ಒಂದು ವಾರದ ಪ್ರವಾಸಕ್ಕಾಗಿ ಲಂಡನ್ಗೆ ಹಾರಿದ ರಾಹುಲ್ ಗಾಂಧಿ
Recommended Video
ನವದೆಹಲಿ, ಜೂನ್ 14: ಲೋಕಸಭೆ ಚುನಾವಣೆಯಲ್ಲಿ ಆಘಾತಕಾರಿ ಸೋಲು ಅನುಭವಿಸಿದ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒಂದು ವಾರದ ಪ್ರವಾಸಕ್ಕಾಗಿ ಮಂಗಳವಾರ ಲಂಡನ್ಗೆ ತೆರಳಿದ್ದಾರೆ.
ಅವರ ಲಂಡನ್ ಪ್ರವಾಸದ ವಿಚಾರ ಗುಪ್ತವಾಗಿ ಇರಿಸಲಾಗಿತ್ತು. ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರನ್ನು ಮಂಗಳವಾರ ತಮ್ಮ ನಿವಾಸದಲ್ಲಿ ಭೇಟಿಯಾದ ಕೆಲವೇ ಸಮಯದ ಬಳಿಕ ಅವರು ಲಂಡನ್ಗೆ ತೆರಳಿದರು ಎಂದು ಮೂಲಗಳು ತಿಳಿಸಿರುವುದಾಗಿ 'ದಿ ಪ್ರಿಂಟ್' ವರದಿ ಮಾಡಿದೆ.
ಸೋನಿಯಾ, ರಾಹುಲ್ ಗಾಂಧಿ ಇಲ್ಲದೆ ಕಾಂಗ್ರೆಸ್ ಹಿರಿಯ ನಾಯಕರ ಸಭೆ!
ಜೂನ್ 17ರಿಂದ ಸಂಸತ್ನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ರಾಹುಲ್ ಗಾಂಧಿ ಅವರು ಆ ವೇಳೆಗೆ ಭಾರತಕ್ಕೆ ಮರಳುವ ನಿರೀಕ್ಷೆಯಿದೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತಮ್ಮ ರಾಜೀನಾಮೆ ವಿಚಾರವನ್ನು ಚರ್ಚಿಸದಂತೆ ಅವರು ಸೂಚಿಸಿದ್ದರು. ರಾಜೀನಾಮೆ ವಿಚಾರವನ್ನು ಮರುಪರಿಶೀಲನೆ ಮಾಡುವಂತೆ ಒಂದು ವಾರದಿಂದ ಪಕ್ಷದ ಮುಖಂಡರು ರಾಹುಲ್ ಗಾಂಧಿ ಅವರ ಮನವೊಲಿಸಲು ಸತತ ಪ್ರಯತ್ನ ಮಾಡುತ್ತಿದ್ದಾರೆ.
ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಬಗ್ಗೆ ವಕ್ತಾರರಿಂದ ಮಹತ್ವದ ಹೇಳಿಕೆ
ಲಂಡನ್ಗೆ ತೆರಳುವ ಮುನ್ನ ರಾಹುಲ್ ಗಾಂಧಿ ಕಳೆದ ಶುಕ್ರವಾರ ಮೂರು ದಿನಗಳ ಕೇರಳ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಅವರು ತಮಗೆ ಲೋಕಸಭೆ ಚುನಾವಣೆಯಲ್ಲಿ ಭಾರಿ ಮತಗಳ ಅಂತರದ ಗೆಲುವು ನೀಡಿದ ವಯನಾಡಿನ ಜನತೆಗೆ ಧನ್ಯವಾದ ಅರ್ಪಿಸಿದ್ದರು.
ಇನ್ನೂ ನಿರ್ಧಾರ ಕೈಗೊಳ್ಳದ ರಾಹುಲ್
ಲೋಕಸಭೆ ಚುನಾವಣೆಯಲ್ಲಿ ಕೇವಲ 52 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿರುವ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ರಾಹುಲ್ ನಿರ್ಧರಿಸಿದ್ದರು. ಅದಕ್ಕೆ ಪಕ್ಷದ ಮುಖಂಡರು, ಸೋನಿಯಾ ಗಾಂಧಿ ಹಾಗೂ ಮತ್ತಿತರರು ವಿರೋಧ ವ್ಯಕ್ತಪಡಿಸಿ, ರಾಹುಲ್ ಅವರೇ ಮುಂದುವರಿಯುವಂತೆ ಒತ್ತಾಯಿಸಿದ್ದರು. ಆದರೆ, ರಾಹುಲ್ ಗಾಂಧಿ ಈ ವಿಚಾರದಲ್ಲಿ ಇನ್ನೂ ಸಂಪೂರ್ಣ ನಿರ್ಧಾರ ತೆಗೆದುಕೊಂಡಿಲ್ಲ ಎನ್ನಲಾಗಿದೆ.
