ಸಿಬಿಐ ಪ್ರಕರಣ: ಕಾಂಗ್ರೆಸ್ ನಿಂದ ಅ.26 ರಂದು ಬೃಹತ್ ಪ್ರತಿಭಟನೆ
ನವದೆಹಲಿ, ಅಕ್ಟೋಬರ್ 25: ಕೇಂದ್ರ ತನಿಖಾ ದಳ(ಸಿಬಿಐ)ದಲ್ಲಿ ನಡೆಯುತ್ತಿರುವ ಕೆಲ ಅನಪೇಕ್ಷಿತ ಬೆಳವಣಿಗೆಗಳ ವಿರುದ್ಧ ಅ.26, ಶುಕ್ರವಾರದಂದು ಪ್ರತಿಭಟನೆ ನಡೆಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.
ಶುಕ್ರವಾರದಂದು ನವದೆಹಲಿಯ ಸಿಬಿಐ ಕೇಂದ್ರ ಕಚೇರಿ ಎದುರು ಕೇಂದ್ರ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಲಿದ್ದರೆ, ಆಯಾ ರಾಜ್ಯಗಳ ಸಿಬಿಐ ಕಚೇರಿ ಎದುರು ರಾಜ್ಯ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ. ದೇಶದಾದ್ಯಂತ ಪ್ರತಿಭಟನೆ ನಡೆಯಲಿದೆ ಎಂದು ಕಾಂಗ್ರೆಸ್ ಹೇಳಿದೆ.

ಸಿಬಿಐ ನಿರ್ದೇಶಕರು ಮತ್ತು ಆಯಕಟ್ಟಿನ ಹುದ್ದೆಯಲ್ಲಿರುವ ಅಧಿಕಾರಿಗಳ ವಿರುದ್ಧ ಕೇಳಿಬಂದ ಭ್ರಷ್ಟಾಚಾರ ಆರೋಪದಿಂದಾಗಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನ ಅವರನ್ನು ರಜೆಯ ಮೇಲೆ ಕಳಿಸಲಾಗಿದ್ದು, ನಾಗೇಶ್ವರ್ ರಾವ್ ಅವರನ್ನು ಹಂಗಾಮಿ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ.
ದೇಶದ ಇತಿಹಾಸದಲ್ಲೇ ಇದೊಂದು ತೀರಾ ಮುಜುಗರಕ್ಕೀಡುಮಾಡುವ ಘಟನೆಯಾಗಿದ್ದು, ಚುನಾವಣೆಯ ಹೊತ್ತಲ್ಲಿ ಯಾವುದೇ ಅಪವಾದ ಹೊತ್ತುಕೊಳ್ಳಲು ಸಿದ್ಧವಿಲ್ಲದ ಕೇಂದ್ರ ಸರ್ಕಾರ ಮುಲಾಜಿಲ್ಲದೆ ಇಬ್ಬರು ಅಧಿಕಾರಿಗಳನ್ನೂ ಮತ್ತು ಸಿಬಿಐ ನ ಇತರ ಮೇಲಧಿಕಾರಿಗಳನ್ನೂ ರಜೆಯ ಮೇಲೆ ಕಳಿಸಿದೆ.
ಆದರೆ ಸಿಬಿಐ ನಿರ್ದೇಶಕರಿಗೆ ರಜೆ ಕೊಟ್ಟು ಕಳಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ವಕೀಲ ನ್ಯಾ.ಪ್ರಶಾಂತ್ ಭೂಷಣ್ ಹೇಳಿದ್ದಾರೆ.












Click it and Unblock the Notifications