ದೆಹಲಿಯಲ್ಲಿ ಕೊರೊನಾ ಪ್ರಕರಣಗಳ ಇಳಿಕೆ: ಮೂರನೇ ಅಲೆ ಎದುರಿಸಲು ಸಿದ್ಧತೆ
ದೆಹಲಿ, ಮೇ 20: ಕಳೆದ ನಾಲ್ಕು ವಾರಗಳ ಹಿಂದೆ ದೇಶದ ರಾಜಧಾನಿ ದೆಹಲಿ ಕೊರೊನಾ ವೈರಸ್ನಿಂದ ತತ್ತರಿಸಿಹೋಗಿತ್ತು. ಎರಡನೇ ಅಲೆ ದೇಶಾದ್ಯಂತ ದೊಡ್ಡ ಆಘಾತವನ್ನು ನೀಡುತ್ತಿರುವಂತೆಯೇ ದೆಹಲಿ ಆಸ್ಪತ್ರೆಗಳಲ್ಲಿಯೂ ಆಕ್ಸಿಜನ್, ಬೆಡ್ ಸಮಸ್ಯೆಗಳು ಭಾರೀ ಪ್ರಮಾಣದಲ್ಲಿ ತಲೆದೂರಿತ್ತು. ಆದರೆ ಸದ್ಯ ಕೊರೊನಾ ವೈರಸ್ ಪ್ರಕರಣಗಳು ದೆಹಲಿಯಲ್ಲಿ ಕಡಿಮೆಯಾಗುತ್ತಿದೆ. ಹೀಗಾಗಿ ದೆಹಲಿ ಸರ್ಕಾರ ಮೂರನೇ ಅಲೆ ಎದುರಿಸಲು ಸಿದ್ಧತೆಗಳನ್ನು ಆರಂಭಿಸಿದೆ.
ಬುಧವಾರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೂರನೇ ಅಲೆ ಎದುರಿಸಲು ದೆಹಲಿ ಸರ್ಕಾರಯೋಜನೆಯನ್ನುಸಿದ್ಧಪಡಿಸಿಕೊಂಡಿದೆ ಎಂದು ತಿಳಿಸಿದರು. ಮೂರನೇ ಅಲೆ ಕಿರಿಯ ವಯಸ್ಸಿನ ಮೇಲೆ ವಿಶೇಷವಾಗಿ ಮಕ್ಕಳನ್ನು ಹೆಚ್ಚಾಗಿ ಕಾಡಬಹುದು ಎಂದು ಅಂದಾಜಿಸಲಾಗಿದ್ದು ಅದಕ್ಕಾಗಿ 40,000 ಆಮ್ಲಜನಕ ಬೆಡ್ಗಳು ಹಾಗೂ 10,000 ಐಸಿಯು ಬೆಡ್ಗಳ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಕೋವಿಡ್-19 ಚಿಕಿತ್ಸೆಗೆ ಔಷಧಗಳ ಕೊರತೆ ಇಲ್ಲ: ಸಚಿವ ಮನ್ಸುಖ್
ಮೂರನೇ ಅಲೆಯ ಎಚ್ಚರಿಕೆಯನ್ನು ತಳ್ಳಿಹಾಕುವಂತಿಲ್ಲ ಎಂದು ತಜ್ಞರು ಅಭಿಪ್ರಾಯವನ್ನು ವ್ಯಕ್ತಪಡಿಸಿದ ನಂತರ ಈ ಸಿದ್ಧತೆಗಳನ್ನು ದೆಹಲಿ ಸರ್ಕಾರ ಕೈಗೊಂಡಿದೆ. ಹೆಚ್ಚಾಗಿ ಹರಡುವ ಸಾಮರ್ಥ್ಯವನ್ನು ಹೊಂದಿರುವ ರೂಪಾಂತರ ಮಾದರಿಯಾದ Sars-Cov-2ನ ಆತಂಕ ಮತ್ತು ಕಡಿಮೆ ಪ್ರಮಾಣದಲ್ಲಿ ಲಸಿಕೆ ನಡೆಸಿರುವುದು ದೆಹಲಿ ಸರ್ಕಾರ ಮೂರನೇ ಅಲೆ ಎದುರಿಸುವ ಸಿದ್ಧತೆಗೆ ಮತ್ತಷ್ಟು ಚುರುಕು ಮುಟ್ಟಿಸಿದೆ.
"ಕೊರೊನಾ ವೈರಸ್ನ ಮೂರನೇ ಅಲೆ ಆರಂಭವಾದರೆ ಅದಕ್ಕೂ ಮುನ್ನವೇ ನಾವು ಎದುರಿಸಲು ಸಜ್ಜಾಗಬೇಕಿದೆ. ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಈ ಬಗ್ಗೆ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಮೊದಲನೆಯದಾಗಿ ಮೂರನೇ ಅಲೆಯಲ್ಲಿ ಮಕ್ಕಳ ರಕ್ಷಣೆಗೆ ವಿಶೇಷ ಕಾರ್ಯಪಡೆಯನ್ನು ರಚಿಸಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಹಾಸಿಗೆಗಳು, ಆಮ್ಲಜನಕ ಮತ್ತು ಅಗತ್ಯ ಔಷಧಿಗಳ ಪೂರೈಕೆಗೆ ಮೊದಲಿಗಿಂತ ಉತ್ತಮ ವ್ಯವಸ್ಥೆ ಮಾಡಲಾಗುತ್ತದೆ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಭೆಯ ನಂತರ ಟ್ವೀಟ್ ಮಾಡಿದ್ದಾರೆ.
ವಯಸ್ಕರಿಗೆ ಹೋಲಿಸಿದರೆ ಕೊರೊನಾ ವೈರಸ್ ಮೊದಲ ಎರಡು ಅಲೆಗಳಲ್ಲಿ ಮಕ್ಕಳಲ್ಲಿ ಹೆಚ್ಚಿನ ಪರಿಣಾಮವನ್ನು ಬೀರಿಲ್ಲ. ಆದರೆ ಕೆಲ ತಜ್ಞರು ಮುಂದಿನ ದಿನಗಳಲ್ಲಿ ಇದು ಮಕ್ಕಳಿಗೂ ಅಪಾಯವನ್ನು ತಂದೊಡ್ಡಬಹುದು ಎಂಬ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ. ಭಾರತದಲ್ಲಿ ಮಕ್ಕಳಿಗೆ ನೀಡುವ ಲಸಿಕೆ ಈಗ ಪ್ರಾಯೋಗಿಕ ಹಂತದಲ್ಲಿದ್ದು ಬಳಕೆಗೆ ಮತ್ತಷ್ಟು ದಿನಗಳ ಕಾಲ ಕಾಯುವುದು ಅನಿವಾರ್ಯವಾಗಿದೆ.