ಹೊಸ ಖಾಸಗಿ ನೀತಿ ಜಾರಿಗೊಳಿಸದಂತೆ ವಾಟ್ಸಾಪ್ಗೆ ನಿರ್ಬಂಧಿಸಿ: ಕೋರ್ಟ್ಗೆ ಕೇಂದ್ರದ ಮನವಿ
ನವದೆಹಲಿ, ಮಾರ್ಚ್ 19: ತನ್ನ ಹೊಸ ಖಾಸಗಿ ನೀತಿಯನ್ನು ಜಾರಿಗೊಳಿಸದಂತೆ ವಾಟ್ಸಾಪ್ ಮೇಲೆ ನಿರ್ಬಂಧ ವಿಧಿಸುವಂತೆ ದೆಹಲಿ ಹೈಕೋರ್ಟ್ಗೆ ಕೇಂದ್ರ ಸರ್ಕಾರ ಮನವಿ ಮಾಡಿದೆ. ವಾಟ್ಸಾಪ್ನ ನೀತಿಗೆ ತಡೆಯಾಜ್ಞೆ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೋರ್ಟ್ ಮುಂದೆ ಬಾಕಿ ಇದೆ. ಹೀಗಾಗಿ ಅದನ್ನು ನಿರ್ಬಂಧಿಸುವುದು ಸೂಕ್ತ ಎಂದು ಸರ್ಕಾರ ಹೇಳಿದೆ.
ವಾಟ್ಸಾಪ್ನ ಉದ್ದೇಶಿತ ಖಾಸಗಿತನದ ನೀತಿಯು 2011ರ ಐಟಿ ಕಾಯ್ದೆಯನ್ನು ಉಲ್ಲಂಘಿಸುತ್ತದೆ. ಯಾವ ರೀತಿಯ ಸೂಕ್ಷ್ಮ ದಾಖಲೆಗಳನ್ನು ಸಂಗ್ರಹಿಸಲಾಗುತ್ತದೆ, ಪರಾಮರ್ಶೆಯ ಆಯ್ಕೆ ನೀಡುತ್ತದೆ ಅಥವಾ ಮಾಹಿತಿ ತಿದ್ದುಪಡಿ ಅಥವಾ ಸಮ್ಮತಿ ಹಿಂಪಡೆಯುವ ಹಾಗೂ ಮೂರನೇ ವ್ಯಕ್ತಿಗಳಿಗೆ ಮಾಹಿತಿಗಳನ್ನು ಹಂಚಿಕೊಳ್ಳುವ ಕುರಿತು ನಿರ್ದಿಷ್ಟವಾಗಿ ವಿವರಿಸುವಲ್ಲಿ ವಾಟ್ಸಾಪ್ ಖಾಸಗಿ ನೀತಿ ವಿಫಲವಾಗಿದೆ ಎಂದು ಸರ್ಕಾರ ತಿಳಿಸಿದೆ.
ಕೇಂದ್ರ ಸರ್ಕಾರವು 2019ರಲ್ಲಿ ವೈಯಕ್ತಿಕ ದತ್ತಾಂಶ ಸಂರಕ್ಷಣೆ ಮಸೂದೆಯನ್ನು ಲೋಕಸಭೆಯಲ್ಲಿ ಪರಿಚಯಿಸಿದೆ. ಅದರ ಪ್ರಕಾರ, ವಾಟ್ಸಾಪ್ನಂತಹ ಸಂಸ್ಥೆಗಳ ಅಧಿಕಾರವನ್ನು ಸೀಮಿತಗೊಳಿಸಲಿದ್ದು, ಅವು ಸೂಕ್ತ ಭದ್ರತಾ ಗುಣಮಟ್ಟ ಮತ್ತು ದತ್ತಾಂಶ ರಕ್ಷಣೆಗೆ ಬದ್ಧವಾಗದ ಖಾಸಗಿತನದ ನೀತಿಗಳನ್ನು ಹೊರಡಿಸುವುದನ್ನು ನಿರ್ಬಂಧಿಸುತ್ತದೆ ಎಂದು ಮಾಹಿತಿ ನೀಡಿದೆ.

ಈ ಮಸೂದೆಯನ್ನು ಅಂಗೀಕರಿಸುವುದು ಬಾಕಿ ಇದೆ. ಜತೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಮತ್ತು ದತ್ತಾಂಶ ರಕ್ಷಣೆ ವಿಚಾರವಾಗಿ ರೂಪಿಸಲಾದ ನಿಯಮಗಳನ್ನು ಕಂಪೆನಿಗಳು ಪಾಲಿಸಬೇಕು ಎಂದು ಕೇಂದ್ರ ಹೇಳಿದೆ.
ನೋಯ್ಡಾದ ಡಾ. ಸೀಮಾ ಸಿಂಗ್, ದೆಹಲಿ ನಿವಾಸಿಗಳಾದ ಮೇಘನ್ ಮತ್ತು ವಿಕ್ರಮ್ ಸಿಂಗ್ ಅವರು ನಾಗರಿಕದ ಖಾಸಗಿತನದ ರಕ್ಷಣೆಗಾಗಿ ವಾಟ್ಸಾಪ್ ನೀತಿ ವಿರುದ್ಧ ಪಿಐಎಲ್ ಸಲ್ಲಿಸಿದ್ದಾರೆ.












Click it and Unblock the Notifications