ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಮೌಲಾನಾ ವಿರುದ್ಧ ಎಫ್ಐಆರ್
ನವದೆಹಲಿ, ಮಾರ್ಚ್ 31: ದೆಹಲಿಯ ನಿಜಾಮುದ್ದೀನ್ ನಲ್ಲಿ ತಬ್ಲಿಘಿ ಮಾರ್ಕಾಜ್ ಸಭೆಯಲ್ಲಿ ಭಾಗವಹಿಸಿದ್ದ ಧರ್ಮ ಪ್ರಚಾರಕರು ಸೇರಿದಂತೆ ಹಲವರ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಧಾರ್ಮಿಕ ಸಮಾರಂಭ ಕುರಿತಂತೆ ಸರ್ಕಾರ ನೀಡಿದ್ದ ಆದೇಶವನ್ನು ಉಲ್ಲಂಘಿಸಿದ ಆರೋಪವನ್ನು ಹೊರೆಸಲಾಗಿದೆ.
ತಬ್ಲಿಘಿ ಜಮಾತ್ ಸದಸ್ಯರಾದ ಮೌಲಾನಾ ಸಾದ್ ಹಾಗೂ ಇನ್ನಿತರ ವಿರುದ್ಧ ದಕ್ಷಿಣ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿ, ಎಫ್ಐಆರ್ ಹಾಕಿದ್ದಾರೆ. 1897ರ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಸೆಕ್ಷನ್ 3 ಉಲ್ಲಂಘನೆ ಸೇರಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 269, 270 ಹಾಗೂ 120ಬಿ ಸೆಕ್ಷನ್ ಗಳಡಿಯಲ್ಲಿ ಆರೋಪ ಹೊರೆಸಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ಸಭೆ, ಸಮಾರಂಭಗಳನ್ನು ಆಯೋಜಿಸುವುದನ್ನು ನಿರ್ಬಂಧಿಸಲಾಗಿದೆ. ಆದರೆ, ನಿಜಾಮುದ್ದೀನ್ ಎಂಬಲ್ಲಿ ತಬ್ಲಿಘಿ ಮಾರ್ಕಾಜ್ ಸಭೆ ಆಯೋಜಿಸಲಾಗಿತ್ತು. ದೇಶ, ವಿದೇಶದಿಂದ ಹಲವು ಪ್ರಚಾರಕರು ಭಾಗವಹಿಸಿದ್ದರು.
ದಕ್ಷಿಣ ದೆಹಲಿಯಲ್ಲಿ ತಬ್ಲಿಘಿ ಇ ಜಮಾತ್ ಆಯೋಜಿಸಿದ್ದ ಮಾರ್ಕಾಜ್ ಮಾರ್ಚ್ 1 ರಿಂದ 15 ರ ತನಕ ನಡೆದಿತ್ತು. ಕನಿಷ್ಠ 2000 ಮಂದಿ ಪಾಲ್ಗೊಂಡಿದ್ದರು. ಈ ಪ್ರದೇಶದ ಸುಮಾರು 24 ಮಂದಿಗೆ ಕೊವಿಡ್19 ಸೋಂಕು ಪಾಸಿಟಿವ್ ಎಂದು ಬಂದಿದೆ. 441 ಮಂದಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇಡೀ ಪ್ರದೇಶವನ್ನು ಬಂದ್ ಮಾಡಲಾಗಿದೆ. ನಿಜಾಮುದ್ದೀನ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ರೋಗದ ಲಕ್ಷಣ ಕಾಣಿಸಿಕೊಳ್ಳದ 1107ಕ್ಕೂ ಅಧಿಕ ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಈ ನಡುವೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರಲ್ಲಿ ಯಾರಾದರೂ ಕೊವಿಡ್19 ಸೋಂಕಿಗೆ ಒಳಗಾಗಿರಬಹುದು. ದಯವಿಟ್ಟು ತಕ್ಷಣ ಈ 080-29711171 ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ಹೊರಡಿಸಿದೆ.












Click it and Unblock the Notifications