ಕಾಂಗ್ರೆಸ್ಸಿಗೆ ತಲೆನೋವಾದ ಹಿರಿಯ ನಾಯಕರ ಅಹಂ ಮತ್ತು ಅಶಿಸ್ತು
ನವದೆಹಲಿ, ಅಕ್ಟೋಬರ್ 12: ಕಾಂಗ್ರೆಸ್ಸಿನ ಕೆಲವು ಹಿರಿಯ ನಾಯಕರು ತಮ್ಮ ಅಹಂಕಾರ ಮತ್ತು ಅಶಿಸ್ತಿನಿಂದಾಗಿ ಪಕ್ಷಕ್ಕೆ ಹಾನಿಯುಂಟುಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ದೂರಿದ್ದಾರೆ.
ಕೆಲವು ಮೂಲಗಳ ಪ್ರಕಾರ ಇತ್ತೀಚೆಗಷ್ಟೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ಹಲವು ಸದಸ್ಯರೊಡನೆ ಫೋನ್ ಮೂಲಕ ಸಂಭಾಷಣೆ ನಡೆಸಿದರು. ಪಕ್ಷದ ಸದಸ್ಯರು, ಜಿಲ್ಲಾಧ್ಯಕ್ಷರು ಸೇರಿಂತೆ ಹಲವರೊಂದಿಗೆ ಈ ಸಂದರ್ಭದಲ್ಲಿ ಚರ್ಚೆ ನಡೆಸಿದರು.
2019 ರ ಲೋಕಸಭಾ ಚುನಾವಣೆಗೂ ಮುನ್ನ ಪಕ್ಷದ ಕುರಿತು ತಳಮಟ್ಟದಿಂದ ಯಾವ ರೀತಿಯ ಅನಿಸಿಕೆ ಇದೆ ಎಂಬುದನ್ನು ರಾಹುಲ್ ಗಾಂಧಿ ಕಲೆಹಾಕಿದರು. ಆದರೆ ಸದಸ್ಯರು ಎತ್ತಿದ ಕೆಲವು ವಿಷಯಗಳು ಪಕ್ಷದಲ್ಲಿ ಹೊಸ ಸಮಸ್ಯೆಗಳನ್ನು ಹುಟ್ಟುಹಾಕಿವೆ.

ಹಿರಿಯ ನಾಯಕರ ಅಹಂಕಾರ, ಅಶಿಸ್ತು
"ಕೆಲ ಹಿರಿಯ ನಾಯಕರು ಪಕ್ಷದ ಬೆಳವಣಿಗೆಯ ಬಗ್ಗೆ ಯೋಚಿಸುತ್ತಿಲ್ಲ. ಅಶಿಸ್ತನ್ನು ಪ್ರದರ್ಶಿಸುತ್ತಿದ್ದಾರೆ. ಜೊತೆಗೆ ಅಹಂಕಾರ ಹೆಚ್ಚಾಗಿದೆ. ಲಾಬಿ ಮಾಡಿ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿರುವ ಇಂಥವರಿಂದಾಗಿ ಪಕ್ಷಕ್ಕೆ ಸಾಕಷ್ಟು ನಷ್ಟವಾಗುತ್ತಿದೆ." ಎಂದು ಕಾಂಗ್ರೆಸ್ ಸದಸ್ಯರು ರಾಹುಲ್ ಗಾಂಧಿ ಅವರಿಗೆ ದೂರು ನೀಡಿದ್ದಾರೆ. ಆದರೆ ಆ 'ಕೆಲವು ಹಿರಿಯ ನಾಯಕರು' ಅಂದರೆ ಯಾರು ಎಂಬ ಬಗ್ಗೆ ಮಾತ್ರ ಮಾಹಿತಿ ಲಭ್ಯವಾಗಿಲ್ಲ.

ಕಾರ್ಯಕರ್ತರನ್ನು ಕೇಳುವವರೇ ಇಲ್ಲ!
"ಪಕ್ಷದ ಏಳ್ಗೆಗಾಗಿ ಹಗಲಿರುಳೆನ್ನದೆ ದುಡಿಯುವವರು ನಾವು. ಆದರೆ ಸ್ಥಳೀಯ ನಾಯಕರು ಅಲ್ಲಿನ ಕಾರ್ಯಕರ್ತರೊಂದಿಗೆ ಸಂವಹನ, ಸಂಪರ್ಕವನ್ನೇ ಇಟ್ಟುಕೊಂಡಿಲ್ಲ. ಯಾವುದೇ ಒಂದು ಕ್ಷೇತ್ರದ ಸಂಪೂರ್ಣ ಹಣೆಬರಹ ಗೊತ್ತಿರುವುದು ಕಾರ್ಯಕರ್ತರಿಗೆ, ಜಿಲ್ಲಾ ನಾಯಕರಿಗೆ ಮಾತ್ರ. ಮುಂದಿನ ಚುನಾವಣೆಯಲ್ಲಿ ಅದು ಗೆಲ್ಲಬೇತ್ತದೋ ಇಲ್ಲವೋ, ಗೆಲ್ಲುವುದಕ್ಕೆ ಯಾವ ಸ್ಟ್ರಾಟಜಿ ಬಳಸಬೇಕು ಎಂಬುದು ಆ ಕ್ಷೇತ್ರದ ಜನರನ್ನು ಪ್ರತಿದಿನ ನೋಡುವ ಕಾರ್ಯಕರ್ತರಿಗೆ ಮಾತ್ರ ಗೊತ್ತಿರುತ್ತೆ. ಕಾರ್ಯಕರ್ತರು ಮತದಾರರ ನಾಡಿಮಿಡಿತ ಅರಿತಿರುತ್ತಾರೆ. ಆದರೆ ಹಿರಿಯ ನಾಯಕರು ಕಾರ್ಯಕರ್ತರನ್ನು ವಿಶ್ವಾಸಕ್ಕೇ ತೆಗೆದುಕೊಳ್ಳುತ್ತಿಲ್ಲ" ಎಂಬುದು ಕಾರ್ಯಕರ್ತರ ಅಳಲು.

ರಾಹುಲ್ ಗಾಂಧಿ ಪ್ರತಿಕ್ರಿಯೆ ಏನು?
ಎಲ್ಲ ಸದಸ್ಯರ ಮಾತುಗಳನ್ನು ಅತ್ಯಂತ ತಾಳ್ಮೆಯಿಂದ ಕೇಳಿಸಿಕೊಂಡ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಈ ಸಮಸ್ಯೆಗಳ ಕುರಿತು ಕಳವಳ ವ್ಯಕ್ತಪಡಿಸಿದರು. "ಜಿಲ್ಲಾ ನಾಯಕರು, ಕಾರ್ಯಕರ್ತರು ಪಕ್ಷದ ಬೆನ್ನೆಲುಬು. ಪಕ್ಷವನ್ನು ಜಿಲ್ಲಾ ಮಟ್ಟದಲ್ಲಿ ಬೆಳೇಸುವ ಕಾರ್ಯ ನಡೆಯಬೇಕು. ಅಶಿಸ್ತನ್ನು ಕಾಂಗ್ರೆಸ್ ಎಂದಿಗೂ ಒಪ್ಪುವುದಿಲ್ಲ. ಆದ್ದರಿಂದ ಪಕ್ಷದ ಜಿಲ್ಲಾಧ್ಯಕ್ಷರು, ಕಾರ್ಯಕರ್ತರು, ಇತರ ಸದಸ್ಯರು, ಆಯಾ ಕ್ಷೇತ್ರದ ಶಾಸಕರು, ಸಂಸದರು ಒಟ್ಟಾಗಿ ಕಾರ್ಯ ನಿರ್ವಹಿಸಬೇಕು. ಅಂಥ ಪರಿಸ್ಥಿತಿ ನಿರ್ಮಾಣವಾಗದಿದ್ದಲ್ಲಿ ನಮಗೆ ದೂರು ನೀಡಿ" ಎಂದು ರಾಹುಲ್ ಗಾಂಧಿ ಖಡಕ್ಕಾಗಿ ಹೇಳಿದರು.

ಜನರೊಂದಿಗೆ ಸಮಯ ಕಳೆಯಿರಿ
ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ತಳಮಟ್ಟದಿಂದ ಪಕ್ಷವನ್ನ ಬೆಳೆಸುವ ಇಂಗಿತ ಕಾಂಗ್ರೆಸ್ ನದ್ದು. ಆದ್ದರಿಂದ ಎಲ್ಲಾ ಜಿಲ್ಲಾ ಅಧ್ಯಕ್ಷರು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಕಾಲ ಜನರೊಂದಿಗೇ ಕಳೆಯಲು ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಆಯಾ ಪ್ರದೇಶದ ಜನರ ನಾಡಿಮಿಡಿತ ಅರಿತು ಕೆಲಸ ಮಾಡುವಂತೆ ಅವರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಕಾಂಗ್ರೆಸ್ ನಲ್ಲಿ ಕೆಲ ಹಿರಿಯ ನಾಯಕರ ಮೇಲೆ ಕಾರ್ಯಕರ್ತರಿಗೆ, ಸ್ಥಳೀಯ ನಾಯಕರಿಗೆ ಸಾಕಷ್ಟು ಅಸಮಾಧಾನ ಇರುವುದಂತೂ ಸಾಬೀತಾಗಿದೆ.












Click it and Unblock the Notifications