ಮೈತ್ರಿ ಸರ್ಕಾರ ಬೀಳಲಿದೆ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್
Recommended Video
ನವದೆಹಲಿ, ಜುಲೈ 03: ಸರ್ಕಾರವನ್ನು ಬೀಳಿಸುವ ಅವಶ್ಯಕತೆ ಇಲ್ಲ, ಸರ್ಕಾರ ತಾನಾಗಿಯೇ ಬೀಳುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ವಿಶ್ವನಾಥ್, ಮೈತ್ರಿ ಸರ್ಕಾರದ ನಾಯಕರುಗಳಾದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಇಬ್ಬರೂ ಜವಾಬ್ದಾರಿಯಿಂದ ವರ್ತಿಸುತ್ತಿಲ್ಲ ಎಂದರು.
ಕರ್ನಾಟಕ ರಾಜಕೀಯದಲ್ಲಿ ಅರಾಜಕತೆ ಮೆರೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ ಎಚ್.ವಿಶ್ವನಾಥ್, ಕುಮಾರಸ್ವಾಮಿ ಆಗಲಿ ಸಿದ್ದರಾಮಯ್ಯ ಅವರಿಗಾಗಲಿ ಸರ್ಕಾರವನ್ನು ಉಳಿಸಿಕೊಳ್ಳುವ ಆಸೆ ಇದ್ದಂತಿಲ್ಲ ಎಂದು ತೀಕ್ಷ್ಣ ವಾಗ್ದಾಳಿ ನಡೆಸಿದರು.
ಎರಡೂ ಮೈತ್ರಿ ಪಕ್ಷಗಳ ನಡುವೆ ಸಮನ್ವಯವೇ ಇಲ್ಲ, ಚುನಾವಣೆಯಲ್ಲಿ ಸೋಲುವುದಕ್ಕೆ ಅದೇ ಕಾರಣ. ಎರಡೂ ಪಕ್ಷಗಳ ಸಾಮಾನ್ಯ ಸಭೆ ಕರೆಯಲಿಲ್ಲ, ಸಾಮಾನ್ಯ ಅಂಶಗಳ ಪಟ್ಟಿ ಮಾಡಲಿಲ್ಲ, ಸಾಮಾನ್ಯ ಪ್ರಣಾಳಿಕೆಯನ್ನು ತಯಾರಿಸಲಿಲ್ಲ ಎಂದು ವಿಶ್ವನಾಥ್ ಅವರು ಆರೋಪ ಮಾಡಿದರು.

'ಸಿದ್ದರಾಮಯ್ಯಗೆ ನನ್ನ ಮೇಲೆ ವೈಯಕ್ತಿಕ ದ್ವೇಷ'
ಸಿದ್ದರಾಮಯ್ಯ ಅವರ ಬಗ್ಗೆಯೂ ಮಾತನಾಡಿದ ಅವರು, ಅವರ ವೈಯಕ್ತಿಕ ದ್ವೇಷವನ್ನು ರಾಜ್ಯದ ಅಭಿವೃದ್ಧಿಗೆ ಬೆರೆಸಿದ್ದು ಸರಿಯಾದ ಕ್ರಮವಲ್ಲ, ನನ್ನನ್ನು ಉದ್ದೇಶಪೂರ್ವಕವಾಗಿ ಸಮನ್ವಯ ಸಮಿತಿಯಿಂದ ಹೊರಗಿಟ್ಟರು ಅವರಿಗೆ ವಿರೋಧ ಪಕ್ಷದಲ್ಲಿ ಕೂರುವ ಆಸೆಯಿದ್ದಂತಿದೆ ಎಂದು ವಿಶ್ವನಾಥ್ ಅವರು ಕಟು ವಾಗ್ದಾಳಿ ನಡೆಸಿದರು.

'ಸರ್ಕಾರ ಉಳಿಸಿಕೊಳ್ಳುವ ಆಸಕ್ತಿ ನಾಯಕರಿಗಿಲ್ಲ'
ಸಿದ್ದರಾಮಯ್ಯ ಅವರಿಗೆ ಸರ್ಕಾರವನ್ನು ಉಳಿಸಿಕೊಳ್ಳುವ ಇಷ್ಟವಿದ್ದಂತಿಲ್ಲ, ಅವರಾಗಲಿ, ಕುಮಾರಸ್ವಾಮಿ ಅವರಾಗಲಿ ಯಾರೊಬ್ಬರನ್ನೂ ಕರೆಸಿ ಮಾತುಕತೆ ಮಾಡಲಿಲ್ಲ, ಅತೃಪ್ತರ ಬೇಡಿಕೆಗಳನ್ನು ಕೇಳಲಿಲ್ಲ.

ಬಿಜೆಪಿ ಸೇರುವುದಿಲ್ಲ: ಎಚ್.ವಿಶ್ವನಾಥ್
ಬಿಜೆಪಿ ಸೇರುವ ಊಹಾಪೋಹದ ಬಗ್ಗೆ ಮಾತನಾಡಿದ ವಿಶ್ವನಾಥ್ ಅವರು, ಸ್ನೇಹವೇ ಬೇರೆ ರಾಜಕೀಯವೇ ಬೇರೆ. ಇಲ್ಲಿ ಬಂದು ಬಿಜೆಪಿ ಸಂಸದರನ್ನು ಮಾತನಾಡಿಸಿದ್ದು, ಅವರೊಂದಿಗಿನ ಸ್ನೇಹದ ಕಾರಣಕ್ಕೆ ಎಂದು ಹೇಳಿದರು.

ಹಲವು ಬಿಜೆಪಿ ಸಂಸದರ ಭೇಟಿ ಆದ ವಿಶ್ವನಾಥ್
ಇಂದು ನವದೆಹಲಿಯಲ್ಲಿ ಹಲವು ಬಿಜೆಪಿ ಸಂಸದರನ್ನು ನಾಯಕರನ್ನು ಎಚ್.ವಿಶ್ವನಾಥ್ ಭೇಟಿಯಾದರು, ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್, ಬಿಎಸ್.ರಾಘವೇಂದ್ರ, ತುಮಕೂರು ಸಂಸದ ಬಸವರಾಜು ಅವರುಗಳನ್ನು ವಿಶ್ವನಾಥ್ ಅವರು ಭೇಟಿ ಆದರು.












Click it and Unblock the Notifications