ದೇಶದ 3 ಕೋಟಿ ಜನರಿಗೆ ಸೂರು ಒದಗಿಸಲು ಯೋಜನೆ
ನವದೆಹಲಿ, ಡಿ. 10: ಜಗತ್ತಿನ ಟಾಪ್ 100 ಬಿಲಿಯನೇರ್ಗಳ ಪಟ್ಟಿಯಲ್ಲಿ ಆರು ಭಾರತೀಯರು ಸ್ಥಾನ ಪಡೆದಿರಬಹುದು. ಆದರೆ, ದೇಶದಲ್ಲಿನ್ನೂ ಮೂರು ಕೋಟಿಗೂ ಹೆಚ್ಚು ಜನರಿಗೆ ಸೂರು ಕೂಡ ಇಲ್ಲ ಎಂಬುದು ಕಟು ವಾಸ್ತವ.
ಇವರೆಲ್ಲರಿಗೂ ಸೂರು ಒದಗಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಬೃಹತ್ ಯೋಜನೆಯೊಂದನ್ನು ರೂಪಿಸಿದೆ. ಈ ಕುರಿತು ಬುಧವಾರ ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಮಾಹಿತಿ ನೀಡಿದ್ದಾರೆ. [ಗೃಹಬಳಕೆ ಅಡುಗೆ ಅನಿಲ 5 ಕೆಜಿಯಲ್ಲೂ ಲಭ್ಯ]
ಪ್ರಸ್ತಾವನೆಯನ್ನು ಶೀಘ್ರ ಕೇಂದ್ರ ಸಂಪುಟ ಸಭೆಯಲ್ಲಿ ಅನುಮೋದನೆಗಾಗಿ ಮಂಡಿಸಲಾಗುವುದು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2022ರ ಹೊತ್ತಿಗೆ ದೇಶದ ಎಲ್ಲ ನಾಗರಿಕರಿಗೂ ಸೂರು ಒದಗಿಸಲು ನಿರ್ಧರಿಸಿದೆ ಎಂದು ತಿಳಿಸಿದರು.
ಇದರ ಜೊತೆಯಲ್ಲಿ ನಗರದಲ್ಲಿನ ಬಡವರಿಗಾಗಿ ಸಮಗ್ರ ವಸತಿ ಯೋಜನೆ ಜಾರಿಗೆ ತರಲಾಗಿದೆ. ಖಾಸಗಿ ವಲಯಕ್ಕೂ ಇದರಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ. ಇಂತಹ ಯೋಜನೆಗಳಲ್ಲಿ ಖಾಸಗಿ ವಲಯದವರಿಗೂ ಭಾಗವಹಿಸಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು. [ಹಿರಿಯ ನಾಗರಿಕರಿಗೆ ಸೌಲಭ್ಯಗಳು]
ಕೊಳಗೇರಿ ಪುನರ್ವಸತಿಗೆ ಯೋಜನೆ: ತಮಿಳುನಾಡು, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳ ಮಾದರಿಯಲ್ಲಿ ದೇಶದೆಲ್ಲೆಡೆ ಕೊಳಗೇರಿ ಪುನರ್ವಸತಿ ಅಭಿವೃದ್ಧಿ ಯೋಜನೆ ಜಾರಿಗೆ ತರಲಾಗುವುದು ಎಂದು ವೆಂಕಯ್ಯ ನಾಯ್ಡು ತಿಳಿಸಿದರು.
ಸ್ಲಂ ಪ್ರದೇಶಗಳ ನಿವಾಸಿಗಳಿಗೆ ಅವರು ಅತಿಕ್ರಮಣ ಮಾಡಿಕೊಂಡು ವಾಸಿಸುತ್ತಿರುವ ಸ್ಥಳದಲ್ಲಿಯೇ ಉಚಿತ ಮನೆಗಳನ್ನು ನಿರ್ಮಿಸಿ ನೀಡಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು, ಖಾಸಗಿ ವಲಯವನ್ನೂ ಈ ಅಭಿವೃದ್ಧಿ ಕಾರ್ಯದಲ್ಲಿ ಸೇರಿಸಿಕೊಳ್ಳಲಾಗುವುದು ಎಂದರು. [ನೆಹರು-ಗಾಂಧಿ ಹೆಸರಲ್ಲಿ 441 ಯೋಜನೆಗಳು]
ಚಳಿಗಾಲದಲ್ಲಿ ವಸತಿ ರಹಿತರಿಗೆ ಆಶ್ರಯ ಕಲ್ಪಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದು ಹೇಳಿದರು. [ಬಿಜೆಪಿ ಸರ್ಕಾರದ ಯೋಜನೆಗಳಿಗೆ ಅಭಯ]
ಗ್ರಾಮಗಳಲ್ಲಿ ಮೂಲಸೌಲಭ್ಯ: ಗ್ರಾಮೀಣ ಜನರಿಗೆ ವಿದ್ಯುತ್, ನೀರು, ನೀರಾವರಿ ಮತ್ತು ಸೂರು ಒದಗಿಸಲು ಕೇಂದ್ರ ಸರ್ಕಾರವು ದೀರ್ಘ ಕಾಲದ ಯೋಜನೆಯನ್ನು ತಯಾರಿಸಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಅಭಿವೃದ್ಧಿ ಸಚಿವಾಲಯವು ಈಗಾಗಲೇ ಕಾರ್ಯನಿರತವಾಗಿದೆ ಎಂದು ವೆಂಕಯ್ಯ ನಾಯ್ಡು ತಿಳಿಸಿದರು.