕ್ಷಣಗಳನ್ನು ಹೊಂದಿರುವವರು ಸಿಟಿ ಸ್ಕ್ಯಾನ್ ಮಾಡಿಸಿಕೊಂಡರೆ ಒಳ್ಳೆಯದಕ್ಕಿಂತ ಅಪಾಯವೇ ಹೆಚ್ಚಾಗುತ್ತದೆ ಎಂದು ದೆಹಲಿ ಏಮ್ಸ್ ಆಸ್ಪತ್ರೆ ನಿರ್ದೇಶಕ ರಂದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ನಡೆಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರುಮಾತನಾಡಿದರು. ಯಾವುದೇ ರೀತಿ ಎದೆಯ ನೋವು ಕಾಣಿಸಿಕೊಳ್ಳದ ಹಾಗೂ ಕೊರೊನಾವೈರಸ್ ರೋಗದ ಆರಂಭಿಕ ಲಕ್ಷಣಗಳನ್ನು ಹೊಂದಿರುವವರು ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳುವುದು ಉತ್ತಮವಲ್ಲ ಎಂದು ತಿಳಿಸಿದ್ದಾರೆ.
ನಮಗ್ಯಾಕೆ ಕೊರೊನಾ ಲಸಿಕೆ: ಪ್ರಶ್ನೆ ಕೇಳುವವರಿಗೆ ಇಲ್ಲಿದೆ ಉತ್ತರ
ಕಿರಿಯ ವಯಸ್ಸಿನಲ್ಲಿ ಒಬ್ಬ ವ್ಯಕ್ತಿಯು 300 ರಿಂದ 400 ಪ್ರಮಾಣದ ವೈದ್ಯಕೀಯ ಎಕ್ಸ್ ರೇ ಮಾಡಿಸಿಕೊಳ್ಳುವುದರಿಂದ ಹೆಚ್ಚಿನ ಅಪಾಯವಿದೆ. ಭವಿಷ್ಯದಲ್ಲಿ ಅಂಥವರಿಗೆ ಕ್ಯಾನ್ಸರ್ ರೋಗ ತಗುಲುವ ಸಾಧ್ಯತೆಗಳು ಜಾಸ್ತಿ ಆಗಿರುತ್ತವೆ ಎಂದು ರಂದೀಪ್ ಗುಲೇರಿಯಾ ಹೇಳಿದ್ದಾರೆ.
ಕೊರೊನಾವೈರಸ್ ಬಗ್ಗೆ ಮುನ್ನೆಚ್ಚರಿಕೆ ವಹಿಸಿ
ನವದೆಹಲಿ, ಮಧ್ಯಪ್ರದೇಶ, ಛತ್ತೀಸ್ ಗಢ, ಮಹಾರಾಷ್ಟ್ರ ಹಾಗೂ ಪಂಜಾಬ್ ಅಂತಹ ರಾಜ್ಯಗಳಲ್ಲಿ ಕೊರೊನಾವೈರಸ್ ಸೋಂಕಿನ ಆರಂಭಿಕ ಹಂತವನ್ನೇ ಹೆಚ್ಚು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ತೀರಾ ಸೂಕ್ಷ್ಮ ಮತ್ತು ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ರೋಗಾಣುವಿನ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ ಎಂದು ರಂದೀಪ್ ಗುಲೇರಿಯಾ ತಿಳಿಸಿದ್ದಾರೆ.
ಯಾವ ರಾಜ್ಯಗಳಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣ ದಾಖಲು
ಯಾವ ರಾಜ್ಯಗಳಲ್ಲಿ ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆಯೋ ಅಂಥ ರಾಜ್ಯಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾಲ್ ಅಗರ್ ವಾಲ್ ಎಚ್ಚರಿಸಿದ್ದಾರೆ. ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ ಗಢ, ಹರಿಯಾಣ, ಕರ್ನಾಟಕ, ಕೇರಳ, ಹಿಮಾಚಲ ಪ್ರದೇಶ, ಮಣಿಪುರ ಮತ್ತು ಮೇಘಾಲಯದಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ.
ಭಾರತದಲ್ಲಿ ಹೆಚ್ಚಾದ ಸಾವಿನ ಪ್ರಕರಣಗಳ ಪ್ರಮಾಣ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, 12 ರಾಜ್ಯಗಳಲ್ಲಿ ಅತಿಹೆಚ್ಚು ಸಾವಿನ ಪ್ರಕರಣಗಳು ವರದಿಯಾಗುತ್ತಿವೆ. ಶೇ.1.10ರಷ್ಟು ಸಾವಿನ ಪ್ರಕರಣಗಳು ದೃಢಪಟ್ಟಿದ್ದು, 12 ರಾಜ್ಯಗಳಲ್ಲಿ 1 ಲಕ್ಷಕ್ಕಿಂತ ಅಧಿಕ ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿವೆ. 7 ರಾಜ್ಯಗಳಲ್ಲಿ 50,000 ದಿಂದ 1ಲಕ್ಷದವರೆಗೂ ಸಕ್ರಿಯ ಪ್ರಕರಣಗಳಿವೆ. ಉಳಿದಂತೆ 17 ರಾಜ್ಯಗಳಲ್ಲಿ 50,000ಕ್ಕೂ ಹೆಚ್ಚು ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಭಾರತದ 11 ರಾಜ್ಯಗಳಲ್ಲಿ 3ನೇ ಹಂತದ ಕೊವಿಡ್-19 ಲಸಿಕೆ
ಭಾರತದ 11 ರಾಜ್ಯಗಳಲ್ಲಿ ಮಾತ್ರ 18 ವರ್ಷ ಮೇಲ್ಪಟ್ಟ 44 ವರ್ಷದೊಳಗಿನ ಜನರಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗುತ್ತಿದೆ. ಈವರೆಗೂ 86,023 ಜನರಿಗೆ ಲಸಿಕೆ ನೀಡಲಾಗಿದ್ದು, ಈ ಪೈಕಿ ಛತ್ತೀಸ್ ಗಢ 987, ನವದೆಹಲಿ 1,472, ಗುಜರಾತ್ 51,622, ಜಮ್ಮು ಮತ್ತು ಕಾಶ್ಮೀರ 201, ಕರ್ನಾಟಕ 649, ಮಹಾರಾಷ್ಟ್ರ 12,525, ಒಡಿಶಾ 97, ಪಂಜಾಬ್ 298, ರಾಜಸ್ಥಾನ 1853, ತಮಿಳುನಾಡು 527, ಹಾಗೂ ಉತ್ತರ ಪ್ರದೇಶದಲ್ಲಿ 15,792 ಮಂದಿಗೆ ಲಸಿಕೆ ನೀಡಲಾಗಿದೆ.