ಹೆಚ್ಚು ನೋಟು ಮುದ್ರಣವಾದರೆ ಕಳ್ಳ ಬೆಕ್ಕು ತಪ್ಪಿಸಿಕೊಳ್ಳುತ್ತೆ...
ಹೆಚ್ಚು ನೋಟುಗಳನ್ನು ಏಕೆ ಮುದ್ರಿಸುತ್ತಿಲ್ಲ ಎಂಬುದಕ್ಕೆ ಕೇಂದ್ರ ಸರಕಾರದ ಪರವಾಗಿ ಅಟಾರ್ನಿ ಜನರಲ್ ಉತ್ತರಿಸಿದ್ದಾರೆ. ಹೆಚ್ಚು ಹಣ ಸಿಗುವಂತಾದರೆ ಕಪ್ಪು ಹಣ ಇರುವವರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂಬುದು ಅವರ ಮಾತಿನ ಅರ್ಥ ಇದ್ದಂತಿದೆ.
ನವದೆಹಲಿ, ಡಿಸೆಂಬರ್ 10: ಕಪ್ಪುಹಣದ ವಿರುದ್ಧ ಹೋರಾಟದ ಭಾಗವಾಗಿ ಕೈಗೊಂಡ ನೋಟು ನಿಷೇಧದ ನಿರ್ಧಾರ ಸರಿಯಾದ ಹಾದಿಯಲ್ಲಿದೆ ಎಂಬುದನ್ನು ಕೇಂದ್ರ ಸರಕಾರ ಮತ್ತೊಮ್ಮೆ ಸಮರ್ಥನೆ ಮಾಡಿಕೊಂಡಿದೆ. ಕೇಂದ್ರವನ್ನು ಪ್ರತಿನಿಧಿಸಿದ್ದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ, ಈಗ ತುಂಬ ಜಾಸ್ತಿ ನೋಟುಗಳನ್ನು ಮುದ್ರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದಾರೆ.
ಶೇ 86ರಷ್ಟು ಚಲಾವಣೆಯಲ್ಲಿದ್ದ 500, 1000 ನೋಟುಗಳನ್ನು ಅಮಾನ್ಯ ಮಾಡಿದ ನಂತರ ಏಕೆ ಹೆಚ್ಚಿನ ನೋಟುಗಳನ್ನು ಮುದ್ರಿಸುತ್ತಿಲ್ಲ ಎಂಬ ಪ್ರಶ್ನೆಗೆ, ನಾವೀಗ ಹೆಚ್ಚು ನೋಟುಗಳನ್ನು ಮುದ್ರಿಸಿದರೆ ಬಂದಿಯಾಗಿರುವ ಕಳ್ಳ ಬೆಕ್ಕು ತಪ್ಪಿಸಿಕೊಂಡು ಬಿಡುತ್ತೆ ಎಂದು ಅಟಾರ್ನಿ ಜನರಲ್ ವಿವರಣೆ ನೀಡಿದ್ದಾರೆ.[ನೋಟು ನಿಷೇಧ: ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ]

ಪೂರ್ತಿಯಾಗಿ ಹೊಸ ನೋಟನ್ನು ಹಳೆಯದಷ್ಟಕ್ಕೆ ಸಮನಾಗಿ ಮುದ್ರಿಸಿಲ್ಲ. ಏಕೆಂದರೆ, ಹಾಗೆ ಮಾಡೋದರಿಂದ ನಾವು ಕಟ್ಟಿಹಾಕಲು ನೋಡುತ್ತಿರುವ ಕಳ್ಳ ಬೆಕ್ಕು ತಪ್ಪಿಸಿಕೊಂಡು ಬಿಡುತ್ತದೆ. ಜನರ ಕಷ್ಟ, ತೊಂದರೆಗಳನ್ನು ತಪ್ಪಿಸುವುದಕ್ಕೆ ಏನು ಮಾಡಬೇಕೋ ಅವೆಲ್ಲವನ್ನೂ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಗ್ರಾಹಕರಿಗೆ ಬ್ಯಾಂಕ್ ಗಳು ನೀಡುವ ಹಣದ ಕನಿಷ್ಠ ಮಿತಿಯನ್ನು ನಿಗದಿಪಡಿಸುವಂತೆ ಕೋರ್ಟ್ ನೀಡಿದ ಸಲಹೆಗೂ ಅಟಾರ್ನಿ ಜನರಲ್ ವಿರೋಧ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಕೋ ಅಪರೇಟಿವ್ ಬ್ಯಾಂಕ್ ಗಳು ಠೇವಣಿ ಸ್ವೀಕರಿಸಲು ಅವಕಾಶ ನೀಡುವುದಕ್ಕೂ ಕೇಂದ್ರ ಸರಕಾರ ವಿರೋಧ ವ್ಯಕ್ತಪಡಿಸಿದೆ.['ನೋಟು ರದ್ದು ಮಾಡಿದ್ದರಿಂದ ಕಪ್ಪು ಹಣ ಬಯಲಾಯಿತು ಸುಪ್ರೀಂ']
ಇಂಥ ನಿರ್ಧಾರ ಹಣಕಾಸು ನೀತಿ ಅಡಿಯಲ್ಲಿ ಬರುತ್ತದೆ. ಈ ಬಗ್ಗೆ ಕೂಡ ಕೋರ್ಟ್ ತೀರ್ಮಾನ ಮಾಡುತ್ತದಾ ಎಂದು ಅಟಾರ್ನಿ ಜನರಲ್ ಪ್ರಶ್ನಿಸಿದರು. ಹಣಕಾಸು ನೀತಿ ಬಗ್ಗೆ ಕೋರ್ಟ್ ನಿರ್ದೇಶಿಸಿದರೆ ಆಗ ನ್ಯಾಯಾಂಗದ ಪರಿಶೀಲನೆ ಪ್ರಶ್ನೆ ಉದ್ಭವಿಸುತ್ತದೆ ಎಂದು ಕೂಡ ಹೇಳಿದ್ದಾರೆ.
ಎಲ್ಲಕ್ಕೂ ಉತ್ತರ ಎಂಬಂತೆ ಕೋರ್ಟ್, ನೀವು ಇಡೀ ದೇಶವನ್ನೇ ಅಲುಗಾಡಿಸಿದ್ದೀರಿ. ಇದರಿಂದ ಜನರನ್ನು ತೊಂದರೆಗೆ ಸಿಲುಕಿಸಿಲ್ಲ ಎಂಬುದನ್ನು ಖಂಡಿತವಾಗಿ ಖಾತ್ರಿಪಡಿಸಬೇಕು ಎಂದು ಸೂಚಿಸಿದೆ.












Click it and Unblock the Notifications