ಐಪಿಎಲ್ ಕಳ್ಳಾಟ: ಶ್ರೀನಿವಾಸನ್ಗೆ ಕ್ಲೀನ್ ಚಿಟ್
ನವದೆಹಲಿ, ನ. 17: ದೇಶಾದ್ಯಂತ ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿದ್ದ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದ ಕುರಿತು ತನಿಖೆ ನಡೆಸಿದ್ದ ನ್ಯಾ. ಮುದ್ಗಲ್ ಸಮಿತಿ ವರದಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ಬಿಡುಗಡೆ ಮಾಡಿದೆ.
ಈ ವರದಿಯ ಪ್ರಕಾರ ಐಸಿಸಿ ಅಧ್ಯಕ್ಷ ಎನ್. ಶ್ರೀನಿವಾಸನ್ಗೆ ಕ್ಲೀನ್ ಚಿಟ್ ನೀಡಿ, ದೋಷಮುಕ್ತಗೊಳಿಸಿದೆ. ಐಪಿಎಲ್ ಕಳ್ಳಾಟದಲ್ಲಿ ಶ್ರೀನಿವಾಸನ್ ಭಾಗಿಯಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಅವರ ಅಳಿಯ ಗುರುನಾಥ ಮೇಯಪ್ಪನ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದಾನೆಂದು ವರದಿಯಲ್ಲಿ ಹೇಳಲಾಗಿದೆ.
ಶ್ರೀನಿವಾಸನ್ ಕಳ್ಳಾಟದಲ್ಲಿ ಭಾಗಿಯಾಗದಿದ್ದರೂ ಅವರಿಗೆ ಈ ಕುರಿತು ಅರಿವಿತ್ತು. ಆದರೂ ಯಾವುದೇ ಕ್ರಮ ಕೈಗೊಳ್ಳಲು ಅವರು ಮುಂದಾಗಲಿಲ್ಲ ಎಂದು ಹೇಳಿದೆ. ಈ ಕುರಿತು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಶ್ರೀನಿವಾಸನ್, ಮೊದಲು ನ್ಯಾಯಾಲಯದ ತೀರ್ಪು ಓದುವುದಾಗಿ ತಿಳಿಸಿದ್ದಾರೆ.
ಅಲ್ಲದೆ,2011ರ ವಿಶ್ವಕಪ್ ತಂಡದಲ್ಲಿದ್ದ ಇಬ್ಬರು ಸ್ಟಾರ್ ಆಟಗಾರರು ಭಾಗಿಯಾಗಿದ್ದಾರೆ. ಅವರಲ್ಲೊಬ್ಬ ಗ್ರೇಟ್ ಆಲ್ರೌಂಡರ್ ಮತ್ತೊಬ್ಬ ಉತ್ಯುತ್ತಮ ವೇಗಿ ಎಂದು ವರದಿಯಲ್ಲಿ ತಿಳಿಸಲಾಗಿದೆ. [ಶ್ರೀನಿವಾಸನ್, ಮೇಯಪ್ಪನ್, ಕುಂದ್ರಾ ಇನ್ ಟ್ರಬಲ್]
ಈ ಇಬ್ಬರೂ ಮುದ್ಗಲ್ ಸಮಿತಿ ಮುಂದೆ ಹಾಜರಾದಾಗ, ನಾವಿಬ್ಬರೂ ನಿವೃತ್ತಿಯ ಅಂಚಿನಲ್ಲಿದ್ದೇವೆ. ನಿವೃತ್ತಿಯ ನಂತರದ ಜೀವನದ ಕುರಿತು ಆತಂಕ ಕಾಡುತ್ತಿದೆ. ಆದ್ದರಿಂದ ದಯವಿಟ್ಟು ವರದಿಯಲ್ಲಿ ನಮ್ಮಿಬ್ಬರ ಹೆಸರು ಬಹಿರಂಗಪಡಿಸಬೇಡಿ ಎಂದು ಗೋಗರೆದಿದ್ದಾರೆಂದು ವರದಿಯಲ್ಲಿ ವಿವರಿಸಲಾಗಿದೆ.
ಅಲ್ಲದೆ, ರಾಜಸ್ತಾನ್ ರಾಯಲ್ಸ್ ಸಹ ಮಾಲೀಕರಾದ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಸಹ ಕಳ್ಳಾಟದಲ್ಲಿ ಭಾಗಿಯಾಗಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ.