ಕಾವೇರಿ ವಿವಾದ: ಸುಪ್ರೀಂ ಅಂತಿಮ ತೀರ್ಪು ಇಂದು?
ನವದೆಹಲಿ, ಫೆಬ್ರವರಿ 5 : ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂಕೋರ್ಟ್ ನಿಂದ ಇಂದು(ಫೆ.5 ) ಅಂತಿಮ ತೀರ್ಪು ಹೊರಬೀಳಲಿದೆ ಎನ್ನಲಾಗಿದ್ದು, ಜಿಲ್ಲೆಯಲ್ಲಿ ತಳಮಳ ಆರಂಭವಾಗಿದೆ. ರಾಜ್ಯಕ್ಕೆ ನ್ಯಾಯ ಸಿಗುವುದೇ ಎಂ ಆತಂಕ ಕಾಡಲಾರಂಭಿಸಿದೆ.
ಸುಪ್ರೀಂಕೋರ್ಟ್ ನಲ್ಲಿ ಸುದೀರ್ಘ ವಿಚಾರಣೆ ನಡೆದು 15 ದಿನಗಳ ಹಿಂದೆ ನಾಲ್ಕು ವಾರದಲ್ಲಿ ಅಂತಿಮ ತೀರ್ಪು ನೀಡುವುದಾಗಿ ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಫೆ.೫ರಂದು ತೀರ್ಪು ಹೊರಬೀಳಲಿದೆ ಎಂಬ ಮಾತುಗಳು ಕೇಳಿಬಂದಿದೆ.

ಕಾವೇರಿ ನೀರಿಗಾಗಿ ಹಲವು ವರ್ಷಗಳಿಂದ ಸಾಕಷ್ಟು ಹೋರಾಟ ಮಾಡಿಕೊಂಡು ಬಂದಿರುವ ಜಿಲ್ಲೆಯ ರೈತರು ಸಂಘಟನೆಗಳ ಮುಖಂಡರು ಈಗ ಸುಪ್ರೀಂ ಕೋರ್ಟ್ ತೀರ್ಪಿನತ್ತ ಚಿತ್ತ ಹರಿಸಿದ್ದು, ತೀರ್ಪು ಯಾರ ರೀತಿ ಬರಲಿದೆ ಎಂಬ ಆತಂಕದಲ್ಲಿದ್ದಾರೆ.
ಆದರೆ, ಈ ವರೆಗೆ ಸುಪ್ರೀಂಕೋರ್ಟ್ ನಿಂದ ಹೊರಬಿದ್ದಿದ್ದ ಮಧ್ಯಂತರ ತೀರ್ಪುಗಳು ಹಾಗೂ ಬರದ ನಡುವೆಯೂ ತಮಿಳುನಾಡಿಗೆ ನೀರು ಬಿಡುವಂತೆ ಬಂದ ಆದೇಶಗಳಿಂದ ಹಲವೆಡೆ ಭಯ ಕಾಡಲಾರಂಭಿಸಿದ್ದು, ಈ ಬಾರಿಯೂ ರಾಜ್ಯದ ವಿರುದ್ಧವಾಗಿ ಆದೇಶ ಬರುವುದೇ ಎನ್ನುವ ಭೀತಿ ಇದೆ.
ತೀರ್ಪಿಗೆ ಚುನಾವಣೆ ಅಡ್ಡಿ: ಮೂಲಗಳ ಪ್ರಕಾರ ಫೆ.5ರಂದು ತೀರ್ಪು ಹೊರಬೀಳುವ ಸಾಧ್ಯತೆಗಳು ಕಡಿಮೆ. ತೀರ್ಪು ಹೊರಬೀಳುವುದು ಖಚಿತವಾಗಿದ್ದಲ್ಲಿ ಜಿಲ್ಲಾ ಪೊಲೀಸ್ ಇಷ್ಟರಲ್ಲೇ ಹೈ ಅಲರ್ಟ್ ಆಗಿರುತ್ತಿತ್ತು.
ಆದರೆ ಎಲ್ಲಿಯೂ ಅಂತಹ ಲಕ್ಷಣಗಳು ಕಾಣುತ್ತಿಲ್ಲ.ಜತೆಗೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಮುಗಿದ ಬಳಿಕ ಸುಪ್ರೀಂಕೋರ್ಟ್ ಅಂತಿಮ ತೀರ್ಪು ನೀಡಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
ತೀರ್ಪು ರಾಜ್ಯಕ್ಕೆ ವ್ಯತಿರಿಕ್ತವಾಗಿ ಬಂದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಕಷ್ಟವಾಗಲಿದೆ ಎಂಬ ಕಾರಣಕ್ಕೆ ಮುಂದೂಡುವುದು ಅನಿವಾರ್ಯ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.












Click it and Unblock the Notifications