ಕಿಚ್ಚು ಹಚ್ಚಿದ ಸಿಬಿಐ ದಾಳಿ, ಪ್ರಮುಖ ಘಟನಾವಳಿ
ನವದೆಹಲಿ, ಡಿಸೆಂಬರ್, 15: ರಾಹುಲ್ ಗಾಂಧಿ ಹೇಳಿದ್ದ 'ದ್ವೇಷದ ರಾಜಕಾರಣ' ಎಂಬ ಪದವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪುನರುಚ್ಚಾರ ಮಾಡಿದ್ದಾರೆ. ಆದರೆ ಪರಿಸ್ಥಿತಿ ಸ್ವಲ್ಪ ಬೇರೆ, ಬೇರೆ.
ಸಿಬಿಐ ಅಧಿಕಾರಿಗಳು ನನ್ನ ಕಚೇರಿ ಮೇಲೆ ದಾಳಿ ಮಾಡಿದ್ದಾರೆ ಎಂದು ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದು , ಮೋದಿ ಅವರಿಗೆ ಯಾವ ಫೈಲ್ ಬೇಕು? ಎಂದು ಟ್ವಿಟ್ಟರ್ ನಲ್ಲಿ ಆಕ್ರೋಶಭರಿತರಾಗಿ ಪ್ರಶ್ನೆ ಕೇಳಿದ್ದಾರೆ. ಮೋದಿ ಒಬ್ಬ ಸ್ವಾರ್ಥಿ ಎಂದು ಹೀಗಳೆದಿದ್ದಾರೆ.[ಅರವಿಂದ್ ಕೇಜ್ರಿವಾಲ್ ಕಚೇರಿ ಮೇಲೆ ಸಿಬಿಐ ದಾಳಿ]
ಇದಕ್ಕೆ ನಾಗರಿಕರು ಸಾಮಾಜಿಕ ಜಾಲತಾಣದ ಮುಖೇನ ಉತ್ತರ ನೀಡುತ್ತಿದ್ದಾರೆ. ಒಂದು ವೇಳೆ ದಾಳಿ ನಡೆದಿದ್ದರೂ ಕ್ಲೀನ್ ಮ್ಯಾನ್ ಏಕೆ ಹೆದರಬೇಕು? ಎಂಬ ಪ್ರತಿಪ್ರಶ್ನೆ ಹಾಕುತ್ತಿದ್ದಾರೆ. ಮತ್ತೊಂದು ವಿವಾದ, ಪರ ವಿರೋಧದ ಚರ್ಚೆಗೆ ಮಂಗಳವಾರ ಬೆಳ್ಳಂಬೆಳಗ್ಗೆ ದೆಹಲಿಯಲ್ಲಿ ನಡೆದ ಸಿಬಿಐ ದಾಳಿ ಪ್ರಕರಣ ವೇದಿಕೆ ಕಲ್ಪಿಸಿರುವುದು ಸುಳ್ಳಲ್ಲ.[ಅರವಿಂದ್ vs ಮೋದಿ ಟ್ರೆಂಡಿಂಗ್, ಬಿಸಿ ಬಿಸಿ ಚರ್ಚೆ]

ಕೇಜ್ರಿ ಕೆಂಡಾಮಂಡಲ
ಸಿಬಿಐ ಮೂಲಕ ಮೋದಿ ನನ್ನ ಮೇಲೆ ಹಗೆತನ ಸಾಧಿಸುತ್ತಿದ್ದಾರೆ. ರಾಜಕೀಯವಾಗಿ ನನ್ನನ್ನು ಕಟ್ಟಿಹಾಕಲು ಸಾಧ್ಯವಾಗದವರು ವಾಮಮಾರ್ಗ ಹಿಡಿಯುತ್ತಿದ್ದಾರೆ ಎಂದು ಕೇಜ್ರಿವಾಲ್ ಮುಂಜಾನೆಯೇ ಟ್ವೀಟ್ ಮಾಡಿದ್ದರು.

ನಾವು ದಾಳಿ ಮಾಡಿಲ್ಲ
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಬಿಐ ಅಧಿಕಾರಿಗಳು ನಾವು ಕೇಜ್ರಿವಾಲ್ ಕಚೇರಿಯ ಮೇಲೆ ದಾಳಿ ಮಾಡಿಲ್ಲ. ಅದರ ಪಕ್ಕದಲ್ಲಿರುವ ಸಿಎಂ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರ ಕಚೇರ ಮೇಲೆ ದಾಳಿ ಮಾಡಿ ಕೆಲ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ದಾಖಲೆಗಳಿದ್ದರೆ ನನ್ನ ಬಳಿ ಬರಬಹುದಿತ್ತು
ಮಂತ್ರಿ ಮತ್ತು ಹಿರಿಯ ಅಧಿಕಾರಿಯೊಬ್ಬರ ಮೇಲೆ ನೇರವಾಗಿ ಸಿಬಿಐ ತನಿಖೆಗೆ ಆದೇಶ ನೀಡಿದವ ನಾನು. ರಾಜೇಂದ್ರ ಕುಮಾರ್ ವಿರುದ್ಧ ದಾಖಲೆಗಳಿದ್ದರೆ ನನ್ನ ಬಳಿ ಬರಬಹುದಿತ್ತು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಆರೋಪ ಮಾಡುವುದೊಂದು ಚಾಳಿ
ಸಿಬಿಐ ಒಂದು ಸ್ವತಂತ್ರ ಸಂಸ್ಥೆ, ಕೇಂದ್ರ ಸರ್ಕಾರದ ವಿರುದ್ಧ ಸಲ್ಲದ ಆರೋಪ ಮಾಡುವುದು ದೆಹಲಿ ಮಂತ್ರಿಗಳಿಗೆ ಚಾಳಿಯಾಗಿ ಮಾರ್ಪಟ್ಟಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ತಿರುಗೇಟು ನೀಡಿದ್ದಾರೆ.

ಮೋದಿ ಮೌನ
ಕೇರಳ ಪ್ರವಾಸ ಕೈಗೊಂಡಿರುವ ನರೇಂದ್ರ ಮೋದಿ ಸಿಬಿಐ ದಾಳಿ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಿಂದೆ ರಾಹುಲ್ ಗಾಂಧಿ ಆರೋಪಗಳ ಸುರಿಮಳೆ ಮಾಡಿದ್ದರೂ ಮೋದಿ ಮಾತನಾಡಿರಲಿಲ್ಲ.












Click it and Unblock the Notifications