ಅಧ್ಯಕ್ಷ ಸ್ಥಾನ ಇನ್ನೂ ಅನಿಶ್ಚಿತ
ಕಳೆದ ಚುನಾವಣೆಗಿಂತ ಕೇವಲ ಎಂಟು ಅಧಿಕ ಸೀಟುಗಳನ್ನು ಗೆಲ್ಲಲು ಪಕ್ಷ ಸಫಲವಾಗಿತ್ತು. ವಿರೋಧಪಕ್ಷದ ನಾಯಕತ್ವ ಸ್ಥಾನದಲ್ಲಿ ಕೂರಲು ಇನ್ನೂ ಎರಡು ಸ್ಥಾನಗಳ ಕೊರತೆ ಎದುರಿಸುತ್ತಿದೆ. ಗೊಂದಲಕ್ಕೆ ಒಳಗಾಗಿರುವ ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದು ಅನಿಶ್ಚಿತವಾಗಿದೆ. ಈ ನಡುವೆಯೇ ಅವರು ವಿದೇಶ ಪ್ರಯಾಣಕ್ಕೆ ತೆರಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ರಾಹುಲ್ ಗಾಂಧಿ ಹಿಂದೇಟು ಇದೇ ಕಾರಣಕ್ಕಾ?
ಭೇಟಿಯಾಗಲು ಬಯಸದ ರಾಹುಲ್
'ವಿದೇಶ ಪ್ರಯಾಣಕ್ಕೆ ತೆರಳುವ ಮುನ್ನ ಅವರು ಯಾರನ್ನೂ ಭೇಟಿಯಾಗಲು ಬಯಸಿರಲಿಲ್ಲ' ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಸಲುವಾಗಿ ಸುಮಾರು ನಾಲ್ಕು ದಿನ ದೆಹಲಿಯಲ್ಲಿ ಕಾದಿದ್ದರೂ ಪ್ರಯೋಜನವಾಗಿರಲಿಲ್ಲ. ಸಿಧು ಕೂಡ ಮೂರು ದಿನ ಕಾದು ರಾಹುಲ್ ಅವರನ್ನು ಭೇಟಿ ಮಾಡಿದ್ದರು.
ತಪ್ಪಿಸಿಕೊಳ್ಳಲು ಲಂಡನ್ಗೆ
ಹೀನಾಯ ಸೋಲಿನ ಆಘಾತ ಮತ್ತು ರಾಜೀನಾಮೆಗೆ ಸಂಬಂಧಿಸಿದಂತೆ ಪಕ್ಷದ ನಾಯಕರ ಒತ್ತಡಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿಯೇ ರಾಹುಲ್ ಗಾಂಧಿ ಅವರು ಎಲ್ಲರಿಂದ ಕೆಲ ಸಮಯ ದೂರ ಇರಲು ಲಂಡನ್ಗೆ ತೆರಳಿರಬಹುದು ಎಂದು ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಮುಂದೆಯೂ ರಾಹುಲ್ ಅಧ್ಯಕ್ಷ
ರಾಹುಲ್ ಗಾಂಧಿ ಅವರು ಹಿಂದೆ, ಈಗ ಮತ್ತು ಮುಂದೆಯೂ ಪಕ್ಷದ ಅಧ್ಯಕ್ಷರಾಗಿಯೇ ಇರುತ್ತಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಸ್ಪಷ್ಟನೆ ನೀಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಪಕ್ಷದ ಹಿರಿಯ ನಾಯಕ ಎಕೆ ಆಂಟನಿ ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ನಾಯಕರು ಗುರುವಾರ ಸಭೆ ನಡೆಸಿದ್ದರು. ಗಾಂಧಿ ಕುಟುಂಬದ ನಾಯಕರೊಬ್ಬರು ಭಾಗವಹಿಸದೆ ಕಾಂಗ್ರೆಸ್ ಸಭೆ ನಡೆಸಿದ್ದು ಇದೇ ಮೊದಲು